ಉಜಿರೆ: “ಸಂಸಾರದಲ್ಲಿ ನಾನಾ ರೀತಿಯ ಒತ್ತಡಗಳು, ಆಸಕ್ತಿಗಳಿವೆ. ಅದರಲ್ಲಿ ದುಶ್ಚಟ ಒಂದು ಚಟ, ಅದು ಒಂದು ಸಲ ಮನುಷ್ಯನನ್ನು ಹಿಡಿದುಕೊಂಡಲ್ಲಿ ಅದರಿಂದ ಬಿಡಿಸಿಕೊಳ್ಳುವುದು ತುಂಬಾ ಕಷ್ಟ. ದುಶ್ಚಟ ಎಂಬುದು ಹೆಚ್ಚು ಶಕ್ತಿವಂತ. ಹಾಗಾಗಿ ಮನೋ ಕಾಮನೆಗಳನ್ನು ಆತ್ಮ ಪರಾಮರ್ಶೆಗೆ ಒಳಪಡಿಸಿದಾಗ ದುಶ್ಚಟಮುಕ್ತರಾಗಲು ಸಾಧ್ಯ. ಶಿಬಿರಾರ್ಥಿಗಳು ದುಶ್ಚಟಗಳಿಂದ ಒಮ್ಮೆ ಹೊರ ಬಂದ ಮೇಲೆ ಮತ್ತೆ ಇದರ ಬಳಿ ಹೋಗುವುದಿಲ್ಲ ಎಂಬ ದೃಢ ಸಂಕಲ್ಪ ಮಾಡಬೇಕು. 

ಕುಡಿತ ಬಿಡಬೇಕಾದರೆ ಬಾಹ್ಯ ಒತ್ತಡಕ್ಕಿಂತ ಆಂತರಿಕ ಒತ್ತಡ ಬಹಳ ಮುಖ್ಯ”ಎಂದುಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉಜಿರೆ ಲಾೈಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 260ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.“ದುಶ್ಚಟಕ್ಕೊಳಗಾದವರನ್ನು ಮನಪರಿವರ್ತನೆ ಮೂಲಕ ವ್ಯಸನಮುಕ್ತಿಗೊಳಿಸಲು ಸಾಧ್ಯ ಎಂಬುದನ್ನು ವೇದಿಕೆಯ ಮದ್ಯವರ್ಜನ ಶಿಬಿರಗಳು ತೋರಿಸಿಕೊಟ್ಟಿವೆ.  ದುಶ್ಚಟದ ಬಲೆಗೆ ಬಿದ್ದು, ಬದುಕಿನಲ್ಲಿ ಭರವಸೆಯನ್ನು ಕಳಕೊಂಡ ಸಾವಿರಾರು ಕುಟುಂಬಗಳು ಮದ್ಯವರ್ಜನ ಶಿಬಿರಗಳಿಂದಾಗಿ ಕುಟುಂಬದಲ್ಲಿ ಪ್ರೀತಿ, ವಿಶ್ವಾಸ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ” ಎಂದು ಅವರು ತಿಳಿಸಿದರು. ಶಿಬಿರದಲ್ಲಿ 48 ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣಸ್ವಾಮಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್, ಮತ್ತು ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಾದ ನಟರಾಜ್ ಬಾದಾಮಿಯವರು ಶಿಬಿರಾರ್ಥಿಗಳಿಗೆ ಮಾಹಿತಿ, ಮಾರ್ಗದರ್ಶನ ನೀಡಿರುತ್ತಾರೆ.  

8 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಯೋಗ, ಧ್ಯಾನ, ವಾಯಾಮ, ಚಿಂತನೆ, ಸಲಹೆ, ಭಜನೆ, ಗುಂಪು ಚಟುವಟಿಕೆ, ಆತ್ಮಾವಲೋಕನ, ಮಾಹಿತಿ ಕಾರ್ಯಕ್ರಮಗಳು, ಮನೋರೋಗ ತಜ್ಞರ ಸಲಹೆ ಇವೆಲ್ಲಾ ಚಟುವಟಿಕೆಗಳ ಮೂಲಕ ವ್ಯಸನಿಯಮನಪರಿವರ್ತನೆ ಮಾಡಲಾಗುತ್ತಿದೆ. ಶಿಬಿರದಲ್ಲಿ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ವಿವೇಕ್ ವಿ.ಪಾೈಸ್, ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ಶ್ರೀ ರಮೇಶ್, ಆರೋಗ್ಯ ಸಹಾಯಕರಾದ ಫಿಲೋಮಿನಾ ಡಿಸೋಜಾ, ಆಪ್ತಸಮಾಲೋಚಕರಾದ ಜಿ ಆರ್ ಮಧು ಮತ್ತು ಜಾಗೃತಿ ಸೌಧದ ಪ್ರಬಂಧಕರಾದ ಕಿಶೋರ್ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ಡಿಸೆಂಬರ್ 15 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.