ಇದೇ ದಿನಾಂಕ ಅಕ್ಟೋಬರ್ ಎರಡರಂದು ಗಾಂಧೀ ಜಯಂತಿ ದಿನಾಚರಣೆಯ ಶುಭಾವಸರದಲ್ಲಿ ಮಂಗಳೂರಿನಲ್ಲಿರುವ. ಡಾ ಸುರೇಶ ನೆಗಳಗುಳಿ ಇವರ ಇತ್ತೀಚೆಗೆ ಲೋಕಾರ್ಪಣೆ ಯಾದ ತುಷಾರ ಮಾಸ ಪತ್ರಿಕೆಯಲ್ಲಿ ಬಹುಮಾನಿತವಾದ ತಮ್ಮ ಕವನಗಳ ಸಂಕಲನ "ತುಷಾರ ಬಿಂದು" ಎರಡನೇ ಆವೃತ್ತಿಯ ಪುಸ್ತಕ ವಿಮರ್ಶೆ ಹಾಗೂ ಆಯ್ದ ಕವಿಗಳನ್ನೊಳಗೊಂಡ ಕವಿಗೋಷ್ಠಿಯು ಮಂಗಳೂರಿನ ಡೊನ್ ಬಾಸ್ಕೋ ಮಿನಿ ಹಾಲ್ ನಲ್ಲಿ ನೆರವೇರಿತು.
ಸಮಾರಂಭದ ಉದ್ಘಾಟನೆಯನ್ನು ಫಾ ಪಾವ್ಲ್ ಮೆಲ್ವಿನ್ ರವರು ದೀಪ ಬೆಳಗಿಸಿ ಉದ್ಘಾಟಿಸುತ್ತಾ ಲೇಖಕರ ಸಾಹಿತ್ಯ ಪ್ರಜ್ಞೆಯ ಗುಣಗಾನ ಮಾಡಿದರಲ್ಲದೆ ವೈದ್ಯರಾದರೂ ವಕೀಲರಾದರೂ ಉದ್ಯೋಗದ ಹೊರತಾಗಿ ಸಾಹಿತ್ಯ ಲಲಿತ ಕಲೆಗಳಲ್ಲಿ ಕ್ರಿಯಾಶೀಲರಾಗುವ ವ್ಯಕ್ತಿಗಳು ತುಂಬಾ ಜಾಣ್ಮೆ ಹೊಂದಿರುತ್ತಾರೆ ಮತ್ತು ಈ ರೀತಿಯ ಸಮಾರಂಭಗಳಿಂದ ಅಂತಹವರಿಗೆ ಇನ್ನಷ್ಟು ಬರೆಯಲು ಪ್ರಚೋದನೆ ಸಿಗುತ್ತದೆ ಎಂದರಲ್ಲದೆ ಇಂತಹ ಕಾರ್ಯಕ್ರಮ ಗಳಿಗೆ ತಾವು ಸದಾ ಕಾಲ ಪ್ರೋತ್ಸಾಹ ಕೊಡಲು ಆನಂದ ಪಡುತ್ತೇನೆ ಎಂದು ಶುಭ ಹಾರೈಸಿದರು.
ಪುಸ್ತಕ ವಿಮರ್ಶಕರಾಗಿ ಪಿಂಗಾರ ಪತ್ರಿಕೆಯ ಮುಖ್ಯಸ್ಥ ಹಾಗೂ ಪತ್ರಕರ್ತ ರೇಮಂಡ್ ಡಿ ಕುನ್ಹಾ ತಾಕೊಡೆ ಇವರು ವಿಶದವಾಗಿ ಲೇಖಕರ ಬರಹಗಳ ಅರ್ಥ ಸಹಿತ ವಿವರಣೆಯನ್ನು ಕೊಡುತ್ತಾ ಅವರ ಬಾಲ್ಯದ ರಚನಾ ಕೌಶಲವನ್ನೂ ಉದಾಹರಣೆ ಸಹಿತ ಮಂಡಿಸಿದರು. ವೈದ್ಯರೂ ಆಗಿರುವ ಇವರು ಸಂಸ್ಕೃತವನ್ನೂ ಬಲ್ಲವರಾಗಿದ್ದು ಇದು ಅವರ ಸಾಹಿತ್ಯಗಳ ಪ್ರಭಾವಳಿಯನ್ನು ಹೆಚ್ಚಿಸಿವೆ ಎಂದರು.
