ವಿಮರ್ಶೆಯ ನೆರವು ಇಲ್ಲದಿದ್ದರೆ ಸಾಹಿತ್ಯ ಬೆಳೆಯುವುದಿಲ್ಲ, ಅದು ನಿಂತ ನೀರಾಗಿ ಬಿಡುತ್ತದೆ. ಸಾಹಿತ್ಯ ರಚನೆ ಮತ್ತು ವಿಮರ್ಶೆ ಜೊತೆಜೊತೆಗೆ ಸಾಗಬೇಕಾಗಿರುವ ಅಂತರ ಶಿಸ್ತಿನ ವಿಷಯಗಳು ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಸೋಮಣ್ಣ ಹೊಂಗಳ್ಳಿ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಸಮಿತಿ ನಗರದ ಶಾರದಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹೃದಯ ಸಹೃದಯ ಕವಿ ಕಾವ್ಯ ವಿಮರ್ಶೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಅವರು ಮಾತಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಚಾರ್ಟರ್ಡ್ ಅಕೌಂಟೆಂಟ್ ಎಸ್. ಎಸ್. ನಾಯಕ್ ಅವರು ರಾಷ್ಟ್ರೀಯ ದೃಷ್ಟಿಕೋನ ಮತ್ತು ಸಮನ್ವಯ ಭಾವದಿಂದ ಸಾಹಿತ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ವಿಷಯ ಪ್ರವೇಶ ಮಾಡಿ ಮಾತಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು, ಕಾವ್ಯವು ಹೃದಯದಿಂದ ಹುಟ್ಟುವುದರಿಂದ ಅದು ತಾಜಾ ಆಗಿರುತ್ತದೆ. ಪ್ರತಿಯೊಂದು ಕವಿತೆಯೂ ಒಂದು ಹೊಸ ಅನುಭವದ ಅನಾವರಣ. ತಮ್ಮ ತಮ್ಮ ವಿಶಿಷ್ಟ ಅನುಭವಗಳನ್ನು ರೂಪಕಾತ್ಮಕವಾಗಿ ಹೇಳಬೇಕೆಂಬ ತುಡಿತ ಎಲ್ಲರಲ್ಲಿಯೂ ಇರುತ್ತದೆ. ಹಾಗಾಗಿಯೇ ಇವತ್ತು ಅಧಿಕ ಸಂಖ್ಯೆಯಲ್ಲಿ ಕವಿಗಳು ಕಾವ್ಯ ರಚಿಸುತ್ತಿರುವುದನ್ನು ಕಾಣಬಹುದಾಗಿದೆ. ಅದಕ್ಕಾಗಿ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ವಿಷಯ ಹೊಸತಿರಬೇಕು, ಇಲ್ಲವೇ ಅದರ ದೃಷ್ಟಿಕೋನ ಹೊಸತಿರಬೇಕು. ಇಲ್ಲದಿದ್ದರೆ ಕಿವಿ ಮುಟ್ಟುವ ಕವನವು ಹೃದಯ ತಟ್ಟುವುದಿಲ್ಲ ಎಂದು ವಿಮರ್ಶಕ ಪೇರೂರು ಜಾರು ಹೇಳಿದರು.

ಕವಿಗಳಾಗಿ ಪ್ರಮೀಳಾ ದೀಪಕ್ ಪೆರ್ಮುದೆ, ರಶ್ಮಿ ಸನಿಲ್, ಯೋಗೀಶ್ ಮಲ್ಲಿಗೆಮಾಡು, ಲಕ್ಷ್ಮೀ ವಿ. ಭಟ್, ವಿಜಯಲಕ್ಷ್ಮಿ ಕಟೀಲು, ಕೆ. ಶೈಲಾಕುಮಾರಿ, ನಿಶ್ಮಿತಾ ವಿ. ನಿಟ್ಟೆ, ವಾಣಿ ಲೋಕಯ್ಯ, ಶೈಲಜಾ ಪುದುಕ್ಕೋಳಿ, ಮತ್ತು ಹ. ಸು. ಒಡ್ಡಂಬೆಟ್ಟು ಭಾಗವಹಿಸಿದರು. ವಿಮರ್ಶಕರಾಗಿ ಡಾ. ಕರುಣಾಕರ ಬಳ್ಕೂರು, ಪ್ರಶಾಂತಿ ಶೆಟ್ಟಿ ಇರುವೈಲು, ಸಾವಿತ್ರಿ ಪೂರ್ಣಚಂದ್ರ, ದೀವಿತ್ ಪೆರಾಡಿ, ರಾಜೇಶ್ ಶೆಟ್ಟಿ ದೋಟ, ವಾಣಿ ಯು. ಎಸ್., ರೂಪಕಲಾ ಆಳ್ವ, ಪೇರೂರು ಜಾರು, ರಘು ಇಡ್ಕಿದು ಮತ್ತು ಸಾವಿತ್ರಿ ರಮೇಶ್ ಭಟ್ ಅವರು ಭಾಗವಹಿಸಿದರು.