ವಿದ್ಯಾಗಿರಿ, ಮೂಡುಬಿದಿರೆ: ‘ನಿಷ್ಪಕ್ಷಪಾತವಾಗಿ ಬದ್ಧತೆ- ಕಾಳಜಿಯಿಂದ ಬರೆಯುವುದೇ ಪತ್ರಿಕೋದ್ಯಮ’ ಎಂದು ಕಾರ್ಕಳ ಕನ್ನಡಪ್ರಭ ವರದಿಗಾರ ರಾಂ ಅಜೆಕಾರು ಹೇಳಿದರು. ಆಳ್ವಾಸ್ ಕಾಲೇಜು ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಸೋಮವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. 

ಸುದ್ದಿಯ ವೈಭವೀಕರಣ ಸಲ್ಲದು. ಸುದ್ದಿ ಸಕಾರಾತ್ಮಕ ಬದಲಾವಣೆಗೆ ಒತ್ತು ನೀಡಬೇಕು. ಅದು ಮನಸ್ಸಿಗೆ ನೆಮ್ಮದಿ, ಸೌಹಾರ್ದತೆ ಸೃಷ್ಟಿಸಬೇಕು ಎಂದ ಅವರು,   ಜನಪ್ರಿಯರ ಬಗ್ಗೆ ಬರೆಯುವ ಬದಲು ಹಳ್ಳಿಗರ ಬದುಕು, ಸಮಸ್ಯೆಗಳಲ್ಲಿ ಇರುವವರ ಸುದ್ದಿ ಮಾಡಬೇಕು ಎಂದರು.   

ಜನರಲ್ಲಿ ಪರಿಸರ ಪ್ರಜ್ಞೆ ಅಗತ್ಯ. ಮರ ಕಡಿಯುವುದು ಕೊನೆ ಗಾಣಬೇಕು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಪರಿಸರದ ಸೌಂದರ್ಯ ಮನೋಲ್ಲಾಸ ತರುತ್ತದೆ. ಅದನ್ನು ಅನುಭವಿಸಲು ನಾವೆಲ್ಲರೂ ಅರ್ಹರು. ಆದರೆ ಪರಿಸರಕ್ಕೆ ಕೇಡು ಮಾಡುವ ಹಕ್ಕು ಯಾರಿಗೂ ಇಲ್ಲ ಎಂದರು. ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಅಭಿವ್ಯಕ್ತಿ ವೇದಿಕೆ ವಿದ್ಯಾರ್ಥಿ ಸಂಯೋಜಕಿ ದಿಶಾ ಗೌಡ ಇದ್ದರು. ವಿದ್ಯಾರ್ಥಿ ಚಿದಾನಂದ ರುದ್ರಾಪೂರಮಠ ನಿರೂಪಿಸಿದರು.