ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಉಡುಪಿ ಕಾಸರಗೋಡು 400 ಕೆ ವಿ ವಿದ್ಯುತ್ ಪ್ರಸರಣ ಕಾಮಗಾರಿ ನಡೆಸುವ ಸಂಬಂಧ ಸ್ಟರ್ ಲೈಟ್ ಕಂಪೆನಿಯವರು ಮುನ್ಸೂಚನೆ ರಹಿತವಾಗಿ ಪೊಲೀಸ್ ಬಲಪ್ರಯೋಗದೊಂದಿಗೆ ಖಾಸಗಿ ಸ್ಥಳಗಳಿಗೆ ಪ್ರವೇಶಿಸಿ ರಸ್ತೆ ಇತ್ಯಾದಿ ಮಾಡಲು ಸೂಕ್ತ ಪರಿಹಾರವನ್ನು ನೀಡದೆಯೇ ಬಹಳ ಜತನದಿಂದ ಆರೈಕೆ ಮಾಡಿ ಬೆಳೆಸಿದ ಅತ್ಯಂತ ಹೆಚ್ಚು ಫಲಬರುವ ಮರಗಳನ್ನು ಕಡಿದು ನಾಶ ಮಾಡಿರುತ್ತಾರೆ. ಸಂಬಂಧಪಟ್ಟ ಕಂಪನಿಯವರು ಕನಿಷ್ಠ ವಾರಕ್ಕೆ ಮೊದಲಾದರು ಸೂಕ್ತ ಪರಿಹಾರವನ್ನು, ನೋಟಿಸ್ ಅನ್ನು ನೀಡದೆಗೆ ರಾತ್ರೋರಾತ್ರಿ ಖಾಸಗಿ ಸ್ಥಳವನ್ನು ಪ್ರವೇಶಿಸಿ ಧಮ್ಕಿ ಹಾಕಿ ಮನೆಯವರನ್ನು ಹೆದರಿಸಲಾಗುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್, ಸಹಾಯಕ ಆಯುಕ್ತ ಹರ್ಷವರ್ಧನ್, ತಹಸೀಲ್ದಾರ ಶ್ರೀಧರ್ ಎಂ ಹಾಗೂ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್ ಅವರ ಎದುರು ನಿಡ್ಡೋಡಿ, ಅಶ್ವತ್ಥ್ ಪುರ, ಪದವು, ಇತ್ಯಾದಿ ಪರಿಸರದ ನಾಗರಿಕರು ಧಮಕಿ ಹಾಕಿದ ಕಂಪನಿಯವರ ಗುರುತು ಹಿಡಿದು ನೇರ ಆಪಾದನೆಯನ್ನು ಮಾಡಿದರು.
ಎಲ್ಲವನ್ನು ಕೂಲಂಕುಷವಾಗಿ ಆಲಿಸಿ ಸ್ಥಳದಲ್ಲಿದ್ದ ರೈತ ಕಿಸಾನ್ ಸಂಘದ ನೇತಾರ, ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆಯವರ ನ್ಯಾಯಾಲಯದ ಎಲ್ಲಾ ಆದೇಶಗಳನ್ನು ಪರಿಗಣಿಸಿ ಶಾಸಕರು ಈ ಕೆಳಗಿನಂತೆ ಕಂಪನಿಯ ಮಂದಿಗೆ ಸಾರ್ವಜನಿಕರ ಸಮಕ್ಷಮ ಆದೇಶವನ್ನು ನೀಡಿದರು.
ಕಂಪನಿಯ ಯಾವುದೇ ವ್ಯಕ್ತಿಯು ಈತನಕ ನನ್ನೊಂದಿಗೆ ಈ ಸಂಬಂಧವಾಗಿ ಚರ್ಚೆಗೆ ಬಂದಿರುವುದಿಲ್ಲ.
