ಸುರತ್ಕಲ್: ಕೊರೊನಾ  ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದೆ. ಈ ಹಿನ್ನಲೆಯಲ್ಲಿ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು ದಿನನಿತ್ಯದ ಊಟ ಉಪಚಾರಕ್ಕೆ ಬೇಕಾಗುವ ದಿನಸಿ ಸಾಮಾನುಗಳು ಸಿಗುವುದೇ ದುಸ್ತರವಾಗಿದೆ.

ಕೇಂದ್ರ ಸರ್ಕಾರ ರಾಜ್ಯ ಸರಕಾರ ಜಿಲ್ಲಾಡಳಿತ ವಿವಿಧ ಸಂಘ ಸಂಸ್ಥೆಗಳು ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಇದೀಗ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಹಿದ್ದೀನ್ ಬಾವ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 20,000 ಕುಟುಂಬಗಳಿಗೆ ದಿನಸಿ ಸಾಮಾನುಗಳು ವಿತರಣೆ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಆದಿತ್ಯವಾರ ಸುರತ್ಕಲ್ ಸಮೀಪದ ಜನತಾ ಕಾಲನಿಯಲ್ಲಿ ಸ್ಥಳೀಯ ನಿವಾಸಿಗಳಿಗೆ ದಿನಸಿ ಸಾಮಗ್ರಿ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಪ್ರಪಂಚ, ನಮ್ಮ ದೇಶ ಕರೋನವೈರಸ್ ಉಪಟಳವನ್ನು ಎದುರಿಸುತ್ತಿದೆ. ದೇಶದ ಜನರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಮ್ಮಿಂದ ಆದಷ್ಟು ಸಹಾಯವನ್ನು ಮಾಡಲು ಮುಂದೆ ಬಂದಿದ್ದೇವೆ. ನಾನು ಸೋತಿರಬಹುದು ಆದರೆ ನನ್ನ  ಮಾನವೀಯತೆ ಸೋತಿಲ್ಲ.ಕ್ಷೇತ್ರದ ಜನತೆಯ ಮೇಲೆ ನನಗೆ ಸದಾ ಅಭಿಮಾನ ,ಗೌರವವಿದೆ ಎಂದರು.ಕೊರೊನಾ ವೈರಸ್ ನಿವಾರಣೆಗೆ ನಾವು ಸರಕಾರದ ಆದೇಶವನ್ನು  ಪಾಲಿಸಬೇಕಾಗಿದೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವ ನುಡಿದರು.

ಸುರತ್ಕಲ್ ಚರ್ಚಿನ ಧರ್ಮಗುರುಗಳಾದ  ಪೌಲ್ ಡಿಸೋಜ, ಚೊಕ್ಕಬೆಟ್ಟು ಮಸೀದಿಯ ಧರ್ಮಗುರು ಅಬ್ದುಲ್ ಅಝೀಝ್ ದಾರಿಮಿ ,ಮಾಜಿ ಶಾಸಕರ ಕಾರ್ಯವನ್ನು ಶ್ಲಾಘಿಸಿದರು.ಈ ಸಂದರ್ಭ ಮುಖಂಡರಾದ ಕೆ‌. ಸದಾಶಿವ ಶೆಟ್ಟಿ, ಪ್ರತಿಭಾ ಕುಳಾಯಿ, ಕಾರ್ಪೊರೇಟರ್ ಅನಿಲ್ ಕುಮಾರ್, ರಾಘವೇಂದ್ರ ರಾವ್, ರಾಜೇಶ್ ಕುಲಾಯಿ,  ಬೈಕಂಪಾಡಿ, ಹಿದಾಯತ್ ಹಾಗೂ ಯುವ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.