ಸಂವಾದಕರಾಗಿ ಭಾಗವಹಿಸಿದ್ದ ಉಪ್ಪಿನಂಗಡಿಯ ಸತ್ಯ ಶಾಂತಾ ಪ್ರತಿಷ್ಠಾನ ಮುಖ್ಯಸ್ಥ ರೂ ಕವಯಿತ್ರಿಯೂ ಆದ ಶಾಂತಾ ಕುಂಟಿನಿಯವರು ನೆಗಳಗುಳಿಯವರ ಕೆಲವು ಕವನಗಳನ್ನು ಉಲ್ಲೇಖಿಸಿ ಅವರ ರಚನಾ ಶೈಲಿಯ ವಿಶೇಷತೆ,ಪದಗಳ ಬಳಕೆಯ ವೈಖರಿ ಹಾಗೂ ಶಿರೋನಾಮೆಯ ಮಹತ್ವ ಇತ್ಯಾದಿಗಳನ್ನು ಉಲ್ಲೇಖಿಸಿದರು.
ಇನ್ನೋರ್ವ ಸಂವಾದಕರಾದ ಪತ್ರಕರ್ತ ಜಯಾನಂದ ಪೆರಾಜೆಯವರು ಡಾ ಸುರೇಶ ನೆಗಳಗುಳಿಯವರ ಬಹುಮುಖ ವ್ಯಕ್ತಿತ್ವದ ಉದಾಹರಣೆ, ಸಾಹಿತ್ಯ ಸಮ್ಮೇಳನಾದಿಗಳ ಅಧ್ಯಕ್ಷತೆ ಮತ್ತಿತರ ಲೋಕಾರ್ಪಿತ ಪುಸ್ತಕಗಳ ಸಹಿತ ಉದಾಹರಿಸುತ್ತಾ ಪ್ರಸ್ತುತ ವಿಮರ್ಶೆ ಗೊಳಗಾಗುತ್ತಿರುವ ಸಂಕಲನದ ಕೆಲವು ಕವನಗಳನ್ನು ಅರ್ಥ ಸಹಿತ ವಾಚಿಸಿದರು.
ಅನಂತರ ಹಿರಿಯರಾದ ಸದಾನಂದ ನಾರಾವಿ ಇವರ ಅಧ್ಯಕ್ಷತೆಯಲ್ಲಿ ದೀಪಾ ಪಾವಂಜೆ,ಮಾನಸ ವಿಜಯ ಕೈಂತಜೆ, ಡಾ ಸುರೇಶ ನೆಗಳಗುಳಿ, ರೇಮಂಡ್ ಡಿಕೂನಾ ತಾಕೊಡೆ, ಸೌಮ್ಯ ಕುಮಾರಿ ರೈ,ಪರಿಮಳ ಮಹೇಶ್, ರೇಖಾ ಸುರೇಶ್, ಜಯಾನಂದ ಪೆರಾಜೆ,ಶಾಂತ ಪುತ್ತೂರು,ಮಾನಸ ಪ್ರವೀಣ ಭಟ್,ರಶ್ಮಿ ಸನಿಲ್, ಪ್ರೇಮಾ, ಹೀಗೆ 16 ಕವಿಗಳು ಸ್ವರಚಿತ ಕವನ ವಾಚನ ಮಾಡಿದರು.
ಕಥಾಬಿಂದು ಪ್ರಕಾಶನದ ಪ್ರದೀಪ್ ಸ್ವಾಗತಿಸಿದರು. ಪತ್ರಕರ್ತ ರೇಮಂಡ್ ಡಿಕೂನಾ ವಂದಿಸಿದರು. ಕೊಂಕ್ಣಿ ನಾಟಕ ಸಭಾದ ಉಪಾಧ್ಯಕ್ಷ ಲಿಸ್ಟನ್ ಡಿಸೋಜ ಹಾಗೂ.ಪ್ರಭಂದಕ ಬೊನಿಫಸ್ ಪಿಂಟೊ ಸಹಕರಿಸಿದರು. ರಶ್ಮಿ ಸನಿಲ್ ನಿರೂಪಿಸಿದರು .