ಮಾಣಿ:  ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಶಿಲಾಮಯ ಗರ್ಭಗುಡಿಯಲ್ಲಿ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವಕ್ಕೆ ಆಗಮಿಸಿದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಪುರಪ್ರವೇಶ ಸಮಾರಂಭ ಭಾನುವಾರ ಸಂಜೆ ವೈಭವದಿಂದ ನಡೆಯಿತು.

ಮಾಣಿ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿ ಬಂಗಾರಡ್ಕ ಜನಾರ್ದನ ಭಟ್, ಕೋಶಾಧಿಕಾರಿ ಮೈಕೆ ಗಣೇಶ ಭಟ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಮಂಡಲ ಗುರಿಕ್ಕಾರರಾದ ಉದಯಕುಮಾರ್ ಖಂಡಿಗ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಮೂರು ಮಂಡಲಗಳ ಅಧ್ಯಕ್ಷರಾದ ಪರಮೇಶ್ವರ ಭಟ್, ಗಣೇಶಮೋಹನ ಕಾಶಿಮಠ, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಮತ್ತು ಮಂಗಳೂರು ಹೋಬಳಿಯ ಸಮಸ್ತ ಶಿಷ್ಯಭಕ್ತರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.

ಮಂಗಳೂರು- ಮೈಸೂರು ಹೆದ್ದಾರಿಯ ಕೋದಂಡರಾಮ ಮಹಾದ್ವಾರದ ಬಳಿಯಿಂದ ಬೆಳ್ಳಿಪಲ್ಲಕ್ಕಿಯಲ್ಲಿ ಶ್ರೀಗಳನ್ನು ವೈಭವದ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಕರೆದೊಯ್ಯಲಾಯಿತು. ವೈದಿಕರಿಂದ ವೇದಘೋಷ, ಪೂರ್ಣಕುಂಭ ಹಾಗೂ ಛತ್ರ ಚಾಮರಗಳೊಂದಿಗೆ ನಡೆದ ಭವ್ಯ ಮೆರವಣಿಗೆಯಲ್ಲಿ ನಾಡಿನ ಖ್ಯಾತ ಸಾಂಸ್ಕ್ರತಿಕ ಮತ್ತು ಜಾನಪದ ತಂಡಗಳು, ಕುಣಿತ ಭಜನಾ ತಂಡಗಳು, ನೃತ್ಯಚೆಂಡೆ ತಂಡಗಳು ಈ ಮೆರವಣಿಗೆಗೆ ಮೆರುಗು ನೀಡಿದರು.

ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ಶ್ರೀಗಳನ್ನು ಬರಮಾಡಿಕೊಂಡರು. ಶ್ರೀಮಠದ ಆವರಣದಲ್ಲಿ ಆಂಜನೇಯ, ಗಣಪತಿ ದೇವರ ದರ್ಶನ ಪಡೆದ ಶ್ರೀಗಳು ಬಳಿಕ ಬಾಲಾಲಯದಲ್ಲಿರುವ ಸಪರಿವಾರ ಶ್ರೀರಾಮದೇವರ ದರ್ಶನ ಪಡೆದರು. ಬಳಿಕ ಧೂಳೀ ಪಾದಪೂಜೆ ನಡೆಯಿತು.

ಅಡಿಕೆಗೆ ಬಂದ ಎಲೆ ಚುಕ್ಕಿ ರೋಗ ನಿವಾರಣೆಗಾಗಿ ಪ್ರಾರ್ಥಿಸಿ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ಜಿಲ್ಲೆಯ ಸಮಸ್ತ ಜನತೆಯ ಫಲವಾಗಿ ಅಡಿಕೆ ಗೊನೆ ಸಮರ್ಪಿಸಲಾಯಿತು. ಬ್ರಹ್ಮಕಲಶೋತ್ಸವಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸಮರ್ಪಣೆಯಾದ ಹಸಿರುವಾಣಿ ಹೊರೆಕಾಣಿಕೆಯ ಸುವಸ್ತುಗಳನ್ನು ಸಮರ್ಪಿಸಲಾಯಿತು.

