ಉಡುಪಿ, ಡಿಸೆಂಬರ್ 28:  ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಹಾಗೂ ಮಲ್ಪೆ ಕರಾವಳಿ ಕಾವಲು ಪೋಲಿಸ್ ಠಾಣೆ ಇವರ ಸಹಯೋಗದೊಂದಿಗೆ 6 ದಿನಗಳ ಪ್ಲಾಸ್ಟಿಕ್ ಮುಕ್ತ ಕಡಲ ಕಿನಾರೆ ಕಾರ್ಯಕ್ರಮದ ಅಂಗವಾಗಿ ಇಂದು ಮಲ್ಪೆ ಕೊಳ ಬೀಚ್‍ನಿಂದ ಸೀವಾಕ್ ವರೆಗೆ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾರ್ಗದರ್ಶನದಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಮಲ್ಪೆಕರಾವಳಿ ಕಾವಲು ಪೊಲೀಸ್‍ ಠಾಣೆಯ ವರಿಷ್ಠಾಧಿಕಾರಿ ಅಬ್ದುಲ್‍ ಅಹದ್‍ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ಲಾಸ್ಟಿಕ್‍ನಂತಹ ವಸ್ತುಗಳ ಅವ್ಯಾಹತ ಬಳಕೆ ಮತ್ತು ಅವೈಜ್ಞಾನಿಕ ವಿಲೇವಾರಿ, ಪರಿಸರ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರ ನಿರ್ಲಕ್ಷ್ಯದಿಂದ ಪರಿಸರ ನಾಶವಾಗುತ್ತಿದ್ದು, ಇದನ್ನು ಸಂರಕ್ಷಿಸುವ ಸಲುವಾಗಿ ಕಡಲ ತೀರದ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಮುಕ್ತ ಬೀಚ್ ಎಂಬ ಧ್ಯೇಯ ವಾಕ್ಯದೊಂದಿಗೆ ಬೀಚ್‍ಗೆ ಆಗಮಿಸುವ ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ ಸುರಕ್ಷಿತ ಸುಂದರ ಪರಿಸರವನ್ನು ನಿರ್ಮಿಸಲು ಸಹಕರಿಸುವಂತೆ ತಿಳಿಸಿದರು.

ಸ್ವಚ್ಛತಾ ಕಾರ್ಯದಲ್ಲಿ ಮಲ್ಪೆ ಕರಾವಳಿ ಕಾವಲು ಪೋಲಿಸ್ ಠಾಣಾಧಿಕಾರಿ ಪ್ರಮೋದ್‍ಕುಮಾರ್, ಮಲ್ಪೆಯ ಪೋಲಿಸ್ ಇನ್ಸ್‍ಪೆಕ್ಟರ್ ಶಂಕರ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಬಿ.ರತ್ನಾಕರ ಶೆಟ್ಟಿ, ರೆಡ್‍ಕ್ರಾಸ್ ಮಾಜಿ ಖಜಾಂಚಿ ಟಿ. ಚಂದ್ರಶೇಖರ್, ಮಲ್ಪೆಯ ಕೊಚ್ಚಿನ್ ಶಿಫ್ ಯಾರ್ಡ್ ಲಿಮಿಟೆಡ್‍ಸಿ.ಇ.ಓ ಹರಿಕುಮಾರ್ ಹಾಗೂ ಡೆಪ್ಯೂಟಿ ಜನರಲ್ ಮೆನೇಜರ್ ಅಂಬಾಲವನನ್, ಕರಾವಳಿ ಕಾವಲು ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿಗಳು, ಉಡುಪಿ ಕೊಚ್ಚಿನ್ ಶಿಫ್ ಯಾರ್ಡ್ ಲಿಮಿಟೆಡ್‍ನ ಸಿಬ್ಬಂದಿಗಳು, ರೆಡ್‍ಕ್ರಾಸ್, ಡಿಡಿಆರ್‍ಸಿ ಮತ್ತು ವಿವಿಧ ಕಾಲೇಜಿನ ಯುವ ರೆಡ್‍ಕ್ರಾಸ್ ಸ್ವಯಂ ಸೇವಕರು, ಬ್ರಹ್ಮಾವರದ ಎಸ್.ಎಮ್.ಎಸ್‍ ಕಾಲೇಜು, ಪಿ.ಪಿ.ಸಿ ಕಾಲೇಜು, ಎಮ್.ಜಿ.ಎಮ್‍ ಕಾಲೇಜು, ವೈಕುಂಠ ಬಾಳಿಗಾ ಲಾ ಕಾಲೇಜು, ತ್ರಿಶಾ ಕಾಲೇಜು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಸೂರಿನ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.