2025ನೇ ಸಾಲಿನ ಡಾ ಪಿ.ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಟ ಪುರಸ್ಕಾರಕ್ಕೆ ಗುಲ್ವಾಡಿ ರಾಮದಾಸ ದತ್ತಾತ್ರೇಯ ಭಟ್ ಇವರು ಆಯ್ಕೆಯಾಗಿದ್ದಾರೆ. ಎಳವೆಯಿಂದಲೆ ನಾಟಕ ಕ್ಷೇತ್ರಕ್ಕೆ ಆಕರ್ಷಿತರಾದ ಗುಲ್ವಾಡಿಯವರು ಈವರೆಗೆನ ತಮ್ಮ ನಿರಂತರ ಎಂಟು ದಶಕಗಳ ಸುದೀರ್ಘ ಹವ್ಯಾಸಿ ರಂಗಕಲಾ ಬದುಕಿನಲ್ಲಿ ಸಾಂಪ್ರದಾಯಿಕ, ವಿಶೇಷವಾಗಿ ಪೌರಾಣಿಕ ನಾಟಕಗಳ (ಪ್ರಚಂಡ ಪರಶು, ಆತ್ಮಲಿಂಗ, ಸಂತ ಜ್ಞಾನೇಶ್ವರ, ತುಲಸಿ ಜಲಂದರ) ಮೇಕ್ ಅಪ್, ಧ್ವನಿ ಬೆಳಕಿನಿಂದ ಹಿಡಿದು ಸ್ವಂತ ನಾಟಕ ರಚನೆ, ಅಭಿನಯ, ನಿರ್ದೇಶನ ಸಾಮರ್ಥ್ಯಗಳೊಂದಿಗೆ ಮಂಗಳೂರಿಂದ ಮುಂಬೈ ನಗರದ ವರೆಗೂ ಹೆಸರು ಗಳಿಸಿದ್ದಾರೆ. ಸದ್ಯ ಗೋವಾದಲ್ಲಿ ನೆಲೆಸಿರುವ ಇವರ ಎಲೆಮರೆಯ ಪ್ರತಿಭೆಯನ್ನು ವಿಶ್ವ ಕೊಂಕಣಿ ಕೇಂದ್ರವು ಗುರುತಿಸಿ ಗೌರವಿಸಿದೆ.
2025ನೇ ಸಾಲಿನ ಡಾ ಪಿ.ದಯಾನಂದ ಪೈ ಭಾಷಾನುವಾದ ಪುರಸ್ಕಾರಕ್ಕೆ ಡಾ ಗೀತಾ ಶೆಣೈ ಇವರು ಆಯ್ಕೆಯಾಗಿರುತ್ತಾರೆ. ಡಾ ಗೀತಾ ಶೆಣೈಯವರು ವಚನ ಸಾಹಿತ್ಯ, ಕನಕದಾಸರ ಸಮಗ್ರ ಸಾಹಿತ್ಯ, ಕುವೆಂಪು ಸಾಹಿತ್ಯಮುಂತಾದ ಬೃಹತ್ ಬಹುಭಾಷಾ ಅನುವಾದ ಕಾರ್ಯ, ಅಲ್ಲದೆ 21 ಕೊಂಕಣಿ ಕಥೆ-ಕಾದಂಬರಿಗಳನ್ನು ಕನ್ನಡಕ್ಕೆ ,4 ಕನ್ನಡ ಕೃತಿಗಳನ್ನು ಕೊಂಕಣಿಗೆ, 16 ಇಂಗ್ಲೀಷ್ ಕೃತಿಗಳನ್ನು ಕನ್ನಡಕ್