ಉಡುಪಿ: ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಇತರೆ ಪಕ್ಷದವರು ಇಂದು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 

ಕಾರ್ಕಳದ ಮಂಜುನಾಥ್ ಪೈ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ತಾಲೂಕು ಆಶ್ರಯದಲ್ಲಿ ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಹಾಗೂ ಗ್ಯಾರಂಟಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕರ್ನಾಟಕ ಮಾಡೆಲ್ ಯೋಜನೆಗಳನ್ನು ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಬದಲಿಸಿಕೊಂಡಿದ್ದಾರೆ ಎಂದರು. 

ಕರ್ನಾಟಕದ 1.24 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಹಣ ಸಂದಾಯ ಆಗುತ್ತಿದೆ. ಆದರೆ, ಜಿಎಸ್ಟಿ, ಆದಾಯ ತೆರಿಗೆ ಸಮಸ್ಯೆಯಿಂದ ಸುಮಾರ ಎರಡು ಲಕ್ಷ ಮಹಿಳೆಯರಿಗೆ ಹಣ ಸಂದಾಯ ಆಗುತ್ತಿಲ್ಲ. ಈ ಪೈಕಿ 50 ಸಾವಿರ ಮಹಿಳೆಯರಿಗಿದ್ದ ಜಿಎಸ್ಟಿ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಉಳಿದ ಒಂದೂವರೆ ಲಕ್ಷ ಮಹಿಳೆಯರಿಗೆ ಇರುವ ಸಮಸ್ಯೆಯನ್ನು ಬಗೆ ಹರಿಸಿ ಹಣ ಸಂದಾಯ ಆಗುವಂತೆ ನೋಡಿಕೊಳ್ಳಲಾಗುವುದು ಎಂದರು.

ನಮ್ಮ ಸರ್ಕಾರ ಬಡವರ, ಮಹಿಳೆಯರ ಬಗ್ಗೆ, ದೀನ ದಲಿತರ ಬಗ್ಗೆ ಯೋಚಿಸುತ್ತದೆ.  ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದ್ದು,  ಇಡೀ ವಿಶ್ವವೇ ಭಾರತದ ಕಡೆ ತಿರುಗುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷದ ಯೋಜನೆಗಳು. ಕಾಂಗ್ರೆಸ್ ಪಕ್ಷದ ಇತಿಹಾಸ ಇಡೀ ದೇಶದ ಇತಿಹಾಸ. ಸಾಲಮೇಳ ಮಾಡಿದ ಜನಾರ್ಧನ್ ಪೂಜಾರಿ ಜನರ ಮನೆ ಬಾಗಿಲಿಗೆ ಬ್ಯಾಂಕ್ ಕೊಂಡ್ಯೊಯ್ದರು. ಉಳುವವನೇ ಭೂಮಿ ಒಡೆಯ ಎಂಬ ದಿಟ್ಟ ಕಾಯ್ದೆಯನ್ನು ಇಂದಿರಾಗಾಂಧಿ ಜಾರಿಗೆ ತಂದರು ಎಂದು ಸಚಿವರು ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದರು. 

ಒಂದು ಕಾಲದಲ್ಲಿ ಊರುಗಳಲ್ಲಿ ಬಸ್, ಆಸ್ಪತ್ರೆ ಗಳು ಇರಲಿಲ್ಲ, ಆದರೆ ಇಂದು ಮನೆ ಮನೆಗಳಲ್ಲಿ ಎರಡ್ಮೂರು ಕಾರುಗಳಿವೆ. ಇದು ನಮ್ಮ ಸರ್ಕಾರ ಬಡವರ ಬಗ್ಗೆ ತೆಗೆದುಕೊಂಡ ದಿಟ್ಟ ನಿರ್ಧಾರಗಳೇ ಕಾರಣ ಎಂದರು. 

ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಮೂಲಕ ಬಡವರ ಮಕ್ಕಳಿಗೆ ಪೌಷ್ಟಿಕ ಆಹಾರ, ಬಡವರ ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ್ದು ಇಂದಿರಾಗಾಂಧಿ, ಮುಂದಿನ ತಿಂಗಳಿಗೆ ಸುವರ್ಣ ವರ್ಷ ಪೂರೈಸುತ್ತಿದ್ದು, ನವೆಂಬರ್ ತಿಂಗಳಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು. 

