ವರದಿ / ರೋನ್ಸ್ ಬಂಟ್ವಾಳ್

ಮುಂಬಯಿ, ನ. 26:  ನಮ್ಮ ಸಂಘವು ಕಳೆದ 80 ವರ್ಷಗಳಿಂದ  ಹಿರಿಯರ ಮಾರ್ಗದರ್ಶನದಲ್ಲಿ ಸದಸ್ಯರ ನಿರಂತರ ಸಹಕಾರದೊಂದಿಗೆ ಬೆಳೆದುಬಂದಿದೆ. ಸಂಘವನ್ನು ಸಮರ್ಥ ರೀತಿಯಲ್ಲಿ ಎಲ್ಲಾ ಅಧ್ಯಕ್ಷರು ಮುನ್ನಡೆಸಿದ್ದಾರೆ. ವಿಶ್ವಕರ್ಮ ಸಮಾಜದ ಬಂಧುಗಳು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಧನೆಯಿಂದ ಗುರುತಿಸಿಕೊಂಡಿದ್ದಾರೆ, ಅವರು  ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಜೊತೆಯಲ್ಲಿ ನಮ್ಮ ಅಸೋಸಿಯೇಷನ್ ಸಹ ಬೆಳೆಯಬೇಕು ಎನ್ನುವುದು ನಮ್ಮ ಆಸೆ.  ಈ  ವರ್ಷ ಸಂಘ 80ನೇ ವರ್ಷಕ್ಕೆ ಕಾಲಿಟ್ಟಿದ್ದು ವರ್ಷಪೂರ್ತಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ವಾರ್ಷಿಕೋತ್ಸವವನ್ನು ಆಚರಿಸುವ ಯೋಜನೆ ಇದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ರವೀಶ್ ಜಿ. ಆಚಾರ್ಯ ನುಡಿದರು.

ಕಳೆದ ರವಿವಾರ (ನ.24) ಮೀರಾರೋಡ್ ಪೂರ್ವದ ಭಾರತರತ್ನ ಲತಾಮಂಗೇಶ್ಕರ್ ನಾಟ್ಯ ಗೃಹದಲ್ಲಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ 80ನೇ ಸಂಭ್ರಮಾಚರಣೆಗೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಉದ್ಘಾಟನಾ ಸಮಾರಂಭದ ಅಂಗವಾಗಿ ಸಮಾಜದ ಕಲಾವಿದ ಅಶೊಕ ಕೊಡ್ಯಡ್ಕ ನಿರ್ದೇಶನದ "ಕೊಪ್ಪರಿಗೆ" ನಾಟಕ ಆಯೋಜಿಸಲಾಗಿದ್ದು ಈ ಎಲ್ಲ ಕಾರ್ಯಕ್ರಮಗಳ ಯಶಸ್ಸಿಗಾಗಿ ದುಡಿದ ಸಂಘದ ಯುವ ಮತ್ತು ಮಹಿಳಾ ವಿಭಾಗದ ಸದಸ್ಯರು ಮತ್ತ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಮಾಜಿ ಅಧ್ಯಕ್ಷರಾದ ಸದಾನಂದ ಎನ್ ಆಚಾರ್ಯ, ಕಲ್ಯಾಣಪುರ ಮಾತನಾಡುತ್ತಾ, ಸಂಘ ಬೆಳೆದಂತೆ  ಸಮಾಜ ಬಾಂಧವರು ಹೆಚ್ಚು ಒಗ್ಗಟ್ಟಾಗಿ ಬೆಳೆಯುತ್ತಾರೆ, ಸಂಘ ನಡೆಸುವ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಪಾಲ್ಗೊಂಡಾಗ ನಮ್ಮ ಒಗ್ಗಟ್ಟು ಗಟ್ಟಿಯಾಗುತ್ತದೆ, ನಮ್ಮ ಅಸೋಸಿಯೇಷನ್ ಅಭಿವೃದ್ಧಿಗೊಳ್ಳಲು ನಿಮ್ಮೆಲ್ಲರ ಸಹಕಾರವನ್ನು ಅಸೋಸಿಯೇಷನ್ ಬಯಸುತ್ತದೆ ಎಂದು ನುಡಿದರು,

