ಶಕ್ತಿನಗರ: ʻʻವಿಶಿಷ್ಟ ಕಲ್ಪನಾ ವಿಲಾಸಕ್ಕೆ, ಹೊಸತನಕ್ಕೆ ಹಾತೊರೆಯಿರಿ. ಹೊಸ ಚಿಂತನೆಗಳಿಗೆ ಮನಸ್ಸು ತೆರೆದಿಡಿ. ಸಾಹಿತ್ಯ ಓದಲು ಮೊಬೈಲ್ ಬಿಡಬೇಕಿಲ್ಲ ಆದರೆ ಮೊಬೈಲ್ ಬಳಕೆಯ ಮಿತಿ ಗೊತ್ತಿರಲಿʼʼ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ವಂ. ಪ್ರಶಾಂತ್ ಮಾಡ್ತಾ ಹೇಳಿದರು. ಅವರು ಡಿಸೆಂಬರ್ 07 ರಂದು ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್ ತನ್ನ ಸಾಹಿತ್ಯದ ಅಂಗ ಮಿಟಾಕಣ್ ಅಕಾಡೆಮಿ ಮೂಲಕ ಮಕ್ಕಳಿಗಾಗಿ ಆಯೋಜಿಸಿದ ಪರಾಗ್ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಪ್ರತಿನಿಧಿ ಸಂಜನಾ ರಿವಾ ಮತಾಯಸ್ ಶಾಲಾ ಓದು ಮತ್ತು ಸಾಹಿತ್ಯದ ಓದಿನ ವ್ಯತ್ಯಾಸಗಳನ್ನು ತಿಳಿಸಿ, ಉತ್ತಮ ಅಂಕಗಳು ಮಾತ್ರವಲ್ಲ ಉತ್ತಮ ಸಾಹಿತ್ಯ ಕೂಡಾ ಜೀವನದಲ್ಲಿ ಅಗತ್ಯ. ಸಾಹಿತ್ಯದ ಒಲವು ಮನೆಯಲ್ಲೇ ಆರಂಭವಾಗಬೇಕು. ಎಂದು ಆಶಯ ಭಾಷಣ ಮಾಡಿದರು.
ವಿತೊರಿ ಕಾರ್ಕಳ ಸಂಪಾದಿಸಿದ, 26 ಲೇಖಕರು ಅನುವಾದಿಸಿದ 36 ಕತೆಗಳ ಅನುವಾದ ಪುಸ್ತಕ ʻಮ್ಹೊಂವಾ-ಪೊಳಿʼ ಪುಸ್ತಕವನ್ನು ಜೇನು ಗೂಡಿನಿಂದ ಹಾಗೂ ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನದಲ್ಲಿ ಪ್ರಿಥುಮಾ ಮೊಂತೇರೊ ದಾಖಲಿಸಿದ ʻಕೊಂಕಣಿ ಕ್ರಿಶ್ಚಿಯನ್ಸ್ ಫೊಕ್ ಕಲ್ಚರ್ʼ ಸಂಶೋಧನಾ ಕೃತಿಯನ್ನು ದೂರದರ್ಶಕದ ಪ್ರತಿಕೃತಿಯಿಂದ ಹೊರ ತೆಗೆದು ಲೋಕಾರ್ಪಣೆಗೊಳಿಸಲಾಯಿತು. ಕೇರನ್ ಮಾಡ್ತಾ ಸಂಪಾದಿಸಿದ ಸಿಲ್ವೆಸ್ಟರ್ ಡಿಸೋಜ ಮೈಸೂರು ದಶಕಗಳ ಹಿಂದೆ ರಚಿಸಿದ ʻವ್ಹಡ್ಲಿಮಾಂಯ್ಚ್ಯೊ ಕಾಣಿಯೊʼ ಮಕ್ಕಳ ಜನಪದ ಕತಾ ಸಂಗ್ರಹ ಹಾಗೂ ಮೇಲಿನೆರಡು ಪುಸ್ತಕಗಳನ್ನು ಇ-ಬುಕ್ ರೂಪದಲ್ಲೂ ಬಿಡುಗಡೆಗೊಳಿಸಲಾಯಿತು.