ವೈಜ್ಞಾನಿಕ ಕ್ರಾಂತಿ ಮಾಡಿದ್ದು ನಮ್ಮ ಸರ್ಕಾರ,  ಗ್ರಾಮ ಪಂಚಾಯತಿ ಗಳಲ್ಲಿ 33% ಮೀಸಲಾತಿ ತಂದಿದ್ದು ನಮ್ಮ ಸರ್ಕಾರ. ನಮ್ಮ ಕೆಲಸಗಳನ್ನು ನಾವು ಹೆಮ್ಮೆಯಿಂದ ಹೇಳಿಕ್ಳೋಣ. ನೋಟ್ ಬ್ಯಾನ್, ಕರೋನಾ ಮಹಾಮಾರಿಯಿಂದ ತತ್ತರಿಸಿದ್ದ ರೈತರು, ಬಡ ಜನರ ಒಳಿತಿಗಾಗಿ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಮಹಿಳೆಯರಿಗೋಸ್ಕರ ಏನಾದರೂ ಮಾಡೋಣ ಅಂತ ಚಿಂತಿಸಿ, ಈ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸುವ ನಿರ್ಧಾರ ಮಾಡಿದೆವು. ಇದು ನಮ್ಮ ಸರ್ಕಾರದ ಸಾಧನೆ ಎಂದು ಸಚಿವರು ಹೇಳಿದರು. 

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ, ತಾಲ್ಲೂಕಿನಲ್ಲಿ 36,495 ಗೃಹ ಜ್ಯೋತಿ, 36,676 ಗೃಹ ಲಕ್ಷ್ಮಿ, 31,064 ಅನ್ನ ಭಾಗ್ಯ ಹಾಗೂ 532 ಯುವ ನಿಧಿ ಫಲಾನುಭವಿಗಳಿದ್ದು, ಒಟ್ಟು 222 ಕೋಟಿ 75 ಲಕ್ಷ 35 ಸಾವಿರ ರೂ  ಹಣ ಸಂದಾಯವಾದೆ. ಗೃಹ ಲಕ್ಷ್ಮಿ ಯೋಜನೆಯ 21 ಕಂತು  ಒಟ್ಟು 42,000 ರೂ ಮಹಿಳೆಯರ ಖಾತೆಗೆ ಸಂದಾಯ ವಾಗಿದ್ದು ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲೆಯಾಗುತ್ತಿದ್ದಾರೆ. ಈ ಹಣದಿಂದ ಮಹಿಳೆಯರ ಮನೆ ನಿರ್ವಹಣೆ ಸಾಧ್ಯವಾಗಿದೆ. ಯೋಜನೆಯಲ್ಲಿ ಕೆಲವು ತಾಂತ್ರಿಕ ತೊಂದರೆಗಳು ತೋರಿದ್ದು ಪ್ರತೀ ಗ್ರಾಮ ಮಟ್ಟದಲ್ಲಿ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಎಲ್ಲರ ಸಹಕಾರದಿಂದ ಎಲ್ಲ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆ ಎಂದರು 

ಸಮಾರಂಭದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ  ಸಮಿತಿ ಉಪಾಧ್ಯಕ್ಷರಾದ ಉದಯ್ ಶೆಟ್ಟಿ ಮುನಿಯಾಲು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಜಿತ್ ಹೆಗ್ಡೆ, ಕಾರ್ಕಳ ಪುರಸಭೆ ಅಧ್ಯಕ್ಷರಾದ ಯೋಗೀಶ ದೇವಾಡಿಗ, ಕುಕ್ಕುಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಷಾ, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಕಾರ್ಕಳ ತಹಶಿಲ್ದಾರರಾದ ಪ್ರದೀಪ್ ಆರ್, ಇಒ ಪ್ರಶಾಂತ್ ರಾವ್, ಲೀನ ಬ್ರಿಟ್ಟೋ, ಪ್ರದೀಪ್ ಉಪಸ್ಥಿತರಿದ್ದರು.