ಮಂಗಳೂರು: 1837ರಲ್ಲಿ ಮಂಗಳೂರನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿ ಆಡಳಿತ ನಡೆಸುತ್ತಿದ್ದ ಬ್ರಿಟೀಷರನ್ನು ಕೆದಂಬಾಡಿ ರಾಮಯ್ಯ ಗೌಡರು ರೈತವೀರರನ್ನು ಸಂಘಟಿಸಿ ಹೋರಾಟ ಮಾಡಿ  ಬಾವುಟಗುಡ್ಡೆಯಲ್ಲಿ ಬ್ರಿಟೀಷ್ ಧ್ವಜವನ್ನು ಇಳಿಸಿ ನಮ್ಮ ದೇಶವನ್ನು ಸ್ವಾತಂತ್ರ್ಯವೆಂದು ಘೋಷಿಸಿ ಸುಮಾರು 13 ದಿವಸಗಳವರೆಗೆ ನಮ್ಮ ನೆಲದ ಕ್ರಾಂತಿಕಾರಿ ಬಾವುಟವನ್ನು ಕೆದಂಬಾಡಿ ರಾಮಯ್ಯ ಗೌಡರು ಏರಿಸಿದ್ದರು. 


ಬಾವುಟಗುಡ್ಡೆಯ ಇತಿಹಾಸವನ್ನು ಶಾಶ್ವತಗೊಳಿಸುವ ಸಲುವಾಗಿ ಧ್ವಜಸ್ತಂಭವನ್ನು ನಿರ್ಮಿಸಲು ಸ್ವಾತ್ರಂತ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತುರವರು ಮಾನ್ಯ ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಶಾಸಕರಾದ ಮಂಜುನಾಥ ಭಂಡಾರಿ ರವರಿಗೆ ಮನವಿ ಸಲ್ಲಿಸಿರುತ್ತಾರೆ. ಅದರಂತೆ ಮಂಜುನಾಥ ಭಂಡಾರಿ ಅವರು ರಾಜ್ಯ ಸರ್ಕಾರದೊಂದಿಗೆ ಮಾತನಾಡಿ  ಸ್ಮಾರ್ಟ್ ಸಿಟಿವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತಿ ಎತ್ತರವಾದ ಧ್ವಜ ಸ್ತಂಭವನ್ನು ನಿರ್ಮಿಸುವಂತೆ ಮನವಿ ಮಾಡಿರುತ್ತಾರೆ. 

ಅದರಂತೆ  ಬಾವುಟಗುಡ್ಡೆಯಲ್ಲಿ ಶಂಕುಸ್ಥಾಪನ ಕೆಲಸವೂ ನೆರವೇರಿರುತ್ತದೆ. ಈ ಸಂದರ್ಭದಲ್ಲಿ ಮಾನ್ಯ ಕೆಪಿಸಿಸಿ ಕಾರ್ಯಧ್ಯಕ್ಷರು ಶಾಸಕರಾದ ಮಂಜುನಾಥ ಭಂಡಾರಿ, ಶಾಸಕರಾದ ವೇದವಾಸ್ ಕಾಮತ್, ಮಹಾನಗರ ಪಾಲಿಕೆಯ ಮಹಾಪೌರರಾದ ಸುಧೀರ್ ಶೆಟ್ಟಿ , ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಪ್ರವೀಣ್ ಚಂದ್ರ ಆಳ್ವ, ಮಾಜಿ ಶಾಸಕರಾದ ಕೆ ಹರೀಶ್ ಕುಮಾರ್  ಹಾಗು ಇನ್ನಿತರ ಮಹಾನಗರ ಪಾಲಿಕೆಯ ಸದಸ್ಯರುಗಳು ಉಪಸ್ಥಿತರಿದ್ದರು..