ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರ ರಜತ ಸಂಭ್ರಮದ ಸಮಯದಲ್ಲಿ ಜೈನ ಮಠದಲ್ಲಿ ಆಚಾರ್ಯ ಶ್ರೀ 108 ಗುಲಾಬ್ ಭೂಷಣ ಮಹಾರಾಜರ ಚಾತುರ್ಮಾಸ ಜುಲೈ 9 ರಿಂದ ನಾಲ್ಕು ತಿಂಗಳ ಕಾಲ ನಡೆಯಲಿದೆ. ಜೂನ್ 20 ರಂದು ಪುರಪ್ರವೇಶ ಮಾಡಲಿರುವ ಆಚಾರ್ಯರು ಪ್ರತೀ ದಿನ ಬಸದಿಗಳ ದರುಶನ ಮಾಡಲಿರುವರು.
ಆಚಾರ್ಯರು ಪೂರ್ವ ಆಶ್ರಮದಲ್ಲಿ 1955 ಅಕ್ಟೋಬರ್ 3 ರಂದು ಸೋಲಾಪುರದ ಜೈನವಾಡಿಯಲ್ಲಿ ಮದನಾದೇವಿ ಹಾಗೂ ಭೂಪಾಲ ಉಪಾಧ್ಯಾಯರ ಮಗನಾಗಿ ಜನಿಸಿದರು. 2000 ದಲ್ಲಿ ಮುನಿ ದೀಕ್ಷೆ ಪಡೆದು, 2013 ರಲ್ಲಿ ಆಚಾರ್ಯ ಪದವಿ ಪಡೆದರು. ಎರಡು ದಿನಕ್ಕೊಮ್ಮೆ ಆಹಾರ ಸೇವಿಸುವ ಇವರು ಆಜೀವನ ಬರಿಗಾಲಲ್ಲಿ ನಡೆದು ಕಠಿಣ ತಪಸ್ಸು ಆಚರಿಸುತ್ತಾರೆ.
ಆಚಾರ್ಯರ ಚಾತುರ್ಮಾಸ ಸಂದರ್ಭದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸ್ವಾಮೀಜಿ ತಿಳಿಸಿದರು.
ಈ ಸಂದರ್ಭದಲ್ಲಿ ಶೈಲೇಂದ್ರ ಕುಮಾರ್, ಸಂಜಯಂತ ಶೆಟ್ಟಿ, ಹಾಜರಿದ್ದರು. ಹದಿನೆಂಟು ಬಸದಿಗಳ ಪಟ್ಣಶೆಟ್ಟಿ ಸುಧೀಶ್ ಕುಮಾರ್ ಸ್ವಾಗತಿಸಿದರು. ನ್ಯಾಯವಾದಿ ಬಾಹುಬಲಿ ಪ್ರಸಾದ್ ವಂದಿಸಿದರು.