ಮೂಡುಬಿದಿರೆ: ‘ಮಕ್ಕಳಿಗೆ ಸಮಯ ನೀಡಿ , ಬೆನ್ತಟ್ಟಿ ಬೆಳೆಸಿ ’ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರವು ಮೂಡುಬಿದಿರೆ ನಗರದ ಸ್ಕೌಟ್ಸ್ -ಗೈಡ್ಸ್ ಕನ್ನಡ ಭವನದಲ್ಲಿ ಸೋಮವಾರ ಆಯೋಜಿಸಿದ್ದ 34 ನೇ ವರ್ಷದ ರಾಜ್ಯಮಟ್ಟದ ಮಕ್ಕಳ ಅಭಿನಯ ಶಿಬಿರ ಅಭಿನಯ ಪ್ರಧಾನ 'ಚಿಣ್ಣರ ಮೇಳ - 2025' ಉದ್ಘಾಟಿಸಿ ಅವರು ಮಾತನಾಡಿದರು.
‘ಬದುಕಿನಲ್ಲಿ ಎಲ್ಲರೂ ನಟರೇ. ಆದರೆ, ಅಭಿನಯ ವಿಭಿನ್ನ’. ಮಕ್ಕಳಿಗೆ ಸಮಯ ನೀಡುವುದು ಎಂದರೆ ಅವರ ಭಾವನೆಗಳಿಗೆ ಸ್ಪಂದಿಸುವುದು, ಮುಕ್ತವಾಗಿ ಸಂವಹನ ನಡೆಸುವುದು. ಮಕ್ಕಳಲ್ಲಿ ಅಡಗಿರುವ ಆತಂಕ, ಭಯ, ತುಂಟಾಟ, ಪ್ರತಿಭೆಯನ್ನು ಸರಿಯಾದ ಸಮಯದಲ್ಲಿ ಗುರುತಿಸುವುದು ಬಹಳ ಅವಶ್ಯಕ ಎಂದರು.
ಮನುಷ್ಯ ಸಮಾಜಜೀವಿ. ಸಮಾಜದ ಜೊತೆ ಬೆರೆತಾಗಲೇ ನೆಮ್ಮದಿ, ಯಶಸ್ಸು ಎಲ್ಲವೂ ಸಾಧ್ಯ. ಮಕ್ಕಳು ಮಾತನಾಡಬೇಕು. ಎಲ್ಲರೊಂದಿಗೆ ಬೆರೆಯುವಂತೆ ಮಾಡಲು ಇಂತಹ ಶಿಬಿರ ಪೂರಕವಾಗಿರಲಿದೆ ಎಂದು ತಿಳಿಸಿದರು.
ವಿದ್ವಾನ್ ಚಂದ್ರಶೇಖರ ನಾವಡ ಮಾತನಾಡಿ, ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೆತ್ತವರು ತಮ್ಮ ಮಕ್ಕಳ ವ್ಯಕ್ತಿತ್ವ ಬದಲಾವಣೆಯನ್ನು ಅವಲೋಕಿಸಬೇಕು. ವಿದ್ಯಾರ್ಥಿಗಳು ಶಿಬಿರದ ಅನುಭವವನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗಿಸಿಕೊಂಡು ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳುವಂತಾಗಲಿ ಎಂದು ಆಶಿಸಿದರು.
ಶಿಬಿರದ ನಿರ್ದೇಶಕ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಮಾತನಾಡಿ, ಅಭಿನಯನ ಪ್ರಧಾನ ಎಂಬುದು ಸಂವಹನಕ್ಕೆ ಸಂಬಂಧಿಸಿದ ಕಲೆ. ಹಾಡು ಕುಣಿತ, ನಾಟಕ ಕಲೆಯ ಕಲಿಕೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ, ಹಿರಿಯರನ್ನು ಗೌರವಿಸುವ, ಎಲ್ಲರೊಂದಿಗೆ ಬೆರೆತುಕೊಳ್ಳುವ ಮನೋಭಾವವನ್ನು ಬೆಳಸಲಿದೆ. ಬೇಸಿಗೆ ಶಿಬಿರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ಪ್ರತಿ ವರ್ಷವು ಸುತ್ತಮುತ್ತಲಿನ ಶಾಲಾ ಮಕ್ಕಳಿಗೂ ಸಮಾನವಾಗಿ ಭಾಗವಹಿಸುವ ಅವಕಾಶವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ ಆಳ್ವ ನೀಡುತ್ತಿರುವುದು ಶ್ಲಾಘನೀಯ ಎಂದರು. ವಿಶೇಷವಾಗಿ, ನಾಡಿನ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 12 ಜನ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಗಳು ತರಬೇತಿಗಾಗಿ ಆಗಮಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಚಿಣ್ಣರ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 6-15 ವರ್ಷದ ಸುಮಾರು 138 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಶಿಬಿರದಲ್ಲಿ ಮಕ್ಕಳಿಗೆ ಕ್ರಾಫ್ಟ್ ವರ್ಕ್, ನವರಸ ಕಲಿಕೆ, ಸ್ವರಾಕ್ಷರ ಅಭಿನಯನ, ರಂಗಗೀತೆ, ನಾಟಕ ತರಬೇತಿ, ವಿವಿಧ ವಾದ್ಯಗಳ ಕಲಿಕಾ ಪರಿಚಯ, ರಂಗಭೂಮಿ ಆಟಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದರೊಂದಿಗೆ ಮಕ್ಕಳ ಪ್ರತಿಭಾ ಅನಾವರಣಗೊಳಿಸುವ ಪ್ರಯತ್ನ ನಡೆಯಲಿದೆ ಎಂದರು.
ಕಲಾವಿದ ತಾರಾನಾಥ ಕೈರಂಗಳ ಮತ್ತು ಇತರರು ಇದ್ದರು. ಸುಮನಾ ಪ್ರಸಾದ್ ಆಶಯ ಗೀತೆ ಹಾಡಿದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ್ ಕೈರೋಡಿ ನಿರೂಪಿಸಿದರು.