ಮಂಗಳೂರು ಡಿ. 8: ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 2ನೇ ವರ್ಷದ ಶಕ್ತಿ ಕುಟುಂಬ ಮಿಲನ ಹಾಗೂ ಆವಶ್ಯ ಫೌಂಡೇಶನ್ ಮುಂಬಯಿ ಸ್ಕಾಲರ್ಶಿಪ್ ವಿತರಣಾ ಕಾರ್ಯಕ್ರಮವು ರೇಷ್ಮಾ ಮೆಮೋರಿಯಲ್ ಆಡಿಟೋರಿಯಂ ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಕಾಶವಾಣಿ ಮಂಗಳೂರು ಇದರ ಉದ್ಘೋಷಕರು ಮತ್ತು ಲಯನ್ಸ್ ಕ್ಲಬ್ ಮಂಗಳೂರು ಇದರ ಮಾಜಿ ಅಧ್ಯಕ್ಷೆಯಾಗಿರುವ ಮಂಜುಳಾ ಶೆಟ್ಟಿ, ಆವಶ್ಯ ಫೌಂಡೇಶನ್ ಸಹಾಯಕ ವ್ಯವಸ್ಥಾಪಕ ಸವಿಸ್ತಾರ್ ಆಳ್ವ ಅವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.






ನಂತರ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರರಾಗಿರುವ ರಮೇಶ್ ಕೆ ಅವರು ಶಕ್ತಿ ವಿದ್ಯಾ ಸಂಸ್ಥೆಯು ಇಂದು ದೊಡ್ಡ ಪ್ರಮಾಣದಲ್ಲಿ ಹೆಸರು ವಾಸಿಯಾಗುತ್ತಿದೆ. ಕೇವಲ ಕರ್ನಾಟಕದ ಜಿಲ್ಲೆಗಳಿಂದ ಮಾತ್ರವಲ್ಲದೆ ನಮ್ಮ ನೆರೆ ರಾಜ್ಯಗಳಿಂದಲೂ ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೋಸ್ಕರ ಬರುತ್ತಿದ್ದಾರೆ. ಈ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಯಾಗಿರುವ ಡಾ. ಕೆ ಸಿ ನಾೈಕ್ ಅವರು ತನ್ನ 78 ನೇ ವಯಸ್ಸಿಗೆ ಒಂದು ಶಿಕ್ಷಣ ಸಂಸ್ಥೆಯನ್ನು ತೆರೆದು ಇಲ್ಲಿನ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ ಅಭಿವೃದ್ಧಿಗೋಸ್ಕರ ನಿರಂತರ ನವೋಲ್ಲಾಸದಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ. ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳಿಗೆ ಇವರು ಆಸರೆಯಾಗಿದ್ದಾರೆ.
ಶಕ್ತಿ ವಿದ್ಯಾಸಂಸ್ಥೆ ಭಾರತಿಯ ಸಂಸ್ಕೃತಿ ಮೌಲ್ಯಗಳೊಂದಿಗೆ ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಆ ಮೂಲಕ ಆ ಮಗು ದೇಶದ ಆಸ್ತಿಯಾಗಬೇಕೆಂಬುದು ಶಕ್ತಿ ವಿದ್ಯಾ ಸಂಸ್ಥೆಯ ಉದ್ದೇಶ. ಈ ಹಿನ್ನಲೆಯ ಒಳಗಡೆ ಶಕ್ತಿ ಕುಟುಂಬ ಮಿಲನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಆವಶ್ಯ ಫೌಂಡೇಶನ್ ಮುಂಬಯಿ ಇದೇ ಸಂದರ್ಭದಲ್ಲಿ 10 ಲಕ್ಷರೂ ಸ್ಕಾಲರ್ ಶಿಪ್ ನ್ನು ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಆಲ್ಕಾರ್ಗೊ ಸಂಸ್ಥೆ ಮಂಗಳೂರು ವಲಯ ಸಹಾಯಕ ವ್ಯವಸ್ಥಾಪಕರಾದ ಸವಿಸ್ತಾರ ಆಳ್ವ ಮಾತನಾಡಿ ಆವಶ್ಯ ಫೌಂಡೇಶನ್ ಮುಂಬೈ, ಶಕ್ತಿ ವಿದ್ಯಾ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿ ಸ್ಕಾಲರ್ ಶಿಪ್ ವಿತರಣೆ ಮಾಡಲು ಮಂಗಳೂರಿನಿಂದ ಮುಂಬೈ ಹೋಗಿ ಅಲ್ಲಿ ಆಲ್ಕಾರ್ಗೊ ಲಾಜಿಸ್ಟಿಕ್ಸ್ ಉದ್ಯಮ ಪ್ರಾರಂಭ ಮಾಡಿರುವ ಡಾ. ಶಶಿಕಿರಣ್ ಶೆಟ್ಟಿಯವರೇ ಕಾರಣ. ಅವರು ಪರಿಶ್ರಮ ಪಟ್ಟುಕಟ್ಟಿರುವ ಸಂಸ್ಥೆ ಇದು. ಜಗತ್ತಿನಾದ್ಯಂತ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಾವಿರಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಇನ್ನೊರ್ವ ಅತಿಥಿಗಳಾದ ಮಂಜುಳಾ ಶೆಟ್ಟಿ ಮಾತನಾಡಿಈ ವಿದ್ಯಾ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರುಕೂಡ ಈ ಶಕ್ತಿಯ ಕುಟುಂಬ. ಈ ಕುಟುಂದ ಸದಸ್ಯರಿಗೆ ಭವಿಷ್ಯದಲ್ಲಿ ಸಕಲ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂಬುದು ಕೆ ಸಿ ನಾೈಕ್ ಅವರ ಆಲೋಚನೆ. ಕುಟುಂಬ ಅಂದರೆ ಅತ್ಯಂತ ಸಣ್ಣದಾದ ಘಟಕ ವಾದರೂ ಅಷ್ಟೇ ಸಮಾಜದ ಪ್ರಾಮುಖ್ಯವಾದ ಅಂಶ. ನಮ್ಮ ವ್ಯಕ್ತಿತ್ವವನ್ನು ಹೊರ ಜಗತ್ತಿಗೆ ಪರಿಚಯಿಸುವುದರಲ್ಲಿ ಕುಟುಂಬದ ಪಾತ್ರ ದೊಡ್ಡದು. ಸ್ವಸ್ತ ಕುಟುಂಬದಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಕೌಟುಂಬಿಕ ಹಿನ್ನೆಲೆ ಸರಿ ಇಲ್ಲದಿದ್ದಾಗ ಅವರ ಜೊತೆ ವ್ಯವಹರಿಸಲು ನಾವು ಹಿಂದೇಟು ಹಾಕುತ್ತೇವೆ. ನಮಗೆ ನಮ್ಮ ಮನೆಯಿಂದ ನಮಗೆ ಏನೆಲ್ಲ ಸಂಸ್ಕಾರಗಳು ಸಿಗುತ್ತವೆಯೊ ಆ ಸಂಸ್ಕಾರಗಳಿಂದ ಸಮಾಜದಲ್ಲಿ ನಾವು ಗಟ್ಟಿಯಾಗುತ್ತೇವೆ. ನಮ್ಮ ಮನೆಗಳಲ್ಲಿ ಯಾವ ರೀತಿ ಸಂಸ್ಕಾರ ಕಲಿಯುತ್ತೇವೆಯೋ ಅದೂ ನಮ್ಮ ವ್ಯಕ್ತಿತ್ವವನ್ನು ವರ್ಥಿಸುತ್ತದೆ. ನಾವು ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಮಕ್ಕಳು ಸಂಸ್ಕಾರಯುತ ಮಕ್ಕಳಾಗಿ ಬೆಳೆಯುತ್ತಾರೆ. ಕೂಡು ಕುಟುಂಬದಲ್ಲಿ ಮಕ್ಕಳು ಏನೆ ತಪ್ಪು ಮಾಡಿದರು ಅದನ್ನು ತಿದ್ದುವ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸುವ, ಕಷ್ಟಗಳನ್ನು ಎದುರಿಸಲು ಕಲಿಸುವ ಹಿರಿಯರು ಇದ್ದರು. ಕೂಡು ಕುಟುಂಬದಿಂದ ಸಣ್ಣ ಕುಟುಂಬಕ್ಕೆ ಬದಲಾದ ಹಾಗೆ ಮನೆಯಲ್ಲಿ ಹಿರಿಯರು ಇಲ್ಲದಿರುವ ಕಾರಣ ಮಕ್ಕಳಿಗೆ ಸಮಯ ಕೊಡಲು ಪೋಷಕರಿಗೆ ಸಮಯವೇಇಲ್ಲ. ತಾಯಿಕೊಡುವ ಸಂಸ್ಕಾರವನ್ನು ಬೇರೆಯಾರಿಂದಲೂ ಕೊಡಲು ಸಾಧ್ಯವಿಲ್ಲ. ಎಷ್ಟೇ ಒತ್ತಡದ ಕೆಲಸ ಇದ್ದರು ತಾಯಿಯಾದವಳು ಮಕ್ಕಳಿಗೆ ಸಮಯವನ್ನು ನೀಡಲೇಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಜೀವನದಲ್ಲಿ ಮುಖ್ಯ ಬೇರುಗಳಿದ್ದಂತೆ. ಕುಟುಂಬ ಅನ್ನೋದು ನಮಗೆ ಒಂದು ಭದ್ರತೆ ನೀಡುವ ಸ್ಥಳ. ವಿಶಾಲವಾದ ಆಲೋಚನೆ ನಮ್ಮಲ್ಲಿರಬೇಕು ಕುಟುಂಬದ ಪರಿಧಿಯಿಂದ ಹೊರಗೆ ಬಂದು ಸಮಾಜದೊಂದಿಗೆ ಉತ್ತಮ ಕಾರ್ಯಗಳಲ್ಲಿ ಕೈ ಜೋಡಿಸಿದಾಗ ವಸುದೈವ ಕುಟುಂಬಕಮ್ ಎಂಬ ಮಾತು ಸಾಕಾರವಾಗುತ್ತದೆ. ಎಂದು ಹೇಳಿದರು.