ಮೊದಲಿಗೆ ಮಕ್ಕಳಿಂದ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಪತಾಕೆಯ ನಿಶಾನೆ ತೋರಿಸಿದರು.
ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಹಿತ್ಯದ ಭವಿಷ್ಯದ ಬಗ್ಗೆ ವಿಚಾರ ಗೋಷ್ಟಿ ನಡೆಯಿತು. ಆಲ್ವಿನ್ ದಾಂತಿ, ಫೆಲ್ಸಿ ಲೋಬೊ ಹಾಗೂ ವೆಂಕಟೇಶ ನಾಯಕ್ ಪ್ರಬಂಧ ಮಂಡನೆ ಮಾಡಿದರು. ಆಂಡ್ರ್ಯೂ ಎಲ್ ಡಿಕುನ್ಹಾ ಕವಿತಾ ರಚನೆ ಬಗ್ಗೆ ಮಾಹಿತಿ ನೀಡಿ ವಾಚಿಸುವ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು.
ಮಧ್ಯಾಹ್ನದ ನಂತರ ಮಕ್ಕಳಿಗಾಗಿ ಕೊಂಕಣಿ ರಸಪ್ರಶ್ನೆಯನ್ನು ಅರುಣ್ ರಾಜ್ ರೊಡ್ರಿಗಸ್ ನಡೆಸಿ ಕೊಟ್ಟರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡುಗಳು, ನೃತ್ಯ, ಗುಮಟೆ ವಾದನ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಸಂಸ್ಥೆಯು ವರ್ಷವಿಡಿ ಮಕ್ಕಳಿಗಾಗಿ ಆಯೋಜಿಸಿದ ಕಾರ್ಯಕ್ರಮಗಳ ಮಾಹಿತಿ ನೀಡಿ, ಪರಾಗ್ ಮುಖಾಂತರ ಸಾಹಿತ್ಯದ ಜಾಗೃತಿಯನ್ನು ಮಕ್ಕಳ ಮನದಲ್ಲಿ ಮೂಡಿಲಾಗಿದೆ. ಈ ಬಗ್ಗೆ ಓದಿನ ಅರಿವನ್ನು ಮೂಡಿಸಲು ಕೆಲ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉತ್ಸಾಹದಿಂದ ಭಾಗವಹಿಸಿ ಎಂದು ಕರೆ ಕೊಟ್ಟರು. ಉಪಾಧ್ಯಕ್ಷ ನವೀನ್ ಲೋಬೊ ಉಪಸ್ಥಿತರಿದ್ದರು.
ನಿನಿಶಾ ಪ್ರಿಶಾ ಮೊಂತೇರೊ, ಕ್ರಿಶೆಲ್ ಡಿಆಲ್ಮೇಡಾ, ಆರ್ವಿನ್ ನೀಲ್ ಡಿಸೋಜ, ಲೆನೊರಾ ಈವಾ ಮಸ್ಕರೇನ್ಹಸ್, ಲರಿಸ್ಸ ಡಿಸೋಜ , ಲೆನೊರಾ ಕ್ರಿಶೆಲ್ ಡಿಸೋಜ, ರೀನಲ್ ರಿನ್ಸಿಯಾ ಸೆರಾವೊ, ಡೆಲಿಶಾ ಮರಿನಾ ಡಿಸೋಜ, ಜೆಸ್ಸಿಕಾ ಶೈನಾ ಡಿಸೋಜ, ರತನ್ ಆರ್ ಭಟ್, ಶೊನಾ ಪಿಂಟೊ, ಏಂಜಲ್ ವಿಯಾನ್ನಾ ಪಿಂಟೊ,ವಿಯೊನ್ ಕ್ರಿಸ್ ಮಾರ್ಟಿಸ್ , ಜೆನಿಶಾ ನಜ್ರೆತ್ ಕಾರ್ಯಕ್ರಮ ನಿರೂಪಣೆ, ವಂದನಾರ್ಪಣೆ, ಗಣ್ಯರ ಪರಿಚಯ ಇತ್ಯಾದಿ ಮಾಡಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಶಾಲೆಗಳಿಂದ 225 ಮಕ್ಕಳು ಭಾಗವಹಿಸಿದ್ದರು.