ಬೆಳ್ತಂಗಡಿ:- ಬೆಳಗ್ಗಿನ ಜಾವ ಮನೆಗೆ ನುಗ್ಗಿ ಮನೆಮಂದಿಯನ್ನು ಕಟ್ಟಿಹಾಕಿದ ದರೋಡೆಕೋರರು ಸುಮಾರು  13 ಲಕ್ಷರೂ. ಮೌಲ್ಯದ ನಗ ನಗದು ದರೋಡೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮಿಯೋ ನಿವಾಸಿ ಅಚ್ಯುತ ಭಟ್ ಎಂಬವರ ಮನೆಯಲ್ಲಿ ಇಂದು ಮುಂಜಾನೆ 2.30 ರ ಸುಮಾರಿಗೆ ಕಳ್ಳರು ನುಗ್ಗಿ ಮನೆ ಮಂದಿಯನ್ನು ಕಟ್ಟಿ ಹಾಕಿ ಕೈಚಳಕ ತೋರಿಸಿದ್ದಾರೆ. ಅಚ್ಯುತ ಭಟ್ ಅವರು ಉಜಿರೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದರು.ರಾತ್ರಿ ಸುಮಾರು ನಾಯಿಗಳು ಬೊಗಳಿದ ಸದ್ದುಕೇಳಿ ಮನೆಯವರು ಬಾಗಿಲು ತೆರೆದಾಗ ದರೋಡೆಕೋರರು ಮನೆಯೊಳಗೆ ನುಗ್ಗಿ ಅಚ್ಯುತ ಭಟ್ ಸೇರಿದಂತೆ ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಲಾಗಿದೆ. ನಾಲ್ವರು ದರೋಡೆಕೋರರು ಮುಸುಕುಧಾರಿಗಳಾಗಿ ಮನೆಗೆ ನುಗ್ಗಿದ್ದಾರೆ. ಒಂದು ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ ಮನೆಮಂದಿಯ ಜೀವಹಾನಿ ಮಾಡುವುದುದಾಗಿ ದರೋಡೆಕೋರರು ಬೆದರಿಕೆಯೊಡ್ಡಿದ್ದಾರೆ.ಮನೆಯಿಂದ 40 ಪವನ್ ಚಿನ್ನ, ಒಂದು ಕೆಜಿ ಬೆಳ್ಳಿ,25 ಸಾವಿರ ರೂ. ದೋಚಲಾಗಿದೆ.ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ , ಧರ್ಮಸ್ಥಳ ಪಿಎಸ್ಐ ಪವನ್ ನಾಯ್ಕ್ ಮತ್ತು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.