ಧರ್ಮಸ್ಥಳ ಜ.07:“ಯಾವುದೇ ಔಷಧಿ, ಇಂಜಕ್ಷನ್, ಮದ್ದು ಮಾತ್ರೆಗಳಿಲ್ಲದೆ, ಯಾವುದೇ ಅಡ್ಡ ಪರಿಣಾಮಗಳುಂಟು ಮಾಡದೆ ನೇರವಾಗಿ ಮನಮುಟ್ಟುವ ಕೆಲಸ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಿಂದ ಆಗುತ್ತಿದೆ. ವ್ಯಸನಗಳಲ್ಲಿ ಒಳ್ಳೆಯ ವ್ಯಸನ, ಒಳ್ಳೆಯ ಚಟುವಟಿಕೆಗಳು, ಒಳ್ಳೆಯ ಸಂಸ್ಕಾರಗಳು ಇರುವ ಹಾಗೆ ಕೆಟ್ಟ ವ್ಯಸನಗಳು, ಕೆಟ್ಟ ಚಟುವಟಿಕೆಗಳು, ಕೆಟ್ಟ ಸಂಸ್ಕಾರಗಳಿರುತ್ತವೆ. ಇವುಗಳಲ್ಲಿ ಒಳ್ಳೆಯ ಅಭ್ಯಾಸಯಾವುದು ಕೆಟ್ಟಅಭ್ಯಾಸ ಯಾವುದು ಎಂಬುದನ್ನು ಗುರುತಿಸುವುದೇ ಅತೀ ಪ್ರಾಮುಖ್ಯವಾದ ವಿಚಾರ. ಕೆಲವೊಮ್ಮೆಕೆಟ್ಟ ಅಭ್ಯಾಸಗಳನ್ನೇ ಉತ್ತಮಎಂಬುದಾಗಿ ತಿಳಿದಾಗ ಅಂತಹವರಿಗೆ ಮನಪರಿವರ್ತನೆಯ ಜೊತೆಗೆ ದೈಹಿಕ, ಮಾನಸಿಕ ಚಿಕಿತ್ಸೆಯನ್ನ್ಸು ನೀಡಿಸನ್ಮಾರ್ಗದಲ್ಲಿ ನಡೆಸುವ ಪ್ರಯತ್ನ ಮಾಡಬೇಕಾಗುತ್ತದೆ. ಶಾಶ್ವತ ಸಂತೋಷವನ್ನು ಬಯಸುವವರು ಧರ್ಮದ ದಾರಿಯಲ್ಲಿಯೇ ನಡೆಯಬೇಕು. ಕ್ಷಣಿಕ ಸಂತೋಷಕ್ಕಾಗಿ ಮದ್ಯಪಾನ, ಡ್ರಗ್ಸ್, ಮುಂತಾದ ವ್ಯಕ್ತಿತ್ವವನ್ನು ನಾಶ ಮಾಡುವ ಚಟಗಳಿಂದ ಹೊರಬಂದು ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ದೃಢಚಿತ್ತದಿಂದ ಸಂಕಲ್ಪಶಕ್ತಿಯನ್ನು ಬೆಳೆಸಿ ಸತ್ಯ, ಅಹಿಂಸೆ, ಸತ್ಸಂಗದಂತಹವಿಶಿಷ್ಠ ವಿಚಾರಗಳನ್ನು ಮೈಗೂಡಿಸಿಕೊಂಡು ಸಂಸಾರದಲ್ಲಿ ನೆಮ್ಮದಿ, ಸಾಮಾಜಿಕ ಗೌರವದೊಂದಿಗೆ ಆರ್ಥಿಕ ಸದೃಢತೆಯಿಂದ ಬಾಳಿದಾಗ ಕುಟುಂಬ ಮತ್ತು ಸಮಾಜಸುಭೀಕ್ಷೆಯ ಪಥದಲ್ಲಿ ಮುನ್ನಡೆಯಲು ಸಾಧ್ಯ. ಇದಕ್ಕಾಗಿಯೇ ವ್ಯಸನಮುಕ್ತಿಗಾಗಿ ಶಿಬಿರಗಳನ್ನು ಆಯೋಜನೆ ಮಾಡಿಕೆಟ್ಟ ಚಟಗಳಿಂದ ಮುಕ್ತಿ ಹೊಂದಲುಯೋಜನೆಯ ಮೂಲಕ ಸತತ ಪ್ರಯತ್ನ ನಡೆಸಲಾಗುತ್ತಿದೆ”ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜನಜಾಗೃತಿ ವೇದಿಕೆ ಮೂಲಕ ಮಂಡ್ಯಜಿಲ್ಲೆಯ, ಮದ್ದೂರು ತಾಲೂಕಿನ, ಶ್ರೀ ಸೋಮೇಶ್ವರ ಸಭಾಭವನ, ಬೆಸಗರಹಳ್ಳಿ ಎಂಬಲ್ಲಿ ನಡೆದ 1500ನೇ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. 

ಶಿಬಿರವು ಒಂದು ವಾರಗಳ ಕಾಲ ನಡೆಯುತ್ತಿದ್ದು, ಮಂಡ್ಯಜಿಲ್ಲೆಯ ವಿವಿಧೆಡೆಯಿಂದ 61 ಮಂದಿ ಶಿಬಿರಾರ್ಥಿಗಳು ದಾಖಲಾಗಿದ್ದರು. ಜನಜಾಗೃತಿ ಜಿಲ್ಲಾಧ್ಯಕ್ಷರಾದ ನಿಂಗೇ ಗೌಡ, ಸಭಾಭವನದ ಮಾಲಕರಾದಶ್ರೀ ಸೋಮೇಗೌಡ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸಂದರ್ಶ ಪಿ., ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಂಗಾಧರರೈ., ಮಂಡ್ಯ ಜಿಲ್ಲೆಯ ಯೋಜನೆಯ ನಿರ್ದೇಶಕರಾದ ವಿನಯಕುಮಾರ್ ಸುವರ್ಣ, ಯೋಜನಾಧಿಕಾರಿ ಬಿ.ಆರ್. ಯೋಗೀಶ್, ಜನಜಾಗೃತಿ ಯೋಜನಾಧಿಕಾರಿ ಶ್ರೀ ಭಾಸ್ಕರ ಎನ್., ಶಿಬಿರಾಧಿಕಾರಿ ದಿವಾಕರ ಪೂಜಾರಿ, ಆರೋಗ್ಯ ಸಹಾಯಕಿ ಶ್ರೀಮತಿ ಫಿಲೋಮಿನಾ ಡಿ’ಸೋಜ ಶಿಬಿರ ನಡೆಸುವಲ್ಲಿ ಸಹಕರಿಸಿರುತ್ತಾರೆ. ವರ್ಚುವಲ್ ಕಾನ್ಪರೆನ್ಸ್ ಸಭೆಯಲ್ಲಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಮೋಹನ್ ಉಪಸ್ಥಿತರಿದ್ದರು.