ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡಬಿದ್ರಿ: ಕನ್ನಡ ನಾಡು ನುಡಿ ಸಂಸ್ಕೃತಿ ಯು ಪೋಷಕರು, ದ.ಕ.ಜಿಲ್ಲಾ ಹಾಗೂ ರಾಜ್ಯ ಕನ್ನಡ ಸಂಘದ ಮುಂಚೂಣಿಯಲ್ಲಿ ನಿಂತು ಕನ್ನಡ ತೇರು ಎಳೆದು, ಎಳೆಯುವವರಿಗೆ ಬೆಂಬಲ ನೀಡಿದ, ಪುನರೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣ ಕರ್ತರಾದ, ಅಸಹಾಯಕರಿಗೆ -ದುರ್ಬಲರಿಗೆ ಸ್ವಂತ ಹಣದಲ್ಲಿ ಸೂರು ನಿರ್ಮಿಸಿ ಕೊಟ್ಟ, ಅಂತರ್ ರಾಷ್ಟ್ರೀಯ ಲಯನ್ ಸಂಸ್ಥೆಯಿಂದ ಸಮ್ಮಾನಿತರಾದವರು, ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಎಲ್ಲವೂ ಎಂಬ ಆದರ್ಶವನ್ನು ಹೊಂದಿದ ಕರ್ಮಯೋಗಿ-ಧರ್ಮದರ್ಶಿ ಹರಿಕೃಷ್ಣ ಪುನರೂರು ರವರ ಅಭಿವಂದನಾ ಸಮಾರಂಭ ಮೇ 10 ರಂದು ಪಿಲಿಕುಳದ ಸ್ಕೌಟ್ಸ್ ಗೈಡ್ಸ್ ಪ್ರದೇಶದಲ್ಲಿ ನಡೆಯಿತು. ಸ್ವಚ್ಛ, ಶುದ್ಧ, ನಿಷ್ಠಾವಂತ ನಾಯಕರಲ್ಲಿ ಒಬ್ಬರಾದ ಹರಿಕೃಷ್ಣ ಪುನರೂರು ಪ್ರತೀ ವರ್ಷ ಡಾ.ಮೋದಿಯವರಿಂದ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ, 60 ನೇ ವರ್ಷದ ಸಂದರ್ಭದಲ್ಲಿ ನೂರು ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ ಶ್ರೇಷ್ಠ ವ್ಯಕ್ತಿತ್ವದವರು ಎಂದು ತಮ್ಮ ಆಶೀರ್ವಚನದಲ್ಲಿ ಪೇಜಾವರ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥರು ಹಾಡಿ ಹೊಗಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜರ್ಸಿ ಡಾ. ಡಿ ವೀರೇಂದ್ರ ಹೆಗ್ಗಡೆ ಮಾತನಾಡಿ ಸದಾ ಕರ್ಮ ಯೋಗಿಯಾಗಿ ಎಲ್ಲ ಕೈಂಕರ್ಯವನ್ನು ಕುಂದಿಲ್ಲದಂತೆ ನಿರ್ವಹಿಸಿದ ಹರಿಕೃಷ್ಣರಿಗೆ ಈ ಬಿರುದು ಸಮಂಜಸವೆಂದು ಶುಭಹಾರೈಸಿದರು.
ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಮಾತನಾಡಿ ಇಂತಹ ಮೇರು ವ್ಯಕ್ತಿಗಳ ಬಗ್ಗೆ ಇಂದಿನ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಯುವಂತೆ ಅವರನ್ನು ಸೇರಿಸಿಕೊಂಡು ಕಾರ್ಯಕ್ರಮವನ್ನು ಮಾಡಬೇಕು ಎಂದು ಸೂಚನೆಯನ್ನು ಕೊಟ್ಟರು. ಉತ್ತಮ ಜೀವನ ಚರಿತ್ರೆಯನ್ನು ಹೊಂದಿರುವವರ ವಿಚಾರ ಕಲಿಯುವವರಿಗೆ ಸದಾ ದಾರಿದೀಪವಾಗಿರಲಿ ಎಂದು ಹಾರೈಸಿದರು.
ಖ್ಯಾತ ಸಾಹಿತಿ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅಭಿವಂದನ ಭಾಷಣದಲ್ಲಿ ಕುದುರೆ ಇದ್ದು ಕುದುರೆ ಏರದ ಸವಾರ ಹರಿಕೃಷ್ಣರು ಸಾಮಾನ್ಯರಲ್ಲಿ ಅಸಾಮಾನ್ಯರು, ಸಾಹಿತ್ಯಕ್ಕೆ ಸಂಭ್ರಮ ತಂದವರು ಎಂದು ಹೊಗಳಿದರು.
ರಂಗಭೂಮಿ, ಯಕ್ಷಗಾನ ಕ್ಷೇತ್ರಕ್ಕೆ ಸದಾ ಬೆನ್ನೆಲುಬಾಗಿ ಹರಸಿದವರು ಪುನರೂರು ಎಂದು ನೆನಪಿಸಿಕೊಂಡರು ಶಾಸಕ ಉಮಾನಾಥ ಕೋಟ್ಯಾನ್.
ವೇದಿಕೆಯಲ್ಲಿ ಪತ್ನಿ ಉಷಾರಾಣಿ, ಮುಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು, ರೆ.ಫಾ. ಫ್ರಾನ್ಸಿಸ್ ಕ್ಸೇವಿಯರ್ ಗೋಮ್, ಪ್ರದೀಪ್ ಕುಮಾರ್ ಕಲ್ಕೂರ್, ಭುವನಾಭಿರಾಮ ಉಡುಪ, ಡಾ.ಎಂ.ಪಿ.ಶ್ರೀನಾಥ್, ಕೆ.ಶ್ರೀಪತಿ ಭಟ್, ಹಾಜರಿದ್ದರು.
ಅಭಿನಂದನ ಸಮಿತಿಯ ಅಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಿತ್ಯಾನಂದರಾವ್ ಧನ್ಯವಾದ ಸಲ್ಲಿಸಿದರು.