ಉಡುಪಿ: ಜಿಲ್ಲೆಯಲ್ಲಿ ದಿನೇ ದಿನೇ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚುತ್ತಿದೆ. ಸಾರ್ವಜನಿಕರು ಬಿಸಿಗಾಳಿ ಹಾಗೂ ಶಾಖದಿಂದ ತಮ್ಮ ದೇಹದ ಆರೋಗ್ಯ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಿ, ಉತ್ತಮ ಆರೋಗ್ಯ ಹೊಂದುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಬೇಸಿಗೆಯ ಪ್ರಸ್ತುತ ಮಾರ್ಚ್ ತಿಂಗಳಿನಲ್ಲಿಯೇ 39ಡಿಗ್ರಿ ಸೆಲ್ಸಿಯಶ್ ನಷ್ಟು ಉಷ್ಣಾಂಶವಿದೆ. ಮುಂಬರುವ ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಉಷ್ಣಾಂಶವು ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಇವೆ. ಇದರಿಂದಾಗಿ ಹೀಟ್ ವೇವ್ ಸ್ಟ್ರೋಕ್‍ನಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಹೆಚ್ಚು ಹೆಚ್ಚು ನೀರು ಸೇವನೆ, ವಿಶ್ರಾಂತಿ ಸೇರಿದಂತೆ ಚಟುವಟಿಕೆಗಳ ಅವಧಿ ಬದಲಾವಣೆ ಸೇರಿದಂತೆ ಮತ್ತಿತರ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು. 

ಪ್ರಸ್ತುತ ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಕಂಡು ಬಂದಿಲ್ಲ. ಕಳೆದ ಸಾಲಿನಲ್ಲಿ ಸಮಸ್ಯೆ ಉಂಟಾದ ಗ್ರಾಮ ಅಥವಾ ವಾರ್ಡ್ ಗಳಲ್ಲಿ ಈಗಿನಿಂದಲೇ ಮುಂದೆ ಸಮಸ್ಯೆಗಳಾದಲ್ಲಿ ಕುಡಿಯುವ ನೀರು ಒದಗಿಸಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ತಯಾರಿ ಮಾಡಿಕೊಳ್ಳಬೇಕು ಎಂದ ಅವರು, ಕಲುಷಿತ ಕುಡಿಯುವ ನೀರು ಸರಬರಾಜು ಆಗದಂತೆ ಅಗತ್ಯ ಕ್ರಮವಹಿಸಬೇಕು. ಆಗಿಂದಾಗ್ಗೆ ನೀರಿನ ಪರೀಕ್ಷೆಗಳನ್ನು ಮಾಡಿಸಬೇಕು ಎಂದರು.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಸಿಡಿಲು-ಗುಡುಗು ಗಳಿಂದ ಮಾನವನ ಹಾನಿ ಉಂಟಾಗಿತ್ತು. ಸಿಡಿಲು-ಗುಡುಗು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಿ, ಸಾವು-ನೋವುಗಳು ಉಂಟಾಗದಂತೆ ಸೂಕ್ತ ಕ್ರಮ ವಹಿಸಬೇಕೆಂದರು.

ವಿದ್ಯುತ್‍ಚ್ಛಕ್ತಿ ಸರಬರಾಜಿನ ಹಾಳಾದ ಕಂಬಗಳು, ನೇತಾಡುವ ತಂತಿಗಳ ತೆರವು ಕಾರ್ಯಗಳನ್ನು ಹಾಗೂ ಜಂಗಲ್ ಕ್ಲಿಯರೆನ್ಸ್ ಕಾರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ಯಾವುದೇ ಭಾಗದಲ್ಲಿ ವಿದ್ಯುತ್‍ಚ್ಛಕ್ತಿ ಸರಬರಾಜಿನ ದುರಸ್ಥಿಗಾಗಿ ವ್ಯತ್ಯಯ ಉಂಟುಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದರು.

