ಉಡುಪಿ:  ಜಿಲ್ಲೆಯಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆ ಅಧಿಕವಾಗಿದ್ದು, ಖಾಸಗಿ ಕೃಷಿ ಜಮೀನಿಗೆ ಅಥವಾ ವಾಸ್ತವ್ಯದ ಮನೆಗೆ ಸಂಪರ್ಕಿಸುವ ರಸ್ತೆ, ನೀರು ಹರಿಯುವ ತೋಡು ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಭೂ ವ್ಯವಹಾರದ ಕೆಲವು ದಲ್ಲಾಳಿಗಳು ಹಣ ಮಾಡುವ ದುರುದ್ದೇಶದಿಂದ ಜನಸಾಮಾನ್ಯರು ಖರೀದಿಸುವ ಜಮೀನು, ದಾರಿ, ನೀರು ಹರಿಯುವ ತೋಡುಗಳ ದಾಖಲೆ/ ಅಳತೆಗಳಲ್ಲಿ ವ್ಯತ್ಯಾಸ ಮಾಡಿಸಿ ಅಥವಾ ದಾಖಲೆಗಳಲ್ಲಿ ಕಾಣಿಸದಂತೆ ಮಾಡದೆ ಬದಲಿಸಿ, ಯಾವುದಾದರೊಂದನ್ನು ಹೆಚ್ಚುವರಿ ಅಥವಾ ಲೋಪ ಮಾಡಿ ವಂಚಿಸುವುದು ಕಂಡುಬರುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಸ್ವೀಕೃತವಾಗುತ್ತಿರುವ ಹಿನ್ನೆಲೆ, ಇಂತಹ ತಕರಾರುಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿರುತ್ತದೆ. 

 ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು ಅಧಯಕ್ಷರಾಗಿದ್ದು, ಭೂದಾಖಲೆಗಳ ಉಪನಿರ್ದೇಶಕರು, ಉಡುಪಿ/ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿಗಳು ಸದಸ್ಯರಾಗಿದ್ದು, ಕುಂದಾಪುರ ಸಹಾಯಕ ಕಮೀಷನರ್ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. 

ತಾಲೂಕು/ ಗ್ರಾಮ ಮಟ್ಟದ ಸಮಿತಿಯಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ಅಧ್ಯಕ್ಷರಾಗಿದ್ದು, ಸಂಬಂಧಪಟ್ಟ ಠಾಣಾ ವ್ಯಾಪ್ತಿಯ ಪೊಲೀಸ್ ನಿರೀಕ್ಷಕರು, ಭೂ ದಾಖಲೆಗಳ ಸಹಾಯಕ ನಿರೀಕ್ಷಕರು, ಹೋಬಳಿ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸದಸ್ಯರಾಗಿದ್ದು, ಗ್ರಾಮ ಆಡಳಿತಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. 

 The Indian Easement Act 1882 ರಂತೆ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ ಹಕ್ಕನ್ನು ಹೊಂದಿದ್ದು, ಇದಕ್ಕೆ ಬಾಜುದಾರರಿಂದ ಯಾವುದೇ ಹಸ್ತಕ್ಷೇಪಕ್ಕೆ ಅಥವಾ ಈ ಬಗ್ಗೆ ಸದರಿ ಹಕ್ಕನ್ನು ಕ್ಷೀಣಿಸುವುದಕ್ಕೆ ಸಾಧ್ಯವಿರುವುದಿಲ್ಲ. ಈ ನಿಟ್ಟಿನಲ್ಲಿ ಸಮಿತಿಗೆ ಕ್ರಮವಹಿಸಲು ಅವಕಾಶವಿದ್ದು, ಯಾವುದೇ ಸಮಸ್ಯೆಗಳಿದ್ದಲ್ಲಿ ಅರ್ಜಿಗಳನ್ನು ಸಮಿತಿಗೆ ಸಲ್ಲಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.