ಮುಂಬಯಿ, ಎ.02: ಕೊರೋನಾ ಮುಕ್ತ ರಾಷ್ಟ್ರದ ಉದ್ದೇಶವನ್ನಿರಿಸಿ ಕೊರೋನಾ ಸೋಂಕಿತರಿಂದ ರಕ್ಷಿಸಲು ಸಾಮಾಜಿಕ ಅಂತರ ಕಾಪಾಡಲು ದೇಶದಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಆ ನಿಮಿತ್ತ ಸರಕಾರಗಳು ಲಾಕ್‍ಡೌನ್ ಜಾರಿ ತಂದ ಹಿನ್ನಲೆಯಲ್ಲಿ ಯಾವೊತ್ತೂ ನಿದ್ರಿಸದ ಮಹಾನಗದ ಎಂದೇ ಹೆಸರಾಂತ ಬೃಹನ್ಮುಂಬಯಿ ಈ ಹಿಂದೆ ಎಂದೆಂದೂ ದಿನಪೂರ್ತಿ ಬಂದ್ ಕಾಣದಿದ್ದು, ಈಗ ಸದ್ದಿಲ್ಲದೆ ಸ್ಮಶನಾ ಮೌನವಾಗಿದೆ.

ಜನದಟ್ಟಣೆ, ವಿಮಾನ, ರೈಲು, ವಾಹನಗಳ ಸದ್ದಿನ ಮಧ್ಯೆಯೂ ಹಗಳಿರುಲು ಬೀದಿಗಳನ್ನು ಸುತ್ತಾಡಿ ತನ್ನ ಆಸುಪಾಸಲ್ಲಿ ಅಪರಚಿತರಿಂದ ಕಾಯುತ್ತಿದ್ದ ಶ್ವಾನಗಳು ರಕ್ಷಣಾ ಕಾಯಕದಲ್ಲಿದ್ದವು. ಅವುಗಳಿಗೆ ಪ್ರಾಣಿದಯಾ ಸಂಸ್ಥೆಗಳ ಅಭಯವೂ ಬಲಿಷ್ಠವಾಗಿತ್ತು. ಆದರೆ ಇದೀಗ ಈ ಸಂಸ್ಥೆಗಳೂ ಮೌನವಾಗಿ ಉಳಿಯುವಂತಾಗಿ  ಮೂಕ ಪ್ರಾಣಿ, ಪಕ್ಷಿಗಳು ತಮ್ಮ ಮೂಕರೋಧನ ತಿಳಿಹೇಳಲಾಗದೆ ತಮ್ಮಷ್ಟಕ್ಕೇ ಕಣ್ಣೀರು ಹಾಕುವಂತಾಗಿದೆ. ನಗರದಾದ್ಯಂತ ಇದ್ದ ಮಾರುಕಟ್ಟೆಗಳನ್ನು ಸುತ್ತಾಡಿ ಉದರ ತುಂಬುತ್ತಿದ್ದ ಇವೆಲ್ಲವುಗಳು ಈಗ ತಮ್ಮ ಅಳಲನ್ನು ತೋಡಲಾಗದೆ ತಮ್ಮಷ್ಟಕ್ಕೆ ಬಿದ್ದು ಕೊಳ್ಳುವಂತಾಗಿದೆ.

