ಉಜಿರೆ: ಲಕ್ಷಾಂತರ ಮಂದಿ ಸರ್ವಧರ್ಮಿಯರ ಶ್ರದ್ಧಾ-ಭಕ್ತಿಯ ಕೇಂದ್ರವಾದ ಧರ್ಮಸ್ಥಳವು ಎಲ್ಲಾ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಮಾದರಿಯಾಗಿ ಪ್ರೇರಕ ಶಕ್ತಿಯಾಗಿದ್ದು, ಅತಿಶಯ ಕ್ಷೇತ್ರವಾಗಿ ಇನ್ನಷ್ಟು ಬೆಳೆಯಲಿ, ಬೆಳಗಲಿ ಎಂದು ಕಾಸರಗೋಡು ಎಡನೀರು ಮಠದ ಪೂಜ್ಯ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಧರ್ಮಸ್ಥಳಕ್ಕೆ ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಣ್ಣೂರು ಚಿಮೇನಿ ನಿತ್ಯಾನಂದ ಮಠದ ಅವಧೂತ ವಿನು ಸ್ವಾಮೀಜಿ ಹಾಗೂ ತಮ್ಮ ಭಕ್ತರೊಂದಿಗೆ ಆಗಮಿಸಿದಾಗ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.

ದೇವರ ದರ್ಶನದ ಬಳಿಕ ಹೆಗ್ಗಡೆಯವರ ಬೀಡಿನಲ್ಲಿ ಅವರನ್ನು ಡಿ. ಹರ್ಷೇಂದ್ರ ಕುಮಾರ್ ಗೌರವಿಸಿದರು.

ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು.

ನಂತರ ಪ್ರವಚನ ಮಂಟಪದಲ್ಲಿ ಆಶೀರ್ವಚನ ನೀಡಿದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಧಾರ್ಮಿಕ ಶ್ರದ್ಧಾಕೇಂದ್ರಗಳ ರಕ್ಷಣೆ ಭಕ್ತರ ಕರ್ತವ್ಯ ಹಾಗೂ ಹೊಣೆಗಾರಿಕೆಯಾಗಿದೆ. ನಾವೆಲ್ಲರೂ ನ್ಯಾಯ, ನೀತಿ ಹಾಗೂ ಧರ್ಮಮಾರ್ಗದಲ್ಲಿ ನಡದಾಗ ಅನ್ಯಾಯ, ಅಧರ್ಮ, ಅಪಪ್ರಚಾರಕ್ಕೆ ಸೋಲು ಖಚಿತ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಪಪ್ರಚಾರ ಹಾಗೂ ವದಂತಿಗಳು ಗ್ರಹಣದಂತೆ ಕ್ಷಣಿಕವಾಗಿದ್ದು ಅವುಗಳನ್ನು ಕಡೆಗಣಿಸಬೇಕು.

ಎಂಟು ಶತಮಾನಗಳಿಂದ ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಕೇಂದ್ರವಾದ ಧರ್ಮಸ್ಥಳದ ಪಾವಿತ್ರ್ಯ  ರಕ್ಷಣೆಗೆ ನಾವೆಲ್ಲರೂ ಸಿದ್ಧರಾಗಿ, ಬುದ್ಧರಾಗಿ ಹೆಗ್ಗಡೆಯವರ ಜೊತೆಗಿದ್ದೇವೆ ಎಂದು ಸ್ವಾಮೀಜಿ ಭರವಸೆ ನೀಡಿದರು.

ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಧರ್ಮಸ್ಥಳ ಹಾಗೂ ಎಡನೀರು ಮಠಕ್ಕೆ ಅವಿನಾಭಾವ ಸಂಬಂಧವಿದೆ. ಪೂಜ್ಯ ಸ್ವಾಮೀಜಿಯವರಿಗೆ ಧರ್ಮಸ್ಥಳದ ಬಗ್ಯೆ ವಿಶೇಷ ಗೌರವ, ಅಭಿಮಾನ ಹಾಗೂ ಪ್ರೀತಿ-ವಿಶ್ವಾಸವಿದೆ ಎಂದು ಹೇಳಿ, ಸ್ವಾಮೀಜಿಯವರ ಆಗಮನ ಹಾಗೂ ಶುಭಾಶೀರ್ವಾದಗಳಿಗೆ ಭಕ್ತಿಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸಿದರು.

ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿ ಮತ್ತು ಕಣ್ಣೂರು ಚಿಮೇನಿ  ನಿತ್ಯಾನಂದ ಮಠದ ಅವಧೂತ ವಿನು ಸ್ವಾಮೀಜಿ ಉಪಸ್ಥಿತರಿದ್ದರು.

ಶ್ರೀನಿವಾಸ ರಾವ್ ಧರ್ಮಸ್ಥಳ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದವಿತ್ತರು.