ಉಡುಪಿ, ಜೂನ್ 16: ಇಸ್ರೇಲ್ ಮತ್ತು ಇರಾನ್ ನಡುವೆ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯು ಆ ದೇಶಗಳಲ್ಲಿ ನೆಲೆಸಿರುವ ವಿದೇಶಿಗರಿಗೆ ಆತಂಕ ಉಂಟು ಮಾಡಿದೆ. ರಾಜ್ಯದ ಸುಮಾರು 9 ವಿದ್ಯಾರ್ಥಿಗಳು ಇರಾನ್ ದೇಶದ ರಾಜದಾನಿಯಾದ ತೆಹರಾನ್ ಸಮೀಪದಲ್ಲಿರುವ Shahid Behshti Medical Univerity ಯಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದು, ಸದರಿ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಆತಂಕಗೊಂಡಿರುತ್ತಾರೆ. ಈ ವಿದ್ಯಾರ್ಥಿಗಳ ಪೈಕಿ ಒರ್ವ ವಿದ್ಯಾರ್ಥಿಯಾದ ನದೀಮ್ ಹುಸೇನ್ ರವರು ಹಾಗೂ ಬೆಂಗಳೂರಿನಲ್ಲಿರುವ ಅವರ ಪೋಷಕರು ಅನಿವಾಸಿ ಭಾರತೀಯ ಸಮಿತಿ, ಬೆಂಗಳೂರು ಕಛೇರಿಗೆ ದೂರವಾಣಿ ಮುಖೇನ ಸಂಪರ್ಕಿಸಿದ್ದು, ಅವರ ನೋವನ್ನು ತೋಡಿಕೊಂಡಿದ್ದು ಕೂಡಲೇ ದೇಶಕ್ಕೆ ಹಿಂದಿರುಗಲು ಇಚ್ಛೆಯನ್ನು ವ್ಯಕ್ತಪಡಿಸಿರುತ್ತಾರೆ.  ಇದಕ್ಕೆ ಸ್ಪಂದಿಸಿದ ಅನಿವಾಸಿ ಭಾರತೀಯ ಸಮಿತಿ, ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ರವರು ಕೂಡಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಇರಾನ್ ನಲ್ಲಿ ನೆಲೆಸಿರುವ ಈ ವಿದ್ಯಾರ್ಥಿಗಳನ್ನು ಕೂಡಲೇ ಕರೆತರಲು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿರುತ್ತಾರೆ. ಇದಲ್ಲದೇ ದೂರವಾಣಿ ಮುಖೇನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಖುದ್ದು ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅನಿವಾಸಿ ಭಾರತೀಯ ಸಮಿತಿಯ ಕಚೇರಿ ಪ್ರಕಟಣೆ ತಿಳಿಸಿದೆ.