ಉಜಿರೆ: ಧರ್ಮಸ್ಥಳದ ಬಗ್ಯೆ ಅನಧಿಕೃತ ಆಪಾದನೆಗಳೊಂದಿಗೆ ಅಪಪ್ರಚಾರ ಮಾಡಿ ಪಾವಿತ್ರ್ಯತೆಗೆ ಧಕ್ಕೆ ಮಾಡುವ ವಿಫಲ ಯತ್ನವನ್ನು ವಿಘ್ನಸಂತೋಷಿಗಳು ಮಾಡುತ್ತಿದ್ದಾರೆ. ಇದರಿಂದಾಗಿ ಅಸಂಖ್ಯಾತ ಭಕ್ತರಿಗೆ ತೀವ್ರ ನೋವಾಗಿದೆ ಎಂದು ಧರ್ಮಸ್ಥಳದ ಅಭಿಮಾನಿಭಕ್ತರಾದ ಬೆಂಗಳೂರಿನ ಹಿರಿಯ ವಿದ್ವಾಂಸರೂ ಆದ ದೈವಜ್ಞ ಸೋಮಯಾಜಿ ಹೇಳಿದರು.
ಭಾನುವಾರ ಧರ್ಮಸ್ಥಳಕ್ಕೆ ಬಂದ ಅವರು ಮಾಧ್ಯಮದವರೊಂದಿಗೆ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ಹಂಚಿಕೊಂಡರು.
ಹಲವಾರು ವರ್ಷಗಳಿಂದ ತಾನೊಬ್ಬ ಧರ್ಮಸ್ಥಳದ ಅಭಿಮಾನಿಯಾಗಿದ್ದು, ಸಾಂಪ್ರದಾಯಿಕ ಬ್ರಾಹ್ಮಣನಾಗಿ, ಹಿರಿಯ ವಿದ್ವಾಂಸನಾಗಿ ಇಲ್ಲಿನ ಸೇವಾಕಾರ್ಯಗಳು ಚಿರಪರಿಚಿತವಾಗಿವೆ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪವಿತ್ರ ಸ್ಥಳ ಧರ್ಮಸ್ಥಳ. “ ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಕೇಂದ್ರವಾಗಿ ಧರ್ಮಸ್ಥಳ ಎಲ್ಲರಿಗೂ ಅಪಾರ ಶ್ರದ್ಧಾ -ಭಕ್ತಿಯ ಕೇಂದ್ರವಾಗಿ ಬೆಳೆಯುತ್ತಿದೆ, ಬೆಳಗುತ್ತಿದೆ.
ಶ್ರೀರಾಮಚಂದ್ರ, ಕೃಷ್ಣ, ಸೀತೆ ಮೊದಲಾದವರಿಗೂ ಆಪಾದನೆಗಳು, ಟೀಕೆಗಳು ನಡೆದಿವೆ. ಹೆಗ್ಗಡೆಯವರು ಸ್ಥಿತಪ್ರಜ್ಞರಾಗಿ, ತಪಸ್ಸಿನಂತೆ, ತ್ಯಾಗ ಮನೋಭಾವದಿಂದ ಎಲ್ಲಾ ಸೇವಾಕಾರ್ಯಗಳನ್ನು ಲೋಕಕಲ್ಯಾಣಕ್ಕಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿರಂತರ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳದ ಬಗ್ಯೆ ವಿಶೇಷ ತನಿಖಾ ತಂಡ (ಎಸ್.ಐ.ಟಿ.) ರಚನೆಯ ಅಗತ್ಯ ಇರಲಿಲ್ಲ. ಆದರೂ ಸರ್ಕಾರ ತನ್ನ ಕರ್ತವ್ಯ ಮಾಡಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಅವಮಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಅಪಪ್ರಚಾರ ಮಾಡುವವರಿಗೂ ದೇವರು ಸದ್ಬುದ್ಧಿಯನ್ನು ನೀಡಿ ಹರಸಲಿ. ಹೆಗ್ಗಡೆಯವರ ಲೋಕಲ್ಯಾಣ ಕಾರ್ಯಕ್ರಮಗಳು ನಿರಂತರ ನಿರ್ವಿಘ್ನವಾಗಿ ಮುಂದುವರಿಯುವಂತೆ ದೇವರು ಹರಸಲೆಂದು ಸೋಮಯಾಜಿ ಪ್ರಾರ್ಥಿಸಿದರು.