ಮಂಗಳೂರು:  ಬಂಟ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಪರಿಹಾರ ಒದಗಿಸಿಕೊಡಲಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಅವರು ನಗರದ ಬಂಟ್ಸ್‍ಹಾಸ್ಟೆಲ್‍ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಸುಮಾರು 46 ಮಂದಿ ಫಲಾನುಭವಿಗಳಿಗೆ ಪರಿಹಾರಧನ ವಿತರಿಸಿ ಮಾತನಾಡಿದರು.

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮಿಳನದಲ್ಲಿ ಅಶಕ್ತ ಕುಟುಂಬಗಳ ನೂರು ಮನೆಗಳಿಗೆ ಒಕ್ಕೂಟದ ವತಿಯಿಂದ ಧನ ಸಹಾಯ ನೀಡುವುದೆಂದು ಘೋಷಿಸಲಾಗಿತ್ತು. ಅದರಂತೆಯೇ ಒಂದು ವರ್ಷದ ಅವಧಿಯಲ್ಲಿ 112 ಮನೆಗಳನ್ನು ಮಂಜೂರು ಮಾಡಿದ್ದು, ಸಮಾಜದಲ್ಲಿರುವ ಬಡ ಜನರೊಂದಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನೆರವಿನ ಹಸ್ತ ನೀಡಿ ಕೆಲಸ ಮಾಡುತ್ತಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಕಳೆದ ಎಪ್ರಿಲ್ 1ರಿಂದ  ಸೆಪ್ಟಂಬರ್‍ನವರೆಗೆ ರೂ. 75 ಲಕ್ಷಕ್ಕೂ  ಮಿಕ್ಕಿ ಸಹಾಯಧನವನ್ನು ಫಲಾನುಭವಿಗಳಿಗೆ ಈಗಾಗಲೇ ವಿತರಿಸಲಾಗಿದೆ. ಖಾಯಿಲೆಗೆ ತುತ್ತಾಗಿರುವ ಪುಷ್ಪವತಿ, ಬಾಲಪ್ಪ, ಸೌಮ್ಯ, ಸುರೇಶ್ ಶೆಟ್ಟಿ, ಪುಷ್ಪಲತ, ಕೃಷ್ಣಪ್ಪ ಶೆಟ್ಟಿ, ಬಾಲಕೃಷ್ಣ ರೈ, ರೇವತಿ ಶೆಟ್ಟಿ, ಉದಯ ರೈ, ಜ್ಯೋತಿ ಕೆ. ಶೆಟ್ಟಿ, ಸುಮಲತ ಶೆಟ್ಟಿ, ಪೂಜಾ ಶೆಟ್ಟಿ, ಜಯಂತಿ ಹೆಗ್ಡೆ, ಸಂತೋಷ್ ಹೆಗ್ಡೆ, ದೀಪ ಶೆಟ್ಟಿ, ಹಾಗೂ ಇತರರಿಗೆ, ವಿದ್ಯಾಭ್ಯಾಸಕ್ಕೆ ನೆರವು ಕೋರಿ ಅರ್ಜಿ ಸಲ್ಲಿಸಿದ  ಸ್ಥಿತಿ ಜೆ. ಶೆಟ್ಟಿ, ಪ್ರಣಾಮ್ ಶೆಟ್ಟಿ, ವಿನ್ಯಾಸ್ ವಿ. ಶೆಟ್ಟಿ, ಶ್ರಾವ್ಯ ಕೆ. ಶೆಟ್ಟಿ, ಹರೀಶ್ಚಂದ್ರ ವಿ. ಶೆಟ್ಟಿ, ಅತೀಶ್ ವೈ. ಶರಣ್ ಶೆಟ್ಟಿ, ರೇವತಿ ಶೆಟ್ಟಿ, ತೇಜಸ್ವಿ ಶೆಟ್ಟಿ, ವಿಕಾಸ್ ಪಿ. ಶೆಟ್ಟಿ, ಮುಕ್ತ ಸತೀಶ್ ಶೆಟ್ಟಿ, ವಾಣಿಶ್ರೀ, ನಂದಿತಾ ಶೆಟ್ಟಿ, ವಂದನ, ವನಿತಾ ಶೆಟ್ಟಿ, ವಿವಾಹಕ್ಕೆ ನೆರವು ಯಾಚಿಸಿದ  ಕವಿತ ತಾಯಿ ಉಷಾ ಆರ್ ಶೆಟ್ಟಿ, ರಮ್ಯ ಶೆಟ್ಟಿ, ಪ್ರಿಯಾಂಕ ತಂದೆ ಸುಂದರ ಶೆಟ್ಟಿ ಮತ್ತು ಆಶ್ರಯ ಯೋಜನೆಯಡಿ ಸುಲೋಚನಾ ಶೆಡ್ತಿ, ಗಿರಿಜ ಶೆಡ್ತಿ, ಹೇಮ ಶೆಟ್ಟಿ, ಸವಿತ ರೈ, ಶಶಿಪ್ರಭ ಎಸ್, ಗಂಗಾಧರ್ ಶೆಟ್ಟಿ, ಪಾರ್ವತಿ ಶೆಟ್ಟಿ ಇವರಿಗೆ ಹಾಗೂ ಇತರ ಯೋಜನೆಗಳಡಿ ಪುಷ್ಪಲತಾ ಆರ್. ಶೆಟ್ಟಿ, ಜಲಜಾಕ್ಷಿ ಆರ್. ಶೆಟ್ಟಿ ಮೊದಲಾದವರಿಗೆ ಪರಿಹಾರ ಧನ ವಿತರಿಸಲಾಯಿತು.

ಈಗಾಗಲೇ ಮಂಜೂರು ಮಾಡಲಾಗಿರುವ ಒಟ್ಟು 64 ಮನೆ ಗಳ ಪೈಕಿ  30 ಮನೆಗಳು ಪೂರ್ಣಗೊಂಡಿದ್ದು, ಉಳಿದ ಮನೆಗಳ ಕಾಮಗಾರಿ ಬೇರೆ ಬೇರೆ ಹಂತದಲ್ಲಿ ಪ್ರಗತಿಯಲ್ಲಿದ್ದು, ಕಾರ್ಯಕ್ರಮದಲ್ಲಿ ಹೊಸದಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಿ 48 ಮಂದಿ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಿ ಘೋಷಣಾ ಪತ್ರಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಎಂ.ಫ್ರೆಂಡ್ಸ್ ವತಿಯಿಂದ  ಕಾರುಣ್ಯ ಯೋಜನೆಯಡಿ ವೆನ್ಲಾಕ್ ಆಸ್ಪತ್ರೆಯಲ್ಲಿ  ಇರುವ ಒಳ ರೋಗಿಗಳ ಪೋಷಕರು/ ಸಂಬಂಧಿಕರಿಗೆ ಒಂದು ತಿಂಗಳ ರಾತ್ರಿ ಊಟದ ವೆಚ್ಛವನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ 2.25 ಲಕ್ಷ ರೂ. ನೀಡಿದ್ದು, ಈ ವರ್ಷ 2019ರ ಒಂದು ತಿಂಗಳ ವೆಚ್ಛಕ್ಕೆ ರೂ. 2.25 ಲಕ್ಷ ನೆರವಿನ ಘೋಷಣಾ ಪತ್ರವನ್ನು ಎಂ.ಫ್ರೆಂಡ್ಸ್‍ನ ಕಾರ್ಯದರ್ಶಿ ಮುಹಮ್ಮದ್ ಆರೀಫ್ ಪಡುಬಿದ್ರಿ ಮತ್ತು ಟ್ರಸ್ಟಿ ಹಮೀದ್ ಅತ್ತೂರು ರವರಿಗೆ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಹಸ್ತಾಂತರಿಸಿದರು.