ಪುತ್ತೂರು: ವಿಧಾನಪರಿಷತ್ತಿನ ಮುಂಗಾರು ಅಧಿವೇಶನದಲ್ಲಿ ಶಾಸಕ ಕಿಶೋರ್ ಕುಮಾರ್ ಅವರು ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಮಾನ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ - ಕಾಡು ಪ್ರಾಣಿ ಸಂಘರ್ಷದ ಕುರಿತು ಸೂಕ್ತವಾದ ಕ್ರಮವನ್ನು ಕೈಗೊಂಡು ಈ ಭಾಗದ ಜನರ ಬಹುಮುಖ್ಯ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಾಡಾನೆಗಳು ನಾಡಿಗೆ ನುಗ್ಗಿ ಬೆಳೆ ಹಾನಿ ಮಾಡುವ ಘಟನೆಗಳು ದಿನೇದಿನೇ ಹೆಚ್ಚುತ್ತಿವೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರು ಜೀವ, ಆಸ್ತಿ ಮತ್ತು ಕೃಷಿ ಸಂಪತ್ತು ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.


ಮುಖ್ಯ ಬೇಡಿಕೆಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಶ್ವತ ಆನೆ ಶಿಬಿರ ಸ್ಥಾಪನೆ – ಆನೆಗಳನ್ನು ಸೆರೆಹಿಡಿಯಲು ಪ್ರಸ್ತುತ ದುಬಾರೆ, ಹುಣಸೂರು ಮತ್ತಿಗೋಡು ಅಥವಾ ಶಿವಮೊಗ್ಗದ ಸಕ್ರೆಬೈಲು ಶಿಬಿರದ ಆನೆಗಳ ಸಹಾಯ ಪಡೆಯಬೇಕಾಗಿದೆ. ಇದರಿಂದ ಕಾರ್ಯಾಚರಣೆಯಲ್ಲಿ ಕನಿಷ್ಠ ಎರಡು ದಿನಗಳ ವಿಳಂಬವಾಗುತ್ತದೆ. ಸುಬ್ರಮಣ್ಯ ಸಮೀಪ ಸಾಕಾನೆಗಳನ್ನು ಪಳಗಿಸಿ ಶಿಬಿರ ಸ್ಥಾಪಿಸಿದರೆ ತ್ವರಿತ ಕಾರ್ಯಾಚರಣೆ ಸಾಧ್ಯವಾಗುತ್ತದೆ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ.

ಆನೆಗಳಿಗೆ ರೇಡಿಯೋ ಕಾಲರ್ ಐಡಿ ಅಳವಡಿಕೆ – ಕಾಡಾನೆಗಳ ಚಲನವಲನವನ್ನು ನಿಖರವಾಗಿ ಪತ್ತೆ ಹಚ್ಚಲು ತಕ್ಷಣ ಕ್ರಮ ಕೈಗೊಳ್ಳಬೇಕು.

ETF (ಆನೆ ನಿಗ್ರಹ ಪಡೆ) ರಚನೆ – ತುರ್ತು ಸಂದರ್ಭಗಳಲ್ಲಿ ಶೀಘ್ರ ಕಾರ್ಯಾಚರಣೆಗೆ ವಿಶೇಷ ಪಡೆ ಅಗತ್ಯ.

ಸೋಲಾರ್ ಬೇಲಿಗೆ ಶೇ.100 ಸಬ್ಸಿಡಿ – ಈಗಿನ ಶೇ.50 ಸಬ್ಸಿಡಿಯನ್ನು ಶೇ.100 ಕ್ಕೆ ಹೆಚ್ಚಿಸಿ, ಕಾಡಂಚಿನ ಗ್ರಾಮಗಳ ಕೃಷಿ ಜಮೀನು ಮತ್ತು ಮನೆಗಳನ್ನು ರಕ್ಷಿಸಲು ಸಹಾಯ ಮಾಡಬೇಕು.

ಕಾಡಿನಲ್ಲಿ ಬೆತ್ತ ಬೆಳೆಯುವಿಕೆ ನಿಷೇಧ – ಬೆತ್ತ ಬೆಳೆಯುವುದರಿಂದ ಕಾಡು ನಾಶವಾಗುತ್ತಿದ್ದು, ಆಹಾರಾಭಾವದಿಂದ ಇತರ ಕಾಡುಪ್ರಾಣಿಗಳು ನಾಡಿಗೆ ನುಗ್ಗುತ್ತಿರುವುದರಿಂದ ತಕ್ಷಣ ನಿಷೇಧಿಸಬೇಕು.

ಕೋವಿ ಲೈಸನ್ಸ್ ವಿತರಣೆ ಮತ್ತು ನವೀಕರಣ ಸರಳೀಕರಣ – ರೈತರಿಗೆ ಕಾಡು ಪ್ರಾಣಿಗಳಿಂದ ತಮ್ಮನ್ನು ಹಾಗೂ ಬೆಳೆಗಳನ್ನು ರಕ್ಷಿಸಲು ಅಗತ್ಯವಿರುವ ಲೈಸನ್ಸ್ ವಿತರಣೆಯ ಮತ್ತು ನವೀಕರಣದ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು.

ಸರ್ಕಾರ ಈ ಬೇಡಿಕೆಗಳನ್ನು ತ್ವರಿತವಾಗಿ ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನ ಮತ್ತು ಕೃಷಿಯನ್ನು ಕಾಡಾನೆ ಹಾವಳಿಯಿಂದ ರಕ್ಷಿಸಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ (ಶಾಸಕ) ಕಿಶೋರ್ ಕುಮಾರ್ ಅವರು ಒತ್ತಾಯಿಸಿದರು. 

ಇದಕ್ಕೆ ಹಿರಿಯ ನಾಯಕರು ಶಾಸಕರಾದ ಪ್ರತಾಪ್ ಸಿಂಹ  ನಾಯಕ್ ಅವರು ಕೂಡ ಧ್ವನಿಗೂಡಿಸಿದರು