ಮಂಗಳೂರು, ಅ.10: ಎಲ್ಲಾ ಕ್ಷೇತ್ರದಲ್ಲೂ ಕಾರಂತರ ಕೊಡುಗೆ ಇದೆ. ಬದುಕಿನ ಆಯಾಮ ಸೃಷ್ಟಿಸಿ, ಕನ್ನಡ ಕಟ್ಟಿದವರು. ಇವರ ಬದುಕು ರಾಜಮಾರ್ಗವಿದ್ದಂತೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ. ಸೋಮಣ್ಣ ಹೊಂಗಳ್ಳಿ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಶಿವರಾಮ ಕಾರಂತ ಅಧ್ಯಯನ ಪೀಠ, ಕನ್ನಡ ವಿಭಾಗ ಹಾಗೂ ಗ್ರಂಥಾಲಯದ ಸಹಯೋಗದಲ್ಲಿ ಡಾ. ಕೆ ಶಿವರಾಮ ಕಾರಂತರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಕಾರಂತ ನುಡಿನಮನ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಮಾಧವ ಎಂ. ಕೆ. ಪ್ರಾಸ್ಥಾವಿಕವಾಗಿ ಮಾತನಾಡಿ, 90ರ ಹರೆಯದಲ್ಲೂ ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನವನ್ನು ಹೊರದೇಶಕ್ಕೆ ಪರಿಚಯಿಸಿದ ಮೊಟ್ಟ ಮೊದಲ ಕಲಾವಿದ ಕಾರಂತರು. ಇವರಿಗಿದ್ದ ಸಾಹಿತ್ಯದ ಅಭಿರುಚಿ ಇಂದಿನ ಯುವ ಜನತೆ ರೂಢಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ವಹಿಸಿದ್ದರು. ಇದೇ ವೇಳೆ, ಗ್ರಂಥಾವಲೋಕನ, ಕಾರಂತರ ಪುಸ್ತಕ ಪ್ರದರ್ಶನ, ಪ್ರಬಂಧ ಸ್ಪರ್ಧೆ, ಕೃತಿ ವಿಮರ್ಶೆ, ಕಾರಂತ-ಚಿತ್ರ ರಚನೆ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕಿ ಡಾ. ಸುಭಾಷಿಣಿ ಶ್ರೀವತ್ಸ, ಗ್ರಂಥಪಾಲಕಿ ಡಾ. ವನಜಾ, ಕನ್ನಡ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.