ಮಂಗಳೂರು: ಕೇಂದ್ರೀಯಕೈಗಾರಿಕಾ ಭದ್ರತಾ ಪಡೆ (ಅISಈ) ವತಿಯಿಂದ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ಉದ್ದಕ್ಕೂ ಸಂಚರಿಸುತ್ತಿರುವ ಸೈಕಲ್ ರ್ಯಾಲಿ ‘ಸಿಐಎಸ್ಎಫ್ ಕೋಸ್ಟಲ್ ಸೈಕ್ಲೋಥಾನ್-2025’ ಬುಧವಾರ ಸಂಜೆ ಮಂಗಳೂರಿಗೆ ಆಗಮಿಸಿದಾಗ ಆಕರ್ಷಕ ಸ್ವಾಗತ ನೀಡಲಾಯಿತು.
ಪಣಂಬೂರು ಬೀಚ್ನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರ ನೇತೃತ್ವದಲ್ಲಿ ಸಿಐಎಸ್ಎಫ್ ಯೋಧರಿಗೆ ಸ್ವಾಗತಿಸಲಾಯಿತು.
ಸಿಐಎಸ್ಎಫ್ ಕೋಸ್ಟಲ್ ಸೈಕ್ಲೋಥಾನ್-2025 ಅನ್ನು ಮಾರ್ಚ್ 7 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ನಲ್ಲಿ ಚಾಲನೆ ನೀಡಿದ್ದರು. ದೇಶದ ಪಶ್ಚಿಮ ತೀರದಲ್ಲಿ ಗುಜರಾತ್ನಿಂದ ಹಾಗೂ ಪೂರ್ವತೀರದಲ್ಲಿ ಪಶ್ಚಿಮ ಬಂಗಾಳದಿಂದ ಕನ್ಯಾಕುಮಾರಿವರೆಗೆ ಸೈಕಲ್ರ್ಯಾಲಿ ಸಾಗಲಿದೆ. ಈಸ್ಟ್ಕೋಸ್ಟ್ ತಂಡವು ಪಶ್ಚಿಮ ಬಂಗಾಳದ ಬಖಾಲಿ ಬೀಚ್ನಿಂದ 2778 ಕಿಲೋಮೀಟರ್ ಹಾಗೂ ವೆಸ್ಟ್ಕೋಸ್ಟ್ ತಂಡವು ಲಖ್ಪತ್ ಫೋರ್ಟ್ (ಗುಜರಾತ್) ನಿಂದ 3775 ಕಿಲೋಮೀಟರ್ದೂರವನ್ನು ಕ್ರಮಿಸಲಿದೆ.
ಈ ಸೈಕ್ಲೋಥಾನ್ ಭಾರತದ ಸಂಪೂರ್ಣ ಕರಾವಳಿ ಒಟ್ಟು 6,553 ಕಿ.ಮೀ. ಮಾರ್ಗದಲ್ಲಿ ಶ್ರೀಮಂತ ಸಾಂಸ್ಕೃತಿಕ ಮತ್ತು ಪರಂಪರೆಯ ವೈವಿಧ್ಯತೆಯನ್ನು ಪ್ರದರ್ಶಿಸುವ 11 ರಾಜ್ಯಗಳಲ್ಲಿ ಸಾಗಲಿವೆ.
ಬುಧವಾರ ಸಂಜೆ ಸೈಕಲ್ ರ್ಯಾಲಿಯು ಮಂಗಳೂರು ನಗರಕ್ಕೆ ಆಗಮಿಸಿತು. ಸೈಕಲ್ನಲ್ಲಿ ಆಗಮಿಸಿದ ಯೋಧರನ್ನು ಸ್ವಾಗತಿಸಲು ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹುಲಿವೇಷ ನೃತ್ಯ, ಚಂಡೆ ವಾದ್ಯ ಮೇಳ, ಭರತನಾಟ್ಯ, ಜನಪದ ನೃತ್ಯಗಳು ಸೇರಿದಂತೆ ವೈವಿಧ್ಯಮಯ ಸಂಸ್ಕೃತಿ ಕಾರ್ಯಕ್ರಮಗಳು ಯೋಧರನ್ನು ಆಕರ್ಷಿಸಿದವು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಪೊಲೀಸ್ ಅಧೀಕ್ಷಕ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಸಿಐಎಸ್ಎಫ್ ಡಿಐಜಿಆರ್. ಪೊನ್ನಿ, ಕೋಸ್ಟ್ಗಾರ್ಡ್ ಡಿಐಜಿ ಮುಹಮ್ಮದ್ ಶಹನವಾಝ್, ಸಿಐಎಸ್ಎಫ್ ಅಧಿಕಾರಿಗಳಾದ ವಿ.ಎಂ. ಜೋಷಿ, ಆರ್.ಪಿ. ಪಾಠಕ್, ಅನೂಪ್ ಸಿನ್ಹಾ ಮತ್ತಿತರರು ಉಪಸ್ಥ್ತಿತರಿದ್ದರು.
ಗುರುವಾರ ಬೆಳಿಗ್ಗೆ 6:30ಕ್ಕೆ ಸಿಐಎಸ್ಎಫ್ ಕೋಸ್ಟಲ್ ಸೈಕ್ಲೋಥಾನ್ ಪಣಂಬೂರು ಬೀಚ್ನಿಂದ ಕನ್ಯಾಕುಮಾರಿ ಕಡೆಗೆ ತಮ್ಮ ಪ್ರಯಾಣವನ್ನು ಮುಂದುವರಿಸಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಕಮೀಷನರ್ ಉಪಸ್ಥಿತರಿದ್ದು, ರ್ಯಾಲಿಯನ್ನು ಬೀಳ್ಕೊಟ್ಟರು.