ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ನಡೆಯುತ್ತಿರುವ ‘ಸಮೃದ್ಧಿ’ -ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದ ಎರಡನೇ ದಿನವೂ ಉತ್ತಮ ಜನಸ್ಪಂದನೆ ದೊರೆಯಿತು.  ಮೂರು ದಿನಗಳ ಮೇಳದಲ್ಲಿ ಒಟ್ಟು 287 ಸ್ಟಾಲ್‍ಗಳನ್ನು ಪಾಲ್ಗೊಂಡಿದ್ದು, ಮೊದಲ ದಿನ 15000 ದಷ್ಟು ಜನರು ಪಾಲ್ಗೊಂಡರೆ, ಎರಡನೇ ದಿನ ಶನಿವಾರ 20000 ಕ್ಕೂ ಅಧಿಕ ಜನ ಆಗಮಿಸಿದರು.

ಕೇರಳದ ಪಾಲಕ್ಕಾಡ್‍ನಿಂದ ಆಗಮಿಸಿದ್ದ, ಜಯಚಂದ್ರ  ವಿವಿಧ ಬಗೆಯ ತರಕಾರಿ ಬೀಜಗಳ ಸ್ಟಾಲ್‍ ತೆರೆದಿದ್ದು, ತರಹೇವಾರಿ ಬೀಜಗಳ ಸಂಗ್ರಹ ಅವರ ಬಳಿಯಲ್ಲಿತ್ತು. ಅಲಸಂಡೆಯ 6 ತರಹದ ಬೀಜ, ಬೆಂಡೆಯ 3 ತರಹದ ಬೀಜ, ಬದನೆಯ 2 ತರಹದ ಬೀಜಗಳು ಲಭ್ಯವಿರುವುದಲ್ಲದೇ,  ಒಟ್ಟು 60 ಬಗೆಯ ತರಕಾರಿ, ಹೂವು ಹಣ್ಣುಗಳ ಬೀಜಗಳು ವ್ಯಾಪಾರಕ್ಕೆ ಲಭ್ಯವಿದ್ದವು. ಚಿಕ್ಕ ಪ್ಯಾಕೆಟ್‍ನಲ್ಲಿ ಲಭ್ಯವಿದ್ದ ಬೀಜಗಳಿಗೆ 20ರೂ ಮುಖಬೆಲೆಯಾದರೆ, 3 ಪೊಟ್ಟಣಗಳಿಗೆ 50 ರೂಪಾಯಿ ನಿಗದಿಪಡಿಸಿದ್ದರು. ಸೂರ್ಯಕಾಂತಿ, ಜೀನಿಯಾ, ಬಾಲ್ಸಮ್, ಮಾರಿಗೋಲ್ಡ್ ಸೇರಿದಂತೆ 9 ಬಗೆಯ ಹೂವಿನ ಬೀಜಗಳು ಲಭ್ಯವಿದ್ದವು. ಕಳೆದ ಮೂರು ದಶಕಗಳಿಂದ ಈ ವ್ಯಾಪಾರ ಮಾಡುತ್ತಿರುವ ಜಯಚಂದ್ರ ಮೇಳದ ಮೊದಲ ಎರಡು ದಿನ ಉತ್ತಮ ವ್ಯಾಪಾರವಾಗಿದೆಎಂದು ಸಂತಸ ವ್ಯಕ್ತಪಡಿಸಿದರು.

ಆಳ್ವಾಸ್ ಕೃಷಿ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಂಪೂರ್ಣವಾಗಿ ಸಾವಯವಾಗಿ ತಯಾರಿಸಿದ್ದ ಜೀವಾಮೃತ, ಬೀಜಾಮೃತ ಮತ್ತು ಪಂಚಗವ್ಯಗಳಿಗೆ ಉತ್ತಮ ಬೇಡಿಕೆ ಕಂಡುಬಂತು. ಪ್ರಕೃತಿಯಿಂದ ಸಿಗುವ ವಸ್ತುಗಳನ್ನ ಬಳಸಿಕೊಂಡು ಕೃಷಿಕರಿಗೆ ಉಪಯುಕ್ತವಾಗುವ ದ್ರವ್ಯಗಳನ್ನು ತಯಾರಿಸಿಲಾಗಿತ್ತು. 

ನಾಳೆ ಸಮೃದ್ಧಿ ಮಹಾಮೇಳದ ಕೊನೆ ದಿನ: ಮೂರು ದಿನಗಳ ಕಾಲ ನಡೆಯಲಿರುವ ಮಹಾಮೇಳ ನಾಳೆ ಕೊನೆಗೊಳ್ಳಲಿದ್ದು, ಭಾನುವಾರ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಇದೆ. ಎರಡು ದಿನಗಳಲ್ಲಿ ಹೆಚ್ಚಿನ ಎಲ್ಲಾ ಸ್ಟಾಲ್‍ಗಳಿಗೆ ಉತ್ತಮ ವ್ಯಾಪಾರವಾಗಿದ್ದು, ಸಂಸ್ಥೆಯ ವತಿಯಿಂದ ಎಲ್ಲಾ ವ್ಯವಸ್ಥೆಯನ್ನು ವ್ಯಾಪಾರಸ್ಥರಿಗೆ ಹಾಗೂ ಮೇಳದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಮಾಡಲಾಗಿತ್ತು. ಆಳ್ವಾಸ್ ಇಂಜಿನಿಯರಿಂಗ್  ಕೃಷಿ ವಿಭಾಗದ  ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಾಲೇಜಿನ ಎನ್‍ಸಿಸಿಯ 100ಕ್ಕೂ ಅಧಿಕ ಕೆಡೆಟ್‍ಗಳು ಮೇಳದಲ್ಲಿ ಸಹಕರಿಸಿದ್ದಾರೆ. ಪ್ರಕೃತಿಯು ಮೇಳದ ಸಫಲತೆಗೆ ಸಹಕರಿಸುತ್ತಿದ್ದು, ಮಳೆಯ ಸಮಸ್ಯೆ ಎರಡು ದಿನವು ಕಾಡಲಿಲ್ಲ.