ನಂತರ ಮಾತನಾಡಿದ ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಅವರು 7 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ವಿದ್ಯಾ ಸಂಸ್ಥೆ ಇಂದು ಒಂದು ದೊಡ್ಡ ಹೆಮ್ಮರವಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಒಂದು ಒಳ್ಳೆಯ ಗುರಿಯನ್ನು ಇಟ್ಟುಕೊಂಡು ಈ ಸಂಸ್ಥೆಯನ್ನು ಡಾ ಕೆ ಸಿ ನಾೈಕ್ ಅವರು ಸ್ಥಾಪಿಸಿದ್ದಾರೆ. ಅವರಗುರಿ ಕನಸು ಆದಷ್ಟು ಬೇಗ ನೆರವೇರುವಂತಾಗಲಿ ಎಂದು ಹಾರೈಸಿದರು.
ಬಳಿಕ ಮಾತನಾಡಿದ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಬಬಿತಾ ಸೂರಜ್ ಅವರು ಕುಟುಂಬ ಮಿಲನ ಎಂಬುವ ಪರಿಕಲ್ಪನೆಯನ್ನು ತಂದಂತಹ ಡಾ ಕೆ ಸಿ ನಾೈಕ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಯಾಗಿರುವ ಡಾಕೆ ಸಿ ನಾೈಕ್ ಅವರು ಈ ಸಂಸ್ಥೆಯ ಎಲ್ಲಾ ಸಿಬ್ಬಂಧಿಗಳು ನನ್ನ ಕಟುಂಬಸ್ಥರು, ಪ್ರತಿದಿನವೂ ಈ ವಿದ್ಯಾ ಸಂಸ್ಥೆಗಾಗಿ, ಇಲ್ಲಿನ ವಿದ್ಯಾರ್ಥಿಗಳ ಏಳಿಗೆಗಾಗಿ ದುಡಿಯುತ್ತಿರುವ ನನ್ನ ಕಟುಂಬದ ಸದಸ್ಯರೆಲ್ಲರನ್ನು ವರ್ಷದಲ್ಲಿ ಒಂದು ಒಟ್ಟು ಸೇರಿಸಿ ಸಂಭ್ರಮಿಸುವುದು ನನ್ನ ಆಸೆಯಾಗಿದೆ. ಈ ಸಂಸ್ಥೆಯು ಒಂದು ಖಾಸಗಿ ವಲಯದಲ್ಲಿ ನಡೆಯುತ್ತಿರುವ ಸಂಸ್ಥೆಯಾದರೂ ಇಲ್ಲಿ ಶ್ರಮಿಸುತ್ತಿರುವ ಸಿಬ್ಬಂದಿಗಳಿಗೆ ಪಿಂಚಣಿ ನೀಡುವ ಯೋಜನೆಯನ್ನು ಈ ಸಂದರ್ಭದಲ್ಲಿ ಇವರು ಘೋಷಿಸಿದರು. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಸಿಬ್ಬಂದಿಗೂ ಹಾಗೂ ಅವರ ಕುಟುಂಬ ಸದಸ್ಯರಿಗೆ ತಲಾ 30 ಲಕ್ಷ ರೂಪಾಯಿ ಮೌಲ್ಯದ ಆರೋಗ್ಯ ವಿಮೆಯನ್ನು ಕೂಡ ನಮ್ಮ ಶಕ್ತಿ ಸಂಸ್ಥೆಯು ನೀಡಲು ಸಜ್ಜಾಗಿದೆ ಎಂದರು.
ಬಳಿಕ ಮಾತನಾಡಿದ ಹೆಚ್ ಕೆ ಪುರುಷೋತ್ತಮ ಅವರು ಇಂದಿನ ಈ ಮೊಬೈಲ್ ಯುಗದಲ್ಲಿ ಒಂದು ಮಗುವಿಗೆ ಊಟ ತಿನ್ನಿಸುವಾಗಲು ಮೊಬೈಲ್ ತೋರಿಸಿ ಊಟ ಮಾಡಿಸುವ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ಇಂದು ಡಾ ಕೆ ಸಿ ನಾೈಕ್ ಅವರ ಈ ಶಕ್ತಿ ಕುಟುಂಬ ಮಿಲನ ಎನ್ನುವ ಪರಿಕಲ್ಪನೆ ಕುಟುಂಬದ ಮಹತ್ವವನ್ನು ಸಮಾಜಕ್ಕೆ ತಿಳಿಸಲು ಸಹಕಾರಿಯಾಗಿದೆ. ಈ ಶಕ್ತಿ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಶುಭಹಾರೈಸಿದರು.