ಉಡುಪಿ:  ಪ್ರಸಕ್ತ ಸಾಲಿನ ಮುಂಗಾರು ಮಳೆ ಈಗಾಗಲೇ ಪ್ರಾರಂಭವಾಗಿದ್ದು,  ಸಾಲಿಗ್ರಾಮ ಪಟ್ಟಣ  ಪಂಚಾಯತ್  ವ್ಯಾಪ್ತಿಯಲ್ಲಿನ  ಆಸ್ತಿ-ಪಾಸ್ತಿಗಳಿಗೆ  ತೊಂದರೆಯಾಗದಂತೆ ಸಾರ್ವಜನಿಕರು ಸಾಕಷ್ಟು  ಮುಂಜಾಗೃತೆ  ವಹಿಸಬೇಕು. ಚರಂಡಿಗಳಿಗೆ ಕಸಕಡ್ಡಿಗಳನ್ನು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೇ ಯಾವುದೇ ರೀತಿಯ ತ್ಯಾಜ್ಯಗಳನ್ನು ಎಸೆಯಬಾರದು. ಗೂಡಂಗಡಿ ಮಾಲೀಕರು ಉಪಯೋಗಿಸಿದ  ಬೊಂಡವನ್ನು  ಅದೇ ದಿನ  ವಿಲೇವಾರಿ  ಮಾಡಲು  ಕ್ರಮವಹಿಸಬೇಕು.  

ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದಲ್ಲದೇ ಸೊಳ್ಳೆಯಿಂದ ವಿವಿಧ ರೀತಿಯ ಕಾಯಿಲೆಗಳು ಉಂಟಾಗುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ಗೃಹೋಪಯೋಗಕ್ಕೆಂದು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿಗಳು, ಡ್ರಂಗಳು, ಬ್ಯಾರಲ್, ಮಡಕೆ ಮುಂತಾದ ನೀರಿನ ಶೇಖರಣೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಇವುಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು.  

ನೀರು ಸಂಗ್ರಹವಾಗುವ ಓವರ್ ಹೆಡ್ ಟ್ಯಾಂಕ್‍ಗಳನ್ನು ವಾರಕ್ಕೊಮ್ಮೆ ಪೂರ್ತಿ ನೀರು ಖಾಲಿ ಮಾಡಿ ಶುಚಿಗೊಳಿಸಿ, ನಂತರ ನೀರು ಸಂಗ್ರಹಿಸಬೇಕು. ಅಂಗಡಿ-ಮುಂಗಟ್ಟು, ಮನೆ ಪರಿಸರದಲ್ಲಿ ಮನೆಯ ಸಮೀಪ ಇರುವ ಅನುಪಯುಕ್ತ ಟಯರ್, ಎಳನೀರು ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಹಾಗೂ ಸ್ವಯಂ ರಕ್ಷಣಾ ವಿಧಾನಗಳಿಂದ ಸೊಳ್ಳೆ ನಿರೋಧಕಗಳನ್ನು ಹಾಗೂ ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಅದರಲ್ಲಿಯೂ ಕೀಟನಾಶಕ ಸಿಂಪಡಿಸಿದ ಸೊಳ್ಳೆಪರದೆಗಳು ಅತ್ಯುತ್ತಮ. 

ಸಂಜೆ ಮತ್ತು ರಾತ್ರಿ ವೇಳೆ ಮೈ ತುಂಬಾ ಬಟ್ಟೆ ಧರಿಸುವುದರೊಂದಿಗೆ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರಬೇಕು. ಜ್ವರ, ತಲೆನೋವು ಸೇರಿದಂತೆ ಇನ್ನಿತರೆ ಲಕ್ಷಣಗಳಿದ್ದಲ್ಲಿ ಕೂಡಲೇ ವೈದ್ಯರನ್ನು ಭೇಟಿ  ಮಾಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಕಾಯಿಸಿ ಆರಿಸಿದ ನೀರನ್ನೇ ಉಪಯೋಗಿಸಬೇಕು. ಮಳೆಗಾಲದ ಸಮಯದಲ್ಲಿ ಸಾರ್ವಜನಿಕರು ನೈಸರ್ಗಿಕವಾಗಿ  ಹರಿಯುವ  ನೀರಿಗೆ  ಅಡ್ಡಿ  ಉಂಟುಮಾಡದೇ   ಸರಾಗವಾಗಿ   ನೀರು ಹರಿಯಲು  ಅವಕಾಶ  ಮಾಡಿಕೊಡಬೇಕು. 

ಗುಡುಗು, ಸಿಡಿಲು, ಮಿಂಚಿನ ಸಂದರ್ಭದಲ್ಲಿ ನಾಗರೀಕರು ಸುರಕ್ಷಿತವಾದ ಮನೆ ಮತ್ತು ಕಟ್ಟಡಗಳ ಒಳಗೆ ಮತ್ತು ಕಿಟಕಿ ಮುಚ್ಚಿರುವಂತಹ ವಾಹನಗಳಲ್ಲಿ ಆಶ್ರಯ ಪಡೆಯಬೇಕು. ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಕಾಮನ್ ಅಲರ್ಟಿಂಗ್ ಪ್ರೋಟೋಕಾಲ್ ಮುಖಾಂತರ  ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ ಅಲರ್ಟ್ / ಸಂದೇಶಗಳನ್ನು  ಗಮನಿಸಬೇಕು. ಮಿಂಚಿನ ಸಮಯದಲ್ಲಿ ಲೋಹದ ವಸ್ತುಗಳ ಸಂಪರ್ಕದಲ್ಲಿರಬಾರದು. ಕೆರೆ ಮತ್ತು ನದಿಗಳು ಹಾಗೂ ಇನ್ನಿತರ ನೀರಿನ ಮೂಲಗಳಿಂದ ದೂರವಿರಬೇಕು. ಮನೆಯ ಹೊರಗಡೆ ಇದ್ದಲ್ಲಿ ಎತ್ತರದ ಪ್ರದೇಶಗಳಿಗೆ ಹೋಗಬಾರದು. 

ಗುಡುಗು, ಸಿಡಿಲು, ಮಿಂಚು ಬರುವ ಸಂದರ್ಭದಲ್ಲಿ ವಿದ್ಯುತ್ ಉಪಕರಣ, ದೂರವಾಣಿ ಸಂಪರ್ಕ, ಮೊಬೈಲ್ ಸಂಪರ್ಕ, ಮೊಬೈಲ್ ಟವರ್ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ಪವನ ವಿದ್ಯುತ್, ಗೋಪುರಗಳಿಂದ ದೂರವಿರಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಒಣಗಿದ ಮರಗಳು ಹಾಗೂ ಅಪಾಯವನ್ನು ಉಂಟುಮಾಡುವ ಮರಗಳು ಇದ್ದಲ್ಲಿ ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಪಡೆದು ಮರಗಳನ್ನು ತೆರವುಗೊಳಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.

ತುರ್ತು ಸಹಾಯವಾಣಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಆಗುವ ಹಾನಿಯನ್ನು ತುರ್ತಾಗಿ ಪರಿಹರಿಸಲು ಸಲುವಾಗಿ 24*7 ಸಹಾಯವಾಣಿ ಕೇಂದ್ರ (ಕಂಟ್ರೋಲ್ ರೂಂ) ಸ್ಥಾಪಿಸಲಾಗಿzದ್ದು, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆ: 0820-2564229 ಅಥವಾ 7353449984 ಗೆ ಕರೆ ಮಾಡಬಹುದಾಗಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್‍ನ ಕಚೇರಿ ಪ್ರಕಟಣೆ ತಿಳಿಸಿದೆ.