ಮಂಗಳೂರು : ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ನೀರು ಸಂಗ್ರಹಣಾ ಘಟಕ ಯೋಜನೆಯಡಿ ಸುಳ್ಯ ತಾಲೂಕಿನ ಬಳ್ಪ ನಿವಾಸಿ ಪಿ. ಕೃಷ್ಣ ಭಟ್ ಇವರು ನೀರಾವರಿ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಇಲಾಖಾ ಅಧಿಕಾರಿಗಳು ಇಲಾಖೆಯ ಸಹಾಯಧನದ ಮೂಲಕ ನೀರು ಸಂಗ್ರಹಣಾ ತೊಟ್ಟಿ ರಚನೆ ಮಾಡಿ ಬೇಸಿಗೆ ಕಾಲದಲ್ಲಿ ಕೃಷಿ ಭೂಮಿಯನ್ನು ಸುಸ್ಥಿತಿಯಲ್ಲಿ ಇಡಬಹುದೆಂಬ ಮಾಹಿತಿಯನ್ನು ನೀಡಿದರು.

ಅವರು ಇಲಾಖಾ ಮಾರ್ಗಸೂಚಿ ಅನ್ವಯ ಸುಮಾರು 20 * 20 * 3 ಮೀಟರ್ ಅಳತೆಯಲ್ಲಿ ಕೃಷಿ ಹೊಂಡ ಮಾಡಿ ಪ್ಲಾಸ್ಟಿಕ್ ಹೊದಿಕೆ ಹಾಕಿ ನೀರು ಸಂಗ್ರಹಣಾ ತೊಟ್ಟಿ ರಚಿಸಿದರು. ಇದಕ್ಕೆ ಶೇ. 50ರ ಸಹಾಯಧನದಂತೆ ರೂ. 67,094.00 ಗಳನ್ನು ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಸಹಾಯಧನವಾಗಿ ನೀಡಲಾಯಿತು. ಇಲಾಖಾವತಿಯಿಂದ ಅವರಿಗೆ ಆರ್ಥಿಕ ನೆರವು ದೊರೆಯಿತು.

ಸರ್ಕಾರ ನೀಡಿರುವ ಸಹಾಯಧನ ಮತ್ತು ಸ್ವಂತದ ಒಂದಿಷ್ಟು ಹಣ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದೇನೆ. 2018-19 ನೇ ಸಾಲಿನ ಬೇಸಿಗೆ (ಏಪ್ರಿಲ್-ಮೇ) ಯಲ್ಲಿ ಸುಳ್ಯ ತಾಲೂಕಿನಾದ್ಯಂತ ಬರದ ಪರಿಸ್ಥಿತಿ ಮೂಡಿದಾಗ ಸಹಾಯಧನದಡಿ ನಿರ್ಮಿಸಿದ ನೀರು ಸಂಗ್ರಹಣಾ ತೊಟ್ಟಿಯಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದ್ದ ಕಾರಣ ಬರದ ನಡುವೆಯೂ ಎರಡರಿಂದ ಮೂರು ಸಲ ತೋಟಕ್ಕೆ ನೀರು ಕೊಡಲು ಸಾಧ್ಯವಾಯಿತು. ಹಾಗಾಗಿ ಅಡಿಕೆ ಮತ್ತು ಕಾಳುಮೆಣಸು ತೋಟವು ಬರದ ನಡುವೆಯೇ ಹಸಿರುಮಯವಾಗಿ ಕಂಗೊಳಿಸುತ್ತಾ ಹೆಚ್ಚಿನ ಬೆಳವಣಿಗೆಯ ಆಶಾಭಾವನೆ ಮೂಡಿಸಿದೆ. ಈ ವರ್ಷದಲ್ಲಿ 30-50% ಅಧಿಕ ಇಳುವರಿ ಪಡೆಯಬಹುದೆಂದು ಆಶಾಭಾವನೆ ಮೂಡಿದೆ” ಎಂದು ಕೃಷ್ಣ ಭಟ್‍ರವರು ತಮ್ಮ ಅಭಿಪ್ರಾಯ ತಿಳಿಸಿರುತ್ತಾರೆ .