ಉಡುಪಿ,(ಅಕ್ಟೋಬರ್ 15): ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಆರೂರು ಗ್ರಾಮದ ಬಯಲು ರಂಗ ಮಂದಿರದಲ್ಲಿ ಗುರುವಾರ ರೈತ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ಇರುವ ತೊಡಕುಗಳು ಹಾಗೂ ಈ ತೊಡಕುಗಳ ನಿವಾರಣೆಗೆ ಮತ್ತು ಅದರ ಅಭಿವೃದ್ಧಿಗೆ ಪರ್ಯಾಯ ವ್ಯವಸ್ಥೆಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅವಶ್ಯಕತೆ, ಕೃಷಿ ಉಪಕಸುಬುಗಳ ಅಳವಡಿಕೆ, ಪಶುಸಂಗೋಪನೆಯ ಮಹತ್ವದ ಜೊತೆಗೆ ಭಾರತೀಯ ಹೆಣ್ಣು ಮಕ್ಕಳ ಧೈರ್ಯ ಹಾಗೂ ಶಕ್ತಿಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ತಾಲೂಕು ಪಂಚಾಯತ್ ಸದಸ್ಯೆ ನಳಿನಿ ಪ್ರದೀಪ್ ರಾವ್, ಮಾತನಾಡಿ, ಮಹಿಳೆಯರು ಕೃಷಿಯಲ್ಲಿ ಯಾವ ರೀತಿಯಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಹಾಗೂ ಮನೆಯಲ್ಲಿರುವ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಮಾಡಿ ಪರಿಸರವನನ್ನು ತ್ಯಾಜ್ಯ ಮುಕ್ತವಾಗಿಸಬೇಕು ಎಂದು ಕರೆ ನೀಡಿದರು.
ಬ್ರಹ್ಮಾವರ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಲೀಲಾವತಿ ಮಾತನಾಡಿ, ವಾಣಿಜ್ಯಕರಣದಿಂದಾಗಿ ಕೃಷಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ಮನೆಯಲ್ಲಿ ಪೌಷ್ಠಿಕ ಕೈತೋಟವನ್ನು ಅಳವಡಿಸಿಕೊಳ್ಳಿ ಎಂದು ಉತ್ತೇಜಿಸಿದರು.
ಆರೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಗುರುರಾಜ್, ಪೇತ್ರಿ ವಲಯ ಅಂಗನವಾಡಿ ಮೇಲ್ವಿಚಾರಕಿ ವನಿತಾ ಎಸ್ ಹೆಗ್ಡೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ ಧನಂಜಯ ಸ್ವಾಗತಿಸಿದರು. ಡಾ. ಸಚಿನ್ ಯು.ಎಸ್ ನಿರೂಪಿಸಿದರು. ಡಾ. ಜಯಪ್ರಕಾಶ್ ವಂದಿಸಿದರು. ಕಾರ್ಯಕ್ರಮದಲ್ಲಿ 50 ಮಂದಿ ರೈತ ಮಹಿಳೆಯರು ಭಾಗವಹಿಸಿದ್ದರು