ಮಾಜಿ ಅಧ್ಯಕ್ಷರಾದ ಜಿ ಟಿ ಆಚಾರ್ಯರು ಮಾತನಾಡುತ್ತಾ ಇವತ್ತು ಅಸೋಸಿಯೇಷನ್‌ಗೆ 80 ಸಂಭ್ರಮ. ನಾವೆಲ್ಲರೂ  ಭಾಗ್ಯವಂತರು,ನಮ್ಮ ಹಿರಿಯರು ಸಮಾಜವನ್ನು ಒಗ್ಗೂಡಿಸುವುದಕ್ಕಾಗಿ ಅಸೋಸಿಯೇಷನ್‌ನ್ನು ಕಟ್ಟಿಕೊಂಡಿದ್ದಾರೆ, ಅದನ್ನು ಇಂದಿನವರೆಗೆ ಎಲ್ಲರೂ ಬೆಳೆಸಿದ್ದಾರೆ, ಈ 80 ವರ್ಷಗಳಲ್ಲಿ ಸಾವಿರಾರು ಸಮಾಜ ಬಾಂಧವರ ಬೆವರಿನ ಹನಿ ಇದೆ, ಸಂಘಕ್ಕೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಲ್ಲರೂ ಒಗ್ಗಟ್ಟಿನಿಂದ ಎಲ್ಲಾ ಕಾರ್ಯಕ್ರಮಗಳಲ್ಲೂ ಸೇರಿಕೊಳ್ಳುತ್ತಾರೆ , ಇದು ನಮ್ಮ ಒಗ್ಗಟ್ಟನ್ನು ತೋರಿಸುತ್ತದೆ. ಅಸೋಸಿಯೇಷನ್ ಬೆಳೆಯಬೇಕಿದ್ದರೆ ಅದರ ಹಿಂದೆ ಬಹಳಷ್ಟು ಸಮಾಜ ಬಾಂಧವರ ಸೇವಾಕಾರ್ಯಗಳು ಇರುತ್ತದೆ, ಎಂಬತ್ತರ ಸಂಭ್ರಮಾಚರಣೆ ಅದ್ದೂರಿಯವಾಗಿ ನಡೆಯುವುದಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದರು.

ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಪಾದೂರು ಜನಾರ್ದನ ಆಚಾರ್ಯ ಮಹಾಬಲ ಎ. ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ ,ಜಿ ಟಿ ಆಚಾರ್ಯ, ಸದಾನಂದ ಎನ್ ಆಚಾರ್ಯ, ಹಿರಿಯರಾದ ಕೆ.ಸುಂದರ ಆಚಾರ್ಯ, ಅಡ್ವೊಕೇಟ್ ಸುಧಾಕರ ಎನ್.ಆಚಾರ್ಯ,  ಸದಾನಂದ ಜಿ. ಆಚಾರ್ಯ, ಪುರೋಹಿತ್ ಶಂಕರನಾಥ ಆಚಾರ್ಯ, ಉಪಾಧ್ಯಕ್ಷ ಗಣೇಶ್ ಕುಮಾರ್, ಕಾರ್ಯದರ್ಶಿ ಪ್ರಸಾದ್ ಆಚಾರ್ಯ ಹಾಗೂ ಸುಧೀರ್ ಜೆ ಆಚಾರ್ಯ , ಕೋಶಾಧಿಕಾರಿ ಬಾಬುರಾಜ್ ಎಂ.ಆಚಾರ್ಯ, ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷೆ  ಸುಜಾತಾ ಜಿ.ಆಚಾರ್ಯ,  ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದೇಶ್ ಜೆ.ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು,

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೊಡ್ಯಡ್ಕ ಕ್ರಿಯೇಶನ್ಸ್ ಮುಂಬೈಯವರ ಸಂಯೋಜನೆಯಲ್ಲಿ ಕಲಾವಿದ-ನಿರ್ದೇಶಕ ಅಶೋಕ್ ಕೊಡ್ಯಡ್ಕ  ನಿರ್ದೇಶನದ "ಕೊಪ್ಪರಿಗೆ" ತುಳು ನಾಟಕ ಪ್ರದರ್ಶನಗೊಂಡಿತು.

ಮಹಿಳಾ ವಿಭಾಗದ ಸದಸ್ಯರ ಪ್ರಾರ್ಥನೆಯೊಂದಿಗೆ ಸಭೆ ಪ್ರಾಂಭಗೊಂಡಿತು. ಗಣೇಶ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು ,ಕಾರ್ಯದರ್ಶಿ ಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.