ದಾಸಶ್ರೇಷ್ಠರಾದ ಕನಕ-ಪುರಂದರರ ಬಗ್ಗೆ ಅನೇಕ ಬರಹಗಳು ಮತ್ತು ರಂಗಪಠ್ಯಗಳು ಇದ್ದರೂ ಈ ಇಬ್ಬರು ಮಹನೀಯರನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ವಿಶಿಷ್ಟ ಕೃತಿಯೊಂದನ್ನು ಹಿರಿಯ ರಂಗ ನಿರ್ದೇಶಕರಾದ ಮೋಹನಚಂದ್ರ ಯು. ಅವರು ರಚಿಸಿದ್ದಾರೆ. ಕನಕ-ಪುರಂದರರನ್ನು ವರ್ತಮಾನದಲ್ಲಿ ನಾವು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಅನೇಕ ಒಳನೋಟಗಳನ್ನುಳ್ಳ ಒಂದು ಅಪರೂಪದ ನಾಟಕ ಕೃತಿ ’ಕನಕ-ಪುರಂದರ’. ಈ ಕೃತಿಯ ಲೋಕಾರ್ಪಣೆ ಸಮಾರಂಭ ನವೆಂಬರ್ 7 ಗುರುವಾರ ದಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಾನ್ನಿಧ್ಯ ಸಭಾಂಗಣದಲ್ಲಿ ನಡೆಯಿತು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ, ಆಯನ ನಾಟಕದ ಮನೆ, ಮಂಗಳೂರು ಮತ್ತು ಹೊಸಪೇಟೆಯ ಯಾಜಿ ಪ್ರಕಾಶನದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ಕವಿ, ಕಥೆಗಾರ ಮತ್ತು ಕಾಕಲ್ ಪೌಂಡೇಶನ್ ನ ಟ್ರಸ್ಟಿ ಚಂದ್ರಶೇಖರ್ ಕಾಕಲ್ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವರಾಗಿರುವ ಡಾ. ಆಲ್ವಿನ್ ಡೇಸಾ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ರಂಗನಟ ಮತ್ತು ರಂಗ ನಿರ್ದೇಶಕ ಡಾ ನರಸಿಂಹಮೂರ್ತಿ ಮತ್ತು ಕವಿ, ನಾಟಕಕಾರ ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿರುವ ಷಂಶುದ್ದೀನ್ ಅವರು ರಂಗಪಠ್ಯದ ಪರಿಚಯ ಮಾಡಿ ಕೊಟ್ಟರು.

ಈ ಸಂದರ್ಭದಲ್ಲಿ ಖ್ಯಾತ ರಂಗ ಸಂಗೀತ ಸಂಯೋಜಕರಾದ ಶೀನಾ ನಾಡೋಳಿ ಅವರು ’ಕನಕ-ಪುರಂದರ’ ರಂಗಪಠ್ಯದಲ್ಲಿ ಬರುವ ಕನಕ-ಪುರಂದರರ ಕೀರ್ತನೆಗಳಿಗೆ ರಾಗ ಸಂಯೋಜಿಸಿ ಹಾಡಿದರು. ಯಾಜಿ ಪ್ರಕಾಶನದ ಆಡಳಿತ ನಿರ್ದೇಶಕಿ ಸವಿತಾ ಯಾಜಿ, ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಗಣೇಶ ಯಾಜಿ, ಹಿರಿಯ ರಂಗ ತಜ್ಞರಾದ ಐ ಕೆ ಬೊಳುವಾರು, ಆಯನ ನಾಟಕದ ಮನೆಯ ಸಂಸ್ಥಾಪಕ ಸದಸ್ಯರಾಗಿರುವ ಶ್ಯಾಮಸುಂದರ್ ರಾವ್, ಪ್ರಭಾಕರ್ ಕಾಫಿಕಾಡ್, ನಟ ಚಂದ್ರಹಾಸ್ ಉಳ್ಳಾಲ್, ಮೋಹನಚಂದ್ರ ಅವರ ಬಂಧು ಮಿತ್ರರು, ರಂಗಾಸಕ್ತರು, ಸಾಹಿತ್ಯಾಸಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಂತ ಅಲೋಶಿಯಸ್ ಪರಿಗಣಿತ ವಿವಿಯ ಡಾ ದಿನೇಶ್ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನು ಸ್ವಾಗತಿಸಿದರು.

ಕೃತಿಕಾರರಾದ ಮೋಹನಚಂದ್ರ ಯು. ಅವರು ವಂದಿಸಿದರು.