ಉಡುಪಿ, ನವೆಂಬರ್ 29: ತುರ್ತು ವಿಪತ್ತು ನಿರ್ವಹಣಾ ಕಾರ್ಯಗಳನ್ನು ಎದುರಿಸಲು ಅನುಕೂಲವಾಗುವ ರೀತಿಯಲ್ಲಿ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ನಕ್ಷೆಯನ್ನು ಒಳಗೊಂಡAತೆ  ಎಲ್ಲಾ ಇಲಾಖೆಗಳ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಇಂದು, ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ, ಎಲ್ಲಾ ಅತ್ಯಾವಶ್ಯಕ ಸೌಲಭ್ಯಗಳ ಮಾಹಿತಿ ಒಂದೇ ಕಡೆ ದೊರೆಯುವಂತೆ ಮಾಹಿತಿಗಳು ಕ್ರೂಡೀಕೃತವಾಗಿ ಲಭ್ಯವಿದ್ದಲ್ಲಿ, ಯಾವುದೇ ರೀತಿಯ ವಿಳಂಬವಿಲ್ಲದೇ ಗೊಂದಲಕ್ಕೆ ಅವಕಾಶ ನೀಡದೇ ನಿರ್ವಹಣಾ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದರು. 

ಮಳೆ, ಪ್ರವಾಹ ಸೇರಿದಂತೆ ಮತ್ತಿತರ ತುರ್ತು ಸಂದರ್ಭದಲ್ಲಿ ಆ ಪ್ರದೇಶಗಳಿಗೆ ಹೋಗಲು ಸೂಕ್ತ ರಸ್ತೆ ಸೌಲಭ್ಯ, ಹತ್ತಿರದ ಆಸ್ಪತ್ರೆ, ಸಂಬAದಪಟ್ಟ ವೈದ್ಯಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳ ಮೊಬೈಲ್ ಸಂಖ್ಯೆ, ಅಂಬುಲೆನ್ಸ್ ಲಭ್ಯತೆ, ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವ ಸ್ಥಳ ಗುರುತಿಸುವಿಕೆ, ಮತ್ತಿತರ ಸೌಲಭ್ಯಗಳ ಮಾಹಿತಿಯನ್ನು  ಕ್ರೂಢೀಕರಿಸುವುದು ಅವಶ್ಯಕ ಎಂದರು.

ಕಳೆದ 3 ತಿಂಗಳಲ್ಲಿ ವಾಡಿಕೆ ಮಳೆಗಿಂತ ಹೆಚ್ಚಿನ ಮಳೆಯಾಗಿದ್ದು, ಇದರಿಂದಾಗಿ ಹಾನಿಗೊಳಗಾದ ಮಾಹಿತಿಯ ವರದಿಯನ್ನು ಇಲಾಖಾವಾರು ಶೀಘ್ರದಲ್ಲಿಯೇ ನೀಡಬೇಕೆಂದು ತಿಳಿಸಿದರು.

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸ್ವಯಂ ಸೇವಕರÀನ್ನು ಗುರುತಿಸುವುದರೊಂದಿಗೆ ಅವರಿಗೆ  ವಿಪತ್ತು ನಿರ್ವಹಣಾ ಕುರಿತು ತರಬೇತಿ ನೀಡುವುದರ ಜೊತೆಗೆ ತುರ್ತು ಸುರಕ್ಷಾ ಕಿಟ್ಗಳನ್ನು ನೀಡಬೇಕೆಂದು  ಸಲಹೆ ನೀಡಿದರು.

ಪ್ರಸ್ತುತ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಕಟ್ಟಡ, ಸೇರಿದಂತೆ ಮತ್ತಿತರ ಹಾನಿಗೊಳಗಾದ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಲಾಗಿದ್ದು, ಅವುಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕೆಂದು  ಸೂಚನೆ ನೀಡಿದರು.

ಆಯ್ದ ಸ್ಥಳಗಳಲ್ಲಿ ಸೈರನ್ ಅಳವಡಿಸುವುದು ಸೇರಿದಂತೆ ಡಿಜಿಟಲ್ ಮೊಬೈಲ್ ರೇಡಿಯೋ ಟವರ್  ನಿರ್ಮಾಣ ಕಾರ್ಯಗಳಿಗೆ ಸಂಬAಧಪಟ್ಟ ಇಲಾಖೆಗಳಿಂದ  ತಕ್ಷಣದಲ್ಲಿಯೇ ನಿರಾಪೇಕ್ಷಣಾ ಪತ್ರವನ್ನು ಪಡೆದು ನಿರ್ಮಾಣ ಕಾರ್ಯಗಳನ್ನು ಆದಷ್ಟು ಬೇಗ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಕೋವಿಡ್ ಸೋಂಕು ನಿಯಂತ್ರಣ ಸೇರಿದಂತೆ ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪೊಲೀಸ್, ವೈದ್ಯಕೀಯ ಸಿಬ್ಬ್ಬಂದಿ ಸೇರಿದಂತೆ ಮತಿತ್ತರ ಇಲಾಖೆಯ ಸಿಬ್ಬಂದಿ ವರ್ಗಗಳ ಸಹಯೋಗದಲ್ಲಿ ತಂಡಗಳನ್ನು ರಚಿಸಿ ತಪಾಸಣೆ ನಡೆಸುವಂತೆ ಹಾಗೂ  ಕೋವಿಡ್ ಪರೀಕ್ಷೆ ಕಾರ್ಯಗಳನ್ನು ಕೈಗೊಳ್ಳಲು ನರ್ಸಿಂಗ್ ವಿದ್ಯಾರ್ಥಿಗಳ  ನೆರವು ಪಡೆಯಬೇಕಂದು ತಿಳಿಸಿದರು.

ಎಲ್ಲಾ ಇಲಾಖಾ ಕಚೇರಿಗಳ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಅವರ ಕುಟುಂಬದವರು ಕೋವಿಡ್ ನಿರೋಧಕ 2 ಡೋಸ್ಗಳನ್ನು ಪಡೆಯುವುದರ ಜೊತೆಗೆ ಕೋವಿಡ್ ಮಾರ್ಗಸೂಚಿಗಳನ್ನು  ತಪ್ಪದೇ  ಪರಿಪಾಲನೆ ಮಾಡುವುದರೊಂದಿಗೆ  ಸಾರ್ವಜನಿಕರಿಗೆ ಮಾದರಿಯಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಕುಂದಾಪುರ ಡಿಎಫ್ಓ ಆಶೀಶ್ ರೆಡ್ಡಿ, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.