ಉಡುಪಿ: ಜಿಲ್ಲೆಯ ಪ.ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 800 ಹಾಸಿಗೆಗಳುಳ್ಳ ಎನ್.ಎ.ಬಿ.ಹೆಚ್. ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕನಿಷ್ಠ 75% ಹುದ್ದೆಗಳನ್ನು ಮೀಸಲಿರಿಸುವ ಭರವಸೆಯ ಮೇರೆಗೆ ಕೌಶಲಾಭಿವೃದ್ದಿ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಅವರು ಗುರುವಾರ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯ ಒಟ್ಟು 123 ಮಂದಿಗೆ ತರಬೇತಿಗೆ ಅವಕಾಶವಿದ್ದು, ಈ ಕುರಿತಂತೆ ಸೆಪ್ಟಂಬರ್ 12 ರಂದು ಉಡುಪಿಯ ಪುರಭವನದಲ್ಲಿ ಉದ್ಯೋಗ ಮೇಳ ನಡೆಸುವುದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು, ಪಿ.ಯು.ಸಿ, ಪದವಿ, ಜಿಎನ್‍ಬಿ/ಬಿಎಸ್‍ಸಿ ನರ್ಸಿಂಗ್ ವಿದ್ಯಾರ್ಹತೆ ಹೊಂದಿರುವ ಪ.ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಬೆಂಗಳೂರಿನ ಅಪೊಲೋ, ರಾಮಯ್ಯ ಆಸ್ಪತ್ರೆ ಮತ್ತು ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ವಿವಿಧ ಹುದ್ದೆಗಳಿಗಾಗಿ,  ಕೌಶಲಾಭಿವೃಧ್ದಿ ತರಬೇತಿಯೊಂದಿಗೆ ಸ್ಟೈಪೆಂಡ್ ನೀಡಲಾಗುವುದು.

ತರಬೇತಿಯ ನಂತರ ಕನಿಷ್ಠ 800 ಹಾಸಿಗೆಯುಳ್ಳ ಎನ್.ಎ.ಬಿ.ಹೆಚ್. ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕನಿಷ್ಠ 75% ಹುದ್ದೆಗಳನ್ನು , ತರಬೇತಿ ಪಡೆದ ಅಭ್ಯರ್ಥಿಗಳಿಗೆ  ಮೀಸಲಿಡಲಾಗುವುದು. ಅಭ್ಯರ್ಥಿಗಳ ಆಯ್ಕೆಯಲ್ಲಿ ಎಲ್ಲಾ ವಿಭಾಗಗಳಲ್ಲಿ , ಕನಿಷ್ಠ 50% ಮಹಿಳಾ ಅಭ್ಯರ್ಥಿಗಳ ಆಯ್ಕೆಗೆ ಪ್ರಾದಾನ್ಯತೆ ನೀಡಿದ್ದು, ಮಹಿಳಾ ಅಭ್ಯರ್ಥಿಗಳು ಇಲ್ಲವಾದಲ್ಲಿ ಪುರುಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಡಿಸಿ ಹೇಳಿದರು.

ಈ ಉದ್ಯೋಗ ಮೇಳದ ಕುರಿತಂತೆ ಪ.ಜಾತಿ ಪಂಗಡದ ಎಲ್ಲಾ ಸಂಘ ಸಂಸ್ಥೆಗಳಿಗೆ ಅಗತ್ಯ ಮಾಹಿತಿಯನ್ನು ನೀಡುವುದರ ಮೂಲಕ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಮತ್ತು ಐಟಿಡಿಪಿ ಇಲಾಖೆಯ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಶೋಕ್ ಉಪಸ್ಥಿತರಿದ್ದರು.