ರಸ್ತೆ ಬದಿ ಸೇರಿದಂತೆ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಅಪಾಯಕಾರಿ ಮರಗಳ ತೆರವು ಕಾರ್ಯಗಳನ್ನು ನಿರ್ಲಕ್ಷ್ಯವಿಲ್ಲದೇ ಜರೂರಾಗಿ ಕೈಗೊಳ್ಳಬೇಕು. ಮಳೆ ನೀರು ಸರಾಗವಾಗಿ ಹರಿದುಹೋಗಲು ಅನುಕೂಲವಾಗುವಂತೆ ತೋಡು ಹಾಗೂ ಚರಂಡಿಗಳ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

ಸ್ಥಳೀಯ ಸಂಸ್ಥೆಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ್ನು ಒದಗಿಸಲು ಅಗತ್ಯವಿರುವ ಅನುದಾನವನ್ನು ಎಸ್.ಎಫ್.ಸಿ ಯಲ್ಲಿ ಶೇ. 50 ರಷ್ಟು ಮೀಸಲಿರಿಸಬೇಕು ಎಂದ ಅವರು, ತಾಲೂಕು ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿಗಳು ಆಗಿಂದಾಗ್ಗೆ ಸಭೆ ನಡೆಸಿ, ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.

ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಉಂಟಾಗುವ ಸಾಧ್ಯತೆಗಳು ಹೆಚ್ಚು ಇರುವ ಹಿನ್ನೆಲೆ, ಅಗ್ನಿ ಶಾಮಕ ದಳದವರು ಸದಾ ಸನ್ನದ್ಧರಾಗಿರಬೇಕು. ಅಗ್ನಿ ನಂದಿಸುವ ವಾಹನಗಳ ಕೊರತೆಯಿದ್ದಲ್ಲಿ ಕೂಡಲೆ ಸರಕಾರಕ್ಕೆ ಪತ್ರ ಬರೆದು ಅವುಗಳನ್ನು ತರಿಸುವ ಕಾರ್ಯವಾಗಬೇಕು ಎಂದರು.

ನೆರೆಯಿಂದ ತೊಂದರೆ ಉಂಟಾಗುವ ಗ್ರಾಮ ಅಥವಾ ವಾರ್ಡ್‍ಗಳ ಪ್ರವಾಹ ಪೀಡಿತ ಪ್ರದೇಶಗಳ ನಿರ್ವಹಣೆ ಯೋಜನೆಗಳನ್ನು ತಯಾರಿಸಿ ಇಟ್ಟುಕೊಳ್ಳಬೇಕು ಎಂದ ಅವರು, ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಸಾಮಥ್ರ್ಯದ ದೃಢೀಕರಣ ಪತ್ರಗಳನ್ನು ಅಭಿಯಂತರರುಗಳಿಂದ ಪಡೆದು, ಸಲ್ಲಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕಳೆದ ಸಾಲಿನಲ್ಲಿ ಗ್ರಾಮೀಣ ಭಾಗದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ತೊಂದರೆ ಉಂಟಾಗಿತ್ತು. ಈಗಾಗಲೇ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ಮುಂದಾಗುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಖಾಸಗಿ ಬೋರ್‍ವೆಲ್‍ಗಳಿಂದ ನೀರು ಪಡೆಯಲು ಒಪ್ಪಂದ ಮಾಡಿಕೊಳ್ಳುವಂತೆ ಸೂಚನೆ ನೀಡುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ ಎಂದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕುಂದಾಪುರ ಡಿ.ಎಫ್.ಓ ಗಣಪತಿ, ಕಾರ್ಕಳ ವನ್ಯಜೀವಿ ವಿಭಾಗದ ಡಿ.ಎಫ್.ಓ ಶಿವರಾಮ ಎಂ ಬಾಬು, ಎಎಸ್‍ಪಿ ಸಿದ್ದಲಿಂಗಪ್ಪ, ಸಹಾಯಕ ಕಮೀಷನರ್ ಮಹೇಶ್ಚಂದ್ರ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕುಗಳ ತಹಶೀಲ್ದಾರ್‍ಗಳು, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.