ಮೆರವಣಿಗೆಗೆ ಮುನ್ನ ಕೋದಂಡರಾಮ ಮಹಾದ್ವಾರದಿಂದ ಬೊಳ್ಳುಕಲ್ಲುವರೆಗೆ ಅಗಲೀಕರಣಗೊಂಡಿರುವ ನೂತನ ರಸ್ತೆಯನ್ನು ಶ್ರೀಗಳು ಉದ್ಘಾಟಿಸಿದರು. ಈ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶ್ರಮಿಸಿದ ಶಾಸಕ ರಾಜೇಶ್ ನಾಯ್ಕ ಅವರು ಅನ್ಯಕಾರ್ಯ ನಿಮಿತ್ತ ತೆರಳಿದ್ದರಿಂದ ಗ್ರಾಮಪಂಚಾಯ್ತಿ ಸದಸ್ಯರಾದ ರಾಜಾರಾಮ ಕಾಡೂರು, ಹರೀಶ್ ರೈ ಪಾಣೂರು, ಮಮತಾ, ಶಶಿಕುಮಾರಿ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಇಂದು ಪುನಃಪ್ರತಿಷ್ಠೆ

23ರಿಂದ 26ರ ವರೆಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಭಜನೆ ಮತ್ತು 25ರ ವರೆಗೆ ಪ್ರತಿದಿನ ಸಂಜೆ 7ರಿಂದ 10ರ ವರೆಗೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಮುದ ನೀಡಲಿವೆ. 23ರಂದು ಸೋಮವಾರ ಬೆಳಿಗ್ಗೆ 11.20ರ ಮೀನಲಗ್ನ ಸುಮೂರ್ಹದಲ್ಲಿ ರಾಘವೇಶ್ವರ ಶ್ರೀಗಳ ಅಮೃತಹಸ್ತಗಳಿಂದ, ಗೋಕರ್ಣದ ವೇದಮೂರ್ತಿ ಶ್ರೀ ಅಮೃತೇಶ ಭಟ್ಟ ಹಿತೇ ಅವರ ಆಚಾರ್ಯತ್ವದಲ್ಲಿ ಸಪರಿವಾರ ಶ್ರೀ ಸೀತಾರಾಮಚಂದ್ರ, ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವರ ಪುನಃಪ್ರತಿಷ್ಠೆ ನಡೆಯಲಿದೆ. ಜತೆಗೆ ಸರ್ವಾಲಂಕಾರ ಭೂಷಿತ ಸ್ವರ್ಣಮಂಟಪದಲ್ಲಿ ಶ್ರೀಪೂಜೆ, ಶ್ರೀಗುರುಭಿಕ್ಷಾ ಸೇವೆ ಮತ್ತು ಸೂತ್ರಸಂಗಮ ಜರುಗಲಿದೆ.

ಬ್ರಹಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಇಂದು ಧಾರ್ಮಿಕ ವಿಧಿವಿಧಾನಗಳು ಆರಂಭವಾದವು. ತಂತ್ರಿಗಳಿಗೆ ಸ್ವಾಗತ, ಗುರುದೇವತಾ ಪ್ರಾರ್ಥಮೆ, ಆಚಾರ್ಯಾದಿ ಋತ್ವಿಗ್ವರಣೆ, ಆಲಯ ಪರಿಗ್ರಹ, ಅಧಿವಾಸ, ಮಹಾಪಾದುಕಾ ಸನ್ನಿಧಿಯಲ್ಲಿ ಶ್ರೀ ಗುರುಪರಂಪರಾ ಪೂಜೆ, ಮಹಾಗಣಪತಿ ಹವನ, ಅರುಣ ಹವನ, ಶ್ರೀರಾಮ ತಾರಕ ಹವನ, ವೇದ ಹಾಗೂ ಶ್ರೀ ರಾಮಾಯಣ ಪಾರಾಯಣ ಭಾನವಾರ ಆರಂಭವಾಯಿತು.