ಉಡುಪಿ,(ಆಗಸ್ಟ್, 24): ಜಿಲ್ಲೆಯಲ್ಲಿ ಅಂಗವಿಕಲರ ನೋವಿಗೆ ಅತ್ಯಂತ ಸಕ್ರಿಯವಾಗಿ ಸ್ಪಂದಿಸುವ ಕರ‍್ಯವು ಅಂಗವಿಕಲರ ಕಲ್ಯಾಣ  ಇಲಾಖೆಯ ವತಿಯಿಂದ ನಡೆಯುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.

    ಅವರು ಸೋಮವಾರ ವಿವೇಕಾನಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜ್ಜರಕಾಡುನಲ್ಲಿ ಆಯೋಜಿಸಿದ ಎಮ್.ಆರ್.ಪಿ.ಎಲ್ ನ ಸಿ.ಎಸ್.ಆರ್ ನಿಧಿಯ ಧನ ಸಹಾಯದಿಂದ ಅಲಿಮ್ಕೋ ಎಸಿಸಿ, ಬೆಂಗಳೂರು ಇವರ ಮುಖಾಂತರ ಹಾಗೂ ಉಡುಪಿ  ಜಿಲ್ಲಾಡಳಿತ. ಜಿಲ್ಲಾ ಅಂಗವಿಕಲರ  ಕಲ್ಯಾಣ ಇಲಾಖೆ, ಅಂಗವಿಕಲರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಸಹಯೋಗದೊಂದಿಗೆ ನಡೆದ ಉಡುಪಿ ಜಿಲ್ಲಾ ವ್ಯಾಪ್ತಿಯ ಅಂಗವಿಕಲರಿಗೆ ದೈನಂದಿನ ಚಟುವಟಿಕೆಗಳಿಗೆ ಪೂರಕವಾದ ಸಾಧನ ಸಲಕರಣೆಯನ್ನು ವಿತರಿಸಿ ಮಾತನಾಡಿದರು.

     ಶ್ರವಣ ಸಾಧನ, ಕೃತಕ ಕಾಲು, ಕ್ಯಾಲಿಪರ್, ಮೊಣಕೈ ಊರುಗೋಲು, ಕಂಕುಳ ದೊಣ್ಣೆ, ರೋಲೆಟರ್, ಊರುಗೋಲು, ಗಾಲಿ ಕುರ್ಚಿ, ಸಿ.ಪಿ.ಗಾಲಿ ಕುರ್ಚಿ, ತ್ರಿಚಕ್ರ ಸೈಕಲ್, ಸ್ಮಾರ್ಟ್ ಕೇನ್ ,ಸೆಲ್ ಫೋನ್, ಸ್ಮಾಟ್೯  ಫೋನ್ ಗಳನ್ನು ಸಾಂಕೇತಿಕವಾಗಿ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಫಲಾನುಭವಿಗಳಿಗೆ ವಿತರಿಸಿದರು.

     ಎಮ್.ಆರ್.ಪಿ.ಎಲ್‌ನ ಜಿ.ಎಮ್ ಸುಬ್ರಯ ಭಟ್ ಮಾತಾಡಿ ಕೃತಕ ಅಂಗಾoಗಗಳನ್ನು ನೀಡಲು ಅಲಿಮ್ಕೋದಿಂದ 2500 ಜನರಿಗೆ ನೀಡುವಂತೆ ಬೇಡಿಕೆ ಬಂದಿದ್ದು, ಅದರಲ್ಲಿ 4 ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಯಾದಗಿರಿ ಮತ್ತು ರಾಯಚೂರಿನ ಅಂಗವಿಕಲರಿಗೆ ಸಾಧನಗಳನ್ನು ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ.  ಉಡುಪಿ ಜಿಲ್ಲೆಯ ಒಟ್ಟು 512 ಫಲಾನುಭವಿಗಳು, ದಕ್ಷಿಣ ಕನ್ನಡ ಜಿಲ್ಲೆಗೆ 549, ರಾಯಚೂರಿಗೆ 990 ಹಾಗೂ ಯಾದಗಿರಿಯಲ್ಲಿ 506 ಫಲಾನುಭವಿಗಳಿಗೆ ಸಲಕರಣೆಗಳನ್ನು ನೀಡಲು 2.50 ಕೋಟಿಯಷ್ಟು  ಅನುದಾನವನ್ನು ನೀಡಲಾಗಿದೆ. ಈಗಾಗಲೇ ಉಡುಪಿ- ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಲಕರಣೆಗಳನ್ನು ನೀಡುವ ಸಿದ್ಧತೆ ಮಾಡಲಾಗಿದ್ದು ಉಳಿದೆರಡು ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಕರ‍್ಯಕ್ರಮವನ್ನು ಆಯೋಜಿಸಿ ಅಂಗವಿಕಲ ಸಾಧನ-ಸಲಕರಣೆಗಳನ್ನು ನೀಡಲಾಗುವುದು ಎಂದರು.

    ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರ ನಾಯ್ಕ್ ಪ್ರಾಸ್ತಾವಿಕ ಮಾತನಾಡಿ ವಿಕಲತೆ ಒಂದು ಶಾಪವಲ್ಲ, ವಿಕಲತೆಯನ್ನು ಎದುರಿಸಿ ಜೀವನವನ್ನು ತನ್ನದೇ ಆದಂತಹ ರೀತಿಯಲ್ಲಿ ರೂಢಿಸಿಕೊಂಡಾಗ ಅಂಗವಿಕಲರು ಸಹ ಸಾಮಾನ್ಯರಂತೆ ಬದುಕಬಹುದು ಎಂದು ತಿಳಿಸಿದರು.

  ಕಾರ‍್ಯಕ್ರಮದಲ್ಲಿ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ಅಲಿಂಕೋ ಅಧಿಕಾರಿ ರವಿಶಂಕರ್, ಎಮ್.ಆರ್.ಪಿ.ಎಲ್ ನ ಅಧಿಕಾರಿ ಬಾಲಸುಬ್ರಮಣ್ಯಂ, ಉಡುಪಿ ತಾಲೂಕು ಪಂಚಾಯತ್‌ನ ಸದಸ್ಯ ಸುಭಾಶ್ ನಾಯ್ಡು ಹಾಗೂ ಫಲಾನುಭವಿಗಳು, ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ‍್ಯಕ್ರಮದಲ್ಲಿ ಚಂದ್ರ ನಾಯ್ಕ್ ಸ್ವಾಗತಿಸಿ, ಮಧುಸೂದನ್ ನಿರ್ವಹಿಸಿದರು.