ಮೂಡುಬಿದಿರೆ: ಇಲ್ಲಿಗೆ ಸಮೀಪದ ಮೂಡು ಮಾರ್ನಾಡು ಪ್ರೌಢಶಾಲೆಯಲ್ಲಿ ಜುಲೈ 8ರಂದು ಶಾಲಾ ಮಂತ್ರಿಮಂಡಲ ಪ್ರಮಾಣ ವಚನ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಮತ್ತು ಹೆತ್ತವರಿಗೆ ಮಾಹಿತಿ ಕಾರ್ಯಕ್ರಮವು ಜರಗಿತು. ಶಾಲಾ ಮುಖ್ಯಮಂತ್ರಿ ಸ್ಮರಣ್, ಉಪಮುಖ್ಯಮಂತ್ರಿ ಸುಮಂತ್, ವಿರೋಧಪಕ್ಷದ ನಾಯಕರುಗಳಾದ ಲಿಖಿತ್, ಅನನ್ಯ, ಹಾಗೂ ಇಡೀ ಮಂತ್ರಿಮಂಡಲಕ್ಕೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಭಾಸ್ಕರ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಯಶೋಧರ ಆಚಾರ್, ಶಾಲಾ ಮುಖ್ಯೋಪಾಧ್ಯಾಯಿನಿ  ಡಾ। ರಾಜಶ್ರೀ , ಮುಖ್ಯ ಅತಿಥಿ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ್ ಅವರುಗಳು ಪ್ರಮಾಣವಚನ ಬೋಧಿಸಿದರು.

ಕಳೆದ 28 ವರ್ಷಗಳಿಂದ ಶಾಲೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಪ್ರೋತ್ಸಾಹ ಧನದೊಂದಿಗೆ  ಸನ್ಮಾನಿಸುತ್ತಿರುವ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ರವರು 2023-24ರಲ್ಲಿ ಕೂಡ ಅತಿ ಹೆಚ್ಚು ಅಂಕ ಪಡೆದ ಸಾಕ್ಷಿ, ಭಾರ್ಗ ವಿ, ಹೃತಿಕ್ ಅವರನ್ನು ಶಾಲು ಹೊದಿಸಿ, ಫಲ ಪುಷ್ಪವಿತ್ತು, ಪ್ರೋತ್ಸಾಹ ಧನದೊಂದಿಗೆ  ಸನ್ಮಾನಿಸಿದರು. ಅದೇ ರೀತಿ 2023ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಯೂ ಅತಿ ಹೆಚ್ಚು ಅಂಕಗಳಿಸಿದ ಅನುಕ್ಷಿತಾ, ಪ್ರತಿಕ್ಷಾ , ಹಾಗೂ ಕ್ಷುತಿಕ್ ರನ್ನು ಸನ್ಮಾನಿಸಲಾಯಿತು. ಅಕ್ಷರ ದಾಸೋಹದ ಸಿಬ್ಬಂದಿಗಳಾದ ವನಿತ, ಶಕುಂತಲಾ ಶೆಟ್ಟಿ ಅವರಿಗೂ ಗೌರವಾರ್ಪಣೆ ನೀಡಲಾಯಿತು.

ಅದೇ ರೀತಿ ದಕ್ಷಿಣ ಭಾರತ ಮಟ್ಟದ 600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದ 9ನೇ ತರಗತಿಯ ಸುಮಂತ್ ರನ್ನು ಸನ್ಮಾನಿಸಲಾಯಿತು.

ಪರಿಸರ, ಪ್ರಕೃತಿ, ಶಾಲೆ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಹೇಗೆ, ಯಾವ್ಯಾವ ಕೊಡುಗೆಗಳನ್ನು ನೀಡಬಹುದೆಂದು ಸಂಪನ್ಮೂಲ ವ್ಯಕ್ತಿ, ತರಬೇತುದಾರ, ಬೆಂಗಳೂರು ಸೂರ್ಯ ಫೌಂಡೇಶನ್ ನ ಸಂಯೋಜಕ ರಾಯಿ ರಾಜಕುಮಾರ್ ಮೂಡುಬಿದಿರೆಯವರು ಹೆತ್ತವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಇತ್ತರು. ಮೂಡು ಮಾರ್ನಾಡು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಡಿಸೋಜಾ ಅವರು ಮೂಡುಬಿದಿರೆಯಲ್ಲಿ ಪ್ರಪ್ರಥಮ ಬಾರಿಗೆ ಆಯ್ಕೆಗೊಂಡ ಶಾಲೆಗೆ ಪ್ರಧಾನಮಂತ್ರಿಯೋಜನೆಯಿಂದ ಶಾಲೆಗೆ ದೊರಕಿದ ಸಹಾಯಧನ, ಕಾಮಗಾರಿ ಇತ್ಯಾದಿಗಳ ಮಾಹಿತಿಯನ್ನು ನೀಡಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ್ದಭಾಸ್ಕರ್ ಎಸ್ ಕೋಟ್ಯಾನ್ ಅವರು ಮಾತನಾಡಿ ಕನ್ನಡ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹೆತ್ತವರು ತಮ್ಮ ಸುತ್ತಮುತ್ತಲಿನ ಮನೆಗಳವರಿಗೆ ಹಾಗೂ ಹೆತ್ತವರಿಗೆ ಮನವರಿಕೆ ಮಾಡಿಕೊಟ್ಟು ಸರಕಾರದ ಸೌಲಭ್ಯಗಳ ಯೋಗ್ಯ ಹಾಗೂ ಯುಕ್ತಪ್ರಯೋಜನ ಎಲ್ಲರಿಗೂ ದೊರಕುವಂತೆ ಮಾಡುವುದರ ಮೂಲಕವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವಂತೆಯೂ ಆಗಬೇಕೆಂದು ಕೇಳಿಕೊಂಡರು. ಪ್ರತಿಭಾವಂತ ಶಿಕ್ಷಕರು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇರುವುದರಿಂದ ಉತ್ತಮ ಫಲಿತಾಂಶವು ಬರುತ್ತಿದೆ ಎಂದು ಶಿಕ್ಷಕರನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಶಕುಂತಲಾ ಶೆಟ್ಟಿ, ಎಸ್ ಡಿ ಎಂ ಸಿ ಸದಸ್ಯರುಗಳಾದ ಸದಾಶಿವ ಸಾಲಿಯಾನ್, ಸತೀಶ್ ಶೆಟ್ಟಿ, ಅಶೋಕ ದೇವಾಡಿಗ, ಸರೋಜಿನಿ, ಸುಶೀಲ, ಸುಗಂಧಿ, ಮಂಜುಳಾ, ಗಂಗಾಧರ, ರಜಿಯಾ, ಆಶಾಲತಾ ಉಪಸ್ಥಿತರಿದ್ದರು. ಶಿಕ್ಷಕ ಜಾನ್ ರೊನಾಲ್ಡ್ ಡಿಸೋ ಜಾ ಕಾರ್ಯಕ್ರಮ ನಿರ್ವಹಿಸಿದರು. ನವೀನ್ ಎಸ್ ಪುತ್ರನ್ ಧನ್ಯವಾದ ಸಲ್ಲಿಸಿದರು.