ವಿದ್ಯಾಗಿರಿ:  ಇಡೀ ಜಗತ್ತು ಮುಂದುವರಿಯುವುದು ದೊಡ್ಡ ಮಾತುಗಳಿಂದ ಹಾಗೂ  ದೊಡ್ಡ ದೊಡ್ಡ ಕಟ್ಟಡಗಳಿಂದ ಅಲ್ಲ. ಮನುಷ್ಯನ ಮನಸ್ಸಿನಲ್ಲಿರುವ ಸಣ್ಣ ಸಣ್ಣ ಆಸೆಗಳು ಹಾಗೂ ಆಸೆಗಳನ್ನು ಈಡೇರಿಸುವುದಕ್ಕೆ ಆ ಸಮುದಾಯ ಹಾಗೂ ಲಕ್ಷಾಂತರ ಜನ ಮಾಡುವ ಸಣ್ಣ ಸಣ್ಣ ಚಟುವಟಿಕೆಗಳಿಂದ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. 

ಆಳ್ವಾಸ್ ತುಳು  ಸಂಸ್ಕೃತಿ ಅಧ್ಯಯನ ಕೇಂದ್ರ ಮತ್ತು ಇಂಗ್ಲಿಷ್ ಸ್ನಾತಕೋತ್ತರ ವಿಭಾಗದ ವತಿಯಿಂದ  ನಡೆದ ಪ್ರಥಮ ಪಣಿಯಾಡಿ ಪ್ರಶಸ್ತಿ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ‘ನಾಣಜ್ಜೆರ್ ಸುದೆ ತಿರ್ಗಾಯೆರ್’ ತುಳು ಕಾದಂಬರಿಯ ಪುನರ್ ಮುದ್ರಿತ ಇಂಗ್ಲಿಷ್  ಅನುವಾದಿತ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ  ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. 

ಅಂತಃಸತ್ವಗಳು ನಮ್ಮನ್ನು ಬೆಳೆಸುತ್ತವೆ ಹೊರತು ಬಾಹ್ಯವಾಗಿ ನಾವು ಕಟ್ಟಿ ಬೆಳೆಸಿದ ಯಾವುದೇ ರಚನೆಗಳಲ್ಲ ಎಂದರು. 

ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ  ಕಾಲೇಜಿನ ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿ, ಪ್ರಾದೇಶಿಕ ಕಾದಂಬರಿಗಳ ಸೊಬಗನ್ನು ಇಂಗ್ಲಿಷ್ ಗೆ ಅನುವಾದಿಸುವುದು ಕಷ್ಟ.  ಹಾಗೆಯೇ ನಮ್ಮ ಸಂಸ್ಕೃತಿಯನ್ನು ಗೊತ್ತಿಲ್ಲದವರಿಗೆ ತಿಳಿಸುವ ಪ್ರಯತ್ನವನ್ನು ಮಾಡುವ ಕೆಲಸ ಈ ಪುಸ್ತಕದಿಂದ ಆಗಿದೆ ಎಂದರು. 

ಕಾದಂಬರಿಯ ಆಯ್ದವಾಚನವನ್ನು ಕನ್ನಡದಲ್ಲಿ ಶಶಾಂಕ್, ತುಳುವಿನಲ್ಲಿ ಡಾ. ಜ್ಯೋತಿ ರೈ, ಇಂಗ್ಲೀಷ್  ಗಗನ, ಮಲಯಾಳಂ-ನಫಿಯಾ, ಕೊಂಕಣಿ- ಹರ್ಷಿಣಿ ಮಾಡಿದರು. 

‘’ನಾಣಜ್ಜೆರ್ ಸುದೆ ತಿರ್ಗಾಯೆರ್" ಕಾದಂಬರಿಯ ಕರ್ತೃ ಡಾ. ಮಹಾಲಿಂಗ ಭಟ್, ಕೃತಿಯ ಇಂಗ್ಲಿಷ್ ಅನುವಾದಕ, ಆಳ್ವಾಸ್ ಇಂಗ್ಲೀಷ್ ವಿಭಾಗದ ಮಖ್ಯಸ್ಥ ಡಾ. ಟಿ.ಕೆ. ರವೀಂದ್ರನ್ , ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. 

ಡಾ. ಯೋಗೀಶ್ ಕೈರೋಡಿ  ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಡಾ. ಜ್ಯೋತಿ ರೈ  ವಂದಿಸಿ, ಪ್ರಖ್ಯಾತ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.