ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗ ಆಯೋಜಿಸಿದ್ದ ಎರಡು ದಿನಗಳ ‘ಆಗೋನ್-ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಯುಜಿ ಮತ್ತು ಪಿಜಿ ಫೆಸ್ಟ್‍ನ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಮಂಗಳೂರಿನ ಸಾಯಿ ಪ್ರೊಡಕ್ಷನ್  ನಿರ್ದೇಶಕ  ಸಾಹಿಲ್ ಎಸ್ ರೈ, ಛಲ ಬಿಡದೆ ಪ್ರಯತ್ನಿಸಿದರೆ ಯಶಸ್ಸು ನಮ್ಮದಾಗಬಲ್ಲದು. ಯಶಸ್ಸನ್ನು  ಗಳಿಸುವ ಹಾದಿಯ ಆರಂಭ ಬದುಕಿನಲ್ಲಿ ಏನಾಗಬೇಕು ಎಂದು ತಿಳಿದಿರುವುದಾಗಿದೆ.  ಯಶಸ್ಸಿನ ಮೆಟ್ಟಿಲನ್ನು ಬರುವ ಅವಕಾಶವನ್ನು ಬಳಸಿಕೊಳ್ಳುವ ಮುಖಾಂತರ ಏರಬಲ್ಲೇವು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸಂಸ್ಥೆಯ ವಿವಿಧ ಚಟುವಟಿಕೆಗಳಲ್ಲಿ ಎಂಬಿಎ ವಿದ್ಯಾರ್ಥಿಗಳ ತೊಡಗುವಿಕೆಯನ್ನು ಕೊಂಡಾಡಿದರು.  ವಿಭಾಗದ ಮುಖ್ಯಸ್ಥೆ ಪ್ರೊ. ಪ್ರಿಯ ಸಿಕ್ವೇರಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.  

ಸುರತ್ಕಲ್‍ನ ಎನ್‍ಐಟಿಕೆ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಆಗೋನ್ ಫೆಸ್ಟ್‍ನ ಚಾಂಪಿಯನ್ಸ ಪಟ್ಟ ಅಲಂಕರಿಸಿದರೆ, ಉಜಿರೆಯ ಎಸ್‍ಡಿಎಂ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಸ್ಥಾನ ಪಡೆದರು. 

ಕಾರ್ಯಕ್ರಮದಲ್ಲಿ ಪಿಜಿ  ವಿಭಾಗದ ಮುಖ್ಯಸ್ಥೆ ಪ್ರೊ. ಪ್ರಿಯ ಸಿಕ್ವೇರಾ, ವಿಭಾಗದ ಹಿರಿಯ ವಿದ್ಯಾರ್ಥಿ ಪ್ರಥ್ವೀಶ್, ಆಗೋನ್‍ನ ಅಧ್ಯಾಪಕ ಸಂಯೋಜಕರಾದ ಹರ್ಷಿತ ವಿ ಶೆಟ್ಟಿ, ವಿದ್ಯಾರ್ಥಿ ಸಂಯೋಜಕರಾದ ಸುಶಾನ್ ಹಾಗೂ ಗೌತವಿ ಇದ್ದರು.  ದಿಶಾ ಸ್ವಾಗತಿಸಿ, ಶ್ರಾವ್ಯ ಹಾಗೂ ಆರಾಧ್ಯ ನಿರೂಪಿಸಿ ವಂದಿಸಿದರು.