ಇನ್ನು ಮುಂದೆ ಕಂಪನಿಯ ಮಂದಿ ಯಾರದ್ದೇ ಖಾಸಗಿ ಸ್ಥಳವನ್ನು ಪ್ರವೇಶಿಸುವ ಮೊದಲು ಸಂಬಂಧ ಪಟ್ಟ ಗ್ರಾಮ ಅಥವಾ ಪಟ್ಟಣ ಪಂಚಾಯತ್, ಗ್ರಾಮ ಲೆಕ್ಕಾಧಿಕಾರಿಗಳು, ತಹಸೀಲ್ದಾರದಿಂದ ಪೂರ್ವಾನುಮತಿಯನ್ನು ಪಡೆಯತಕ್ಕದ್ದು.
ಯಾವುದೇ, ಯಾರದ್ದೇ ಸ್ಥಳಕ್ಕೆ ಪ್ರವೇಶಿಸುವ ಮೊದಲು ಆಯಾ ಸ್ಥಳದ ಸೂಕ್ತ ದಾಖಲೆ, ಹಣ ಸಂದಾಯವಾದ ತರುವಾಯದ ಸ್ಥಳದ ವಾರಿಸುದಾರರ ಒಪ್ಪಿಗೆ ಪತ್ರ, ಟವರ್ ನಿರ್ಮಾಣದ ಹಾಗೂ ಹೋಗಿ ಬರಲು ಅಗತ್ಯ ಇರುವ ಮಾರ್ಗದ ಒಟ್ಟು ಪರಿಹಾರ ಧನ ಸಂದಾಯವಾದ ದಾಖಲೆ. ಇವೆಲ್ಲವನ್ನು ತಹಸೀಲ್ದಾರರು, ಸಹಾಯಕ ಆಯುಕ್ತರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತೋರಿಸಿದ ತರುವಾಯವೇ ಖಾಸಗಿ ಸ್ಥಳಕ್ಕೆ ಪ್ರವೇಶಿಸಬಹುದಾಗಿದೆ.
ಒಂದು ವೇಳೆ ಈ ತರುವಾಯವು ಯಾವುದೇ ತಕರಾರು, ಪ್ರತಿಭಟನೆ ಖಾಸಗಿ ಸ್ಥಳದ ವಾರೀಸುದಾರರಿಂದ ಉದ್ಭವಿಸಿದಲ್ಲಿ ಜಿಲ್ಲಾಧಿಕಾರಿಗಳ ಸಮಕ್ಷಮ ವಿಲೇವಾರಿ ಆಗದೆ ಬಲಾತ್ಕಾರವಾಗಿ ಎಂದಿಗೂ ಪ್ರವೇಶಿಸಬಾರದು. ಖಾಸಗಿ ಸ್ಥಳಕ್ಕೆ ಪ್ರವೇಶಿಸುವ ಅಧಿಕಾರ, ಸಂಬಂಧ ಪಟ್ಟ ವಾರೀಸುದಾರರ ಹೊರತಾಗಿ ಬೇರೆ ಯಾರಿಗೂ ಇರುವುದಿಲ್ಲ ಎಂದು ಖಡಾ ಖಂಡಿತವಾಗಿ ನಿರ್ದೇಶನವನ್ನು ನೀಡಿದರು.
ಕಾಮಗಾರಿ ರಾಜ್ಯ ಸರ್ಕಾರದ್ದಿರಲಿ, ಕೇಂದ್ರ ಸರ್ಕಾರದಿರಲಿ ರೈತರು ಒಟ್ಟಾಗಿ ಪ್ರತಿಭಟನೆಗೆ ಇಳಿದರೆ ಎಲ್ಲವೂ ಗೋಜಲುಮಯವಾಗುತ್ತದೆ ಅದಕ್ಕೆ ಆಸ್ಪದ ಕೊಡಬೇಡಿ ಎಂದು ಮುನ್ನೆಚ್ಚರಿಕೆಯನ್ನು ನೀಡಿದರು.