ಉಜಿರೆ: ವೃತ್ತಿಯಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಬಹುಮುಖ್ಯವಾಗಿದೆ. ಮಹಿಳೆಯರು ಸಮತೋಲನದೊಂದಿಗೆ ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಸಮಯ ನಿರ್ವಹಣೆ ಮಾಡಿಕೊಳ್ಳಬೇಕು. ಗ್ರಾಹಕರ ಜೊತೆಗೆ ಉತ್ತಮ ರೀತಿಯಲ್ಲಿ ಸೌಜನ್ಯಪೂರ್ವಕವಾಗಿ ಸಂವಹನ ಮಾಡಿ, ಉತ್ತಮವಾದ ಮನೋಭಾವ ಬೆಳಸಿಕೊಳ್ಳಿ. ಸರ್ಕಾರದ ಮತ್ತು ಬ್ಯಾಂಕಿನ ಆರ್ಥಿಕ ಸಹಕಾರ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಸೌಮ್ಯ ಬಿ.ಪಿ ಹೇಳಿದರು.
ಉಜಿರೆಯಲ್ಲಿ ರುಡ್ಸೆಟ್ ಸಂಸ್ಥೆಯಲ್ಲಿ 45 ದಿನಗಳ ಕಾಲ ನಡೆದ ಕಂಪ್ಯೂಟರ್ ಡಿ.ಟಿ.ಪಿ ಮತ್ತು ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ, ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.