ನಗರದ ಸಾವಿರಾರು ಸಂಖ್ಯೆಯ ಪಾರಿವಾಳಗಳು ಕೆಲವೊಂದು ಮಂದಿರ ಮಠಗಳನ್ನು ತಮ್ಮದೇ ಬಂಗಲೆಯನ್ನಾಗಿಸಿದರೆ ಮಾರುಕಟ್ಟೆಯ ಸುತ್ತಮುತ್ತ ಅದೆಷ್ಟೋ ಗಿಳಿ, ಗುಬ್ಬಚ್ಚಿ, ಹದ್ದು, ಗಿಡುಗ, ಕಾಗೆಗಳು ಸುತ್ತಾಡುತ್ತಾ ತಮ್ಮ ಹೊಟ್ಟೆಯನ್ನು ತುಂಬಿಸಿಕೊಂಡು ತಮ್ಮತಮ್ಮ ಪಾಲಿಗೆ ಯಜಮಾನರಂತೆ ಬದುಕುತಿದ್ದ ವು.  ಆದರೆ ಇವತ್ತು ಅವುಗಳ ಬದುಕು ಕೂಡಾ ಬರಿದಾಗಿದೆ. ಗಗನಚುಂಬಿ ಕಟ್ಟಡಗಳ ಮೇಲೆ, ಆಗಸದಲ್ಲಿ ಸುತ್ತಾಡುತ್ತಿದ್ದ ಹದ್ದು, ಗಿಡುಗಗಳು ಕಟ್ಟಡಗಳ ಛಾವಣಿ ಮೇಲೆಯೇ ಬಂದಿಳಿಯುವಂತಾಗಿದೆ. ಆದರೂ ಅಲ್ಲಿಇಲ್ಲಿನ ಪ್ರಾಣಿಪ್ರಿಯರು ತಮ್ಮ ಪಾಲಿನ ಒಪ್ಪೊತ್ತಿನ ಊಟೋಪಚಾರದ ಒಂದಿಷ್ಟನ್ನು ಬದಿಗಿರಿಸಿ ಇಂತಹ ಪ್ರಾಣಿಪಕ್ಷಿಗಳನ್ನು ರಕ್ಷಿಸುವ ಯತ್ನವನ್ನು ಮುಂದುವರಿಸಿದ್ದರೆ.  ಒಂದೆಡೆ ಜನತೆ ಕಂಗಲಾದಂತೆ ಈ ಪ್ರಾಣಿ ಪಕ್ಷಿಗಳೂ ಹಸಿವನ್ನು ನೀಗಿಸಲಾಗದೆ ಕನಿಷ್ಟ ಒಂದು ಬಿಸ್ಕತ್ತುಗಾಗಿಯೂ ಆಚೀಚೆ ಅಲೆದಾಡುವ ಜನರನ್ನು ಹಿಂಬಾಲಿಸಲಾರಂಭಿಸಿವೆ. ಅವುಗಳಿಗೂ ಹಸಿವು ಹಿಂಸೆಯನ್ನು ತಾಳುತ್ತಿವೆ.

ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ಸಂಸ್ಥಾಪಕ (ಬೆಳ್ತಂಗಡಿ ಮೂಲತಃ) ಎಸ್.ಕೆ ಉರ್ವಾಳ್ ಮತ್ತು ಪ್ರಫುಲ್ಲಾ ಎಸ್.ಕೆ ಉರ್ವಾಳ್ ಅವರ ಸೊಸೆ, ಐಐಟಿಸಿ ಸಂಸ್ಥೆಯ ನಿರ್ದೇಶಕಿ ರೀನಾ ವಿ. ಉರ್ವಾಳ್ ತನ್ನ ಪತಿ ವಿಕ್ರಾಂತ್ ಉರ್ವಾಳ್ ಅವರೊಂದಿಗೆ ಪೌಷ್ಟಿಕ ಆಹಾರ, ಬಿಸಿ ಹಾಲನ್ನು ಸಿದ್ಧಪಡಿಸಿ ದೈನಂದಿನವಾಗಿ ಅಲೆಮಾರಿ ಮತ್ತು ಬೀದಿಗಳಲ್ಲಿನ ಶ್ವಾನಗಳಿಗೆ ನೀಡುತ್ತಾ ಅವುಗಳ ಪೋಷಣೆ ಮಾಡುತ್ತಿದ್ದಾರೆ. ಅದಲ್ಲದೆ ತಮ್ಮ ಕಾರುತುಂಬಾ ಆಹಾರ ದವಸಧಾನ್ಯ, ಕಾಳುಗಳನ್ನು ಹೊತ್ತೊಕೊಂಡು ನಗರದ ಅನೇಕ ರಸ್ತೆಗಳಲ್ಲಿನ ಪಾರಿವಾಳ, ಕಾಗೆ, ಗುಬ್ಬಚ್ಚಿ, ಪಕ್ಷಿಗಳಿಗೆ ನೀಡುತ್ತಾ ಪ್ರಾಣಿಪ್ರಿಯತೆ ಮೆರೆಯುತ್ತಾ ಮೂಕಪ್ರಾಣಿಗಳ ರೋಧನವನ್ನು ತಣಿಸುತ್ತಿದ್ದಾರೆ.