ಮಂಗಳೂರು, ಏ. 25: ಕ್ರಿಕೆಟ್ ಕೇವಲ ಮನರಂಜನೆ ಮಾತ್ರವಲ್ಲ, ಅದೊಂದು ಜೀವನ ಇದ್ದ ಹಾಗೆ. ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಗೆರಾಲ್ಡ್‌  ಡಿಸೋಜಾ ಅವರು ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ ದೈಹಿಕ ಸಿಕ್ಷಣ ವಿಭಾಗದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಏಳನೇ ಆವೃತ್ತಿಯ ಯುಪಿಎಲ್‍ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಬದುಕಿನಲ್ಲಿ ಸಾಕಷ್ಟು ಅವಕಾಶಗಳು ಬರುತ್ತವೆ. ಆದರೆ ಎಲ್ಲಾ ಸಂದರ್ಭಗಳಲ್ಲೂ ಗೆಲುವು ಸಾಧಿಸುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಸೋಲು-ಗೆಲುವು ಎರಡ್ನನೂ ಸಮನಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಕ್ರೀಡೆ ಹೇಳಿಕೊಡುತ್ತದೆ ಎಂದರು. 

ಕ್ರೀಟಡ ಬದುಕಿಗೆ ಪುನಶ್ಚೇತನವನ್ನು ತುಂಬುತ್ತದೆ. ಬಹುತೇಕ ಸಂದರ್ಭಗಳಲ್ಲಿ ವೃತ್ತಿ ಸೇರಿದ ನಂತರವೇ ಕ್ರೀಡೆಯ ಮಹತ್ವ ಅರಿವಾಗುತ್ತದೆ. ಇಡೀ ಜಗತ್ತಿನ ಜನರನ್ನು ಸೆಳೆಯುವ ಆಕರ್ಷಣೆ ಕ್ರೀಡೆಗೆ ಮಾತ್ರವೇ ಇರುವುದು ವಿಶೇಷ. ಇದರಲ್ಲಿ ಭಾಗವಹಿಸುವ ಮೂಲಕ ಬದುಕಿನ ವಿಕಾಸದೆಡೆಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ಇದೊಂಸು ಹಂಚುವ, ಕಾಳಜಿ ವಹಿಸುವ ಹಾಗೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಕ್ರೀಡೆಯಲ್ಲಿ ಯಾವಾಗಲೂ ಉತ್ತಮ ಅಂಶಗಳನ್ನೇ ಗಮನಿಸಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಕ್ರೀಡೆ ಕೇವಲ ಆಟ ಮಾತ್ರವಲ್ಲ ಅದೊಂದು ಬದುಕಿನ ಶಿಸ್ತು. ಯಾವುದೇ ಕ್ರೀಡೆಯಲ್ಲಿ ಸಕ್ರಿಯವಾಗಿರಬೇಕಾದರೆ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಮುಖ್ಯ ಎಂದು ಕಿವಿ ಮಾತು ಹೇಳಿದರು. 

ಯುಪಿಎಲ್ನ 7ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟದಲ್ಲಿ ವಾರಿಯರ್ಸ್, ಜಾಗ್ವಾರ್ಸ್, ಟೈಟಾನ್ಸ್, ರೇಂಜರ್ಸ್, ರಾಯಲ್ಸ್, ಸ್ಟ್ರೈಕರ್ಸ್, ಇಲೆವೆನ್ಸ್, ಬ್ರಿಗೇಡ್ಸ್ ಸೇರಿದಂತೆ ಒಟ್ಟು 8 ತಂಡಗಳು ಭಾಗಿಯಾಗಿದ್ದವು. 

ಇದೇ ಸಂದರ್ಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೇಶವ ಮೂರ್ತಿ, ವಿದ್ಯಾರ್ಥಿ ಸಂಘದ ಸಹ ನಿರ್ದೇಶಕ ಪ್ರೊ. ಜಯವಂತ ನಾಯಕ್, ಪ್ರೊ. ರಾಮಕೃಷ್ಣ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೀಪಕ್‍  ಗಿಲ್ಬರ್ಟ್‍ ಡಿಸೋಜಾ, ಡಾ. ಜಯರಾಜ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.