ಮಂಗಳೂರು ಮಾ. 11: ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದಲ್ಲಿ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಎಸ್.ವಿ ಎಂಟಪ್ರೈಸಸ್ನ ಸಂಸ್ಥಾಪಕಿ ಅಶ್ವಿನಿ ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮೊದಲ ತಲೆಮಾರಿನ ಉದ್ಯಮಿಯಾಗಿ ತಮ್ಮ ಪ್ರಯಾಣದ ಒಳನೋಟಗಳನ್ನು ಹಂಚಿಕೊಂಡರು. ಅವರು ತಮ್ಮ ಉತ್ಸಾಹದ ಅನ್ವೇಷಣೆಯಲ್ಲಿ ಎದುರಿಸಿದ ಸವಾಲುಗಳನ್ನು ಎತ್ತಿ ತೋರಿಸಿದರು. ಅವರ ಹೃದಯಸ್ಪರ್ಶಿ ಮಾತುಗಳು ದೃಢ ಸಂಕಲ್ಪ ಮತ್ತು ಸಹನಶೀಲತೆಯಿಂದ ತಮ್ಮ ಗುರಿಗಳನ್ನು ಸಾಧಿಸಲು ಪ್ರೇರೇಪಿಸಿದವು.
ಆಯಾ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಪ್ರತಿಷ್ಠಿತ ಮಹಿಳಾ ಉದ್ಯಮಿಗಳಾದ ಚಿತ್ರ ಭಟ್, ಕೃಷ್ಣಲೀಲಾ, ಕಸ್ತೂರಿ ಮಹೇಶ್ ,ಪೂರ್ಣಿಮಾ ಭಟ್ ಹಾಗು ನಯನ ಪ್ರದೀಪ್ರವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿಶಾಲ್ ಎಲ್. ಸಾಲಿಯನ್ ಮಾತನಾಡಿ, ಮಹಿಳಾ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಬದ್ಧತೆಯನ್ನು ಸಾರಿದರು.ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಲು ಸಂಘದ ಕಾರ್ಯಗಳನ್ನು ಪುನರುಚ್ಚರಿಸಿದರು.
ಶಾಖಾ ಎಂ.ಎಸ್.ಎಂ.ಇ ಡಿ.ಎಫ್.ಒ (MSME DFO) ಸಹಾಯಕ ನಿರ್ದೇಶಕಿ ಶ್ರುತಿ ಜಿ.ಕೆ, ಕೃಷಿ ಸಹಾಯಕ ನಿರ್ದೇಶಕಿ ಪ್ರೇಮಾ ಕಾಂಬ್ಳೆ, ಉಪಸ್ಥಿತರಿದ್ದರು. ಕದ್ರಿ ಹಿಲ್ಸ್ ಮಹಿಳಾ ಐಟಿಐ ಪ್ರಾಂಶುಪಾಲ ಶಿವಕುಮಾರ್ ಮಾತನಾಡಿ, ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು.ಈ ಆಚರಣೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಮತ್ತು ಸಾಧನೆಗಳನ್ನು ಮಾನ್ಯತೆ ನೀಡುವ ಪ್ರತ್ಯಕ್ಷ ಸಂಕೇತವಾಗಿದೆ ಎಂದು ವಿವರಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು.