ಮಂಗಳೂರು:-  ಕೋವಿಡ್ 19 ಮಹಾಮಾರಿಯಿಂದಾಗಿ ಜಗತ್ತೆಲ್ಲಾ ತಲ್ಲಣಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಬಡಜನ, ಕಾರ್ಮಿಕರು ಒಟ್ಟಾರೆಯಾಗಿ ಬಳಲಿದ್ದಾರೆ. ಅಂತಹ ಸಂದರ್ಭದಲ್ಲಿ ಜನರ ಬವಣೆಗಳಿಗೆ ಸ್ಪಂದಿಸುವ ಬದಲಾಗಿ ಆಳುವ ಜನ ಈ ಸಂದರ್ಭವನ್ನು ತಮ್ಮ ಗುಪ್ತ ಕಾರ್ಯಸಾಧನೆಗಳ ಅನುಷ್ಠಾನಕ್ಕಾಗಿ ಉಪಯೋಗಿಸಲು ಮುಂದಾಗಿದ್ದಾರೆ. 

   ನೂರಾರು ವರ್ಷಗಳ ಹೋರಾಟದಿಂದ ಗಳಿಸಿಕೊಂಡ ಕಾರ್ಮಿಕ ಕಾನೂನುಗಳನ್ನು ನಿಷ್ಕ್ರಿಯಗೊಳಿಸಲು ಸರಕಾರಗಳು ಈ ಸಂದರ್ಭವನ್ನು ಉಪಯೋಗಿಸುತ್ತಿವೆ. ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರರಿಗೆ ಸಂಬಳ ಸಿಗದೆ ಅವರು ಮತ್ತು ಅವರ ಕುಟುಂಬ ಉಪವಾಸ ಬೀಳುವಂತಾಗಿದೆ. ಕೆಲವು ಸರಕಾರಗಳು ಕೆಲವೊಂದು ಪರಿಹಾರ ಘೋಷಿಸಿರೂ ಒಟ್ಟಾರೆಯಾಗಿ ಜನಸ್ತೋಮಕ್ಕೆ ಅದು ತಲುಪುತ್ತಿಲ್ಲ. ಬಡಜನರು, ಕಾರ್ಮಿಕರು ಈ ವಿಷಮ ಸ್ಥಿತಿಯಲ್ಲಿ ಬದುಕುಳಿಯಲು ಸಾಧ್ಯವಾಗುವಂತೆ ಕೆಲವು ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸರಕಾರದ ಮುಂದಿರಿಸಿತ್ತು. ಆದರೆ ಸರಕಾರ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮನ್ನಿಸದೆ, ಬಂಡವಾಳಿಗರಿಗೆ, ಕಾರ್ಪರೇಟ್‌ಗಳಿಗೆ ಹಾಗೂ ವಿದೇಶಿ ಹೂಡಿಕೆದಾರರಿಗೆ ಸಹಾಯಹಸ್ತ ಚಾಚುವುದರ ಹೆಸರಲ್ಲಿ ಬಡಜನ ಮತ್ತು ಕಾರ್ಮಿಕರನ್ನು ತುಳಿಯಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿದೆ. 

      ಸರಕಾರದ ಈ ಧೋರಣೆಗಳ ವಿರುದ್ದ ಕಾರ್ಮಿಕ ವರ್ಗ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಿದೆ. 2020ರ ಮೇ 22ರಂದು ಮೊದಲ ಹಂತದ ಪ್ರತಿಭಟನೆ ಯಶಸ್ವಿಯಾಗಿ ನಡೆದರೂ ಸರಕಾರ ಅದಕ್ಕೆ ಸ್ಪಂದಿಸಿಲ್ಲ. ಅದ್ದರಿಂದ ಮುಂದಿನ ಹಂತದ ಹೋರಾಟವಾಗಿ 2020ರ ಜುಲೈ 3ರಂದು ದೇಶವ್ಯಾಪಿ ಪ್ರತಿಭಟನೆ  ನಡೆಸಲು ಕಾರ್ಮಿಕ ವರ್ಗ ನಿರ್ಧರಿಸಿದೆ. 

   ಅಂದು ದೇಶಾಧ್ಯಂತ ದೇಶ, ರಾಜ್ಯ, ಜಿಲ್ಲೆ, ತಾಲೂಕು, ಹಾಗೂ ಗ್ರಾಮಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಲಿದ್ದೇವೆ. ನಮ್ಮ ಜಿಲ್ಲೆಯಲ್ಲೂ ವಿವಿಧ ಕೇಂದ್ರಗಳಲ್ಲಿ ಈ ಪ್ರತಿಭಟನೆಗಳು ನಡೆಯಲಿವೆ. 

 ಮುಖ್ಯ ಬೇಡಿಕೆಗಳು:

  1. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮೂಲಕ ದುರ್ಭಲಗೊಳಿಸುವುದನ್ನು ಕೂಡಲೇ ನಿಲ್ಲಿಸ ಬೇಕು.
  2. ಲಾಕ್ ಡೌನ್ ಸಂದರ್ಭದಲ್ಲಿ ವೇತವನ್ನು ಪಾವತಿಸಿ, ಕೆಲಸ ಕೊಡಸಬೇಕು.
  3.  ಕೊರೋನಾ ವಾರಿಯರರನ್ನು ಖಾಯಂಗೊಳಿಸಿ, ರಕ್ಷಿಸ ಬೇಕು.

  4. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವವರಿಗೆ 6 ತಿಂಗಳು ಮಾಸಿಕ ರೂ7500 ಪರಿಹಾರ ಕೊಡಿಸಬೇಕು.

  5.  ಎಲ್ಲಾ ಕಾರ್ಮಿಕರಿಗೆ 6 ತಿಂಗಳ ವರೆಗೆ ಪಡಿತರ ಒದಗಿಸಬೇಕು. 

  6. ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ನಗರವಾಸಿಗಳಿಗೂ ವಿಸ್ತರಿಸಬೇಕು.

  7. ವಲಸೆ ಕಾರ್ಮಿಕರಿಗೆ ಊರಿಗೆ ಹೋಗಲು ಅನುವು ಮಾಡಿಕೊಡಬೇಕು. ಅವರಿಗೂ ಉದ್ಯೋಗ ಖಾತ್ರಿ ಯೋಜನೆ ಜಾರಿಮಾಡಬೇಕು. 

  8. ಖಾಸಗೀಕರಣ ನಡೆಯನ್ನು ಕೈಬಿಡಬೇಕು.

  9. ನೌಕರರ ತುಟ್ಟಿಬತ್ತೆ ಸ್ಥಗಿತೀಕರಣ ಕೈಬಿಡಬೇಕು.

  10. ಯೋಜನಾ ನೌಕರರಿಗೆ ಕೊರೋನಾ ಕೆಲಸದ ಪ್ರೋತ್ಸಾಹಧನ ಕೊಡಬೇಕು.

  11. ಅನೇಕ ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ಘೋಷಣೆಯಾಗಿದ್ದರೂ ಅದು ಎಲ್ಲರಿಗೂ ಸರಿಯಾಗಿ ತಲುಪಿಲ್ಲ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು,

  12. ಬೀಡಿ, ಟೈಲರ್, ಹೊಟೇಲ್ ಸಾರಿಗೆ, ಬೀದಿಬದಿ, ಹಮಾಲಿ ಮುಂತಾದ ಅಸಂಘಟಿತ ಕಾರ್ಮಿಕರಿಗೆ ಇದುವರೆಗೂ ಯಾವುದೇ ಸಹಾಯಧನ ಘೋಷಣೆಯಾಗಿಲ್ಲ. ಅವರಿಗೆ ಕನಿಷ್ಠ 10000/- ಸಹಾಯಧನ ಕೂಡಲೇ ಘೋಷಿಸಬೇಕು. 

  13. ಸಣ್ಣ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯ ಸಂಬಳವನ್ನು ಸರಕಾರ ಭರಿಸಬೇಕು.

  14. ಬಂಡವಾಳ ಹಿಂತೆಗೆತ, ಖಾಸಗೀಕರಣ, ದೇಶದ ಪ್ರಮುಖ ಸಂಸ್ಥೆಗಳಲ್ಲಿ ವಿದೇಶಿ ಹೂಡಿಕೆಗೆ ಅನುವು ಮಾಡಿ ಕೊಡುವುದು ಮುಂತಾದುವುಗಳನ್ನು ಕೂಡಲೇ ನಿಲ್ಲಿಸಬೇಕು.

ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಪರವಾಗಿ, ಚಿತ್ತರಂಜನ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಎಚ್ ವಿ ರಾವ್, ಮಹಮ್ಮದ್ ರಫಿ ,ಹಾಗೂ ಇತರ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಫೆಡರೇಶನುಗಳು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.