ಮಂಗಳೂರು : ವರ್ಷದಿಂದ ವರ್ಷಕ್ಕೆ ಲಿಂಗಾನುಪಾತ ಇಳಿಮುಖವಾಗುತ್ತಿದ್ದು, ಇದು ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಮಾರಕವಾಗಿದೆ. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಧಿಕಾರಿ ಉಸ್ಮಾನ್.ಎ ಹೇಳಿದರು.

ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ ಕಾರ್ಯಕ್ರಮದ ಸಮಾಲೋಚನೆಯಲ್ಲಿ ಮಾತನಾಡುತ್ತಾ ಬದಲಾವಣೆ ಎಂಬುದು ನಮ್ಮ ಕುಟುಂಬದಿಂದಲೇ ಆಗಬೇಕು. ಹೆಣ್ಣು ಭ್ರೂಣಹತ್ಯೆ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ. ಕುಸಿಯುತ್ತಿರುವ ಮಕ್ಕಳ ಲಿಂಗಾನುಪಾತವನ್ನು ಕಡಿಮೆ ಮಾಡುವುದು, ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವುದು, ಲಿಂಗ ಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟಬೇಕು ಎಂದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಾಮಾಜ ಸೇವಾ ವಿಭಾಗದ ಪ್ರಾಧ್ಯಾಪಕರಾದ ಡಾ. ಶೆರ್ಲಿ ಟಿ. ಬಾಬು ಅವರು ಸಮಾಲೋಚನೆಯಲ್ಲಿ ಮಾತನಾಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2001 ರಲ್ಲಿ 1022 ಇದ್ದ ಲಿಂಗಾನುಪಾತ 2011 ರಲ್ಲಿ 1020 ಕ್ಕೆ ಕುಸಿದಿದೆ ಹಾಗೂ 2001 ರಲ್ಲಿ 952 ಇದ್ದ 6 ವರ್ಷದೊಳಗಿನ ಮಕ್ಕಳ ಲಿಂಗಾನುಪಾತ 2011 ರಲ್ಲಿ 947 ಕ್ಕೆ ಕುಸಿದಿದೆ. ಅಂದರೆ ಪ್ರತಿ ಸಾವಿರ ಗಂಡು ಮಕ್ಕಳಿಗೆ 947 ಹೆಣ್ಣು ಮಕ್ಕಳು ಮಾತ್ರ ಇರುವುದು ಕಂಡುಬಂದಿದೆ. 2018-19ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ 5 ಜಿಲ್ಲೆಗಳನ್ನು "ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ" ಯೋಜನೆಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯೂ ಒಂದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪನಿರ್ದೇಶಕರಾದ ಸುಂದರ್ ಪೂಜಾರಿ ಬಲ್ಮಠ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಮ್ಯಾರಿಟನ್ ಜೆ. ಮಸ್ಕರೇನಸ್, ಸಾಮಾಜಿಕ ಕಾರ್ಯಕರ್ತೆ ಡಾ. ರೀಟಾ ನೊರಾನ್ಹ, ಉಪಸ್ಥಿತರಿದ್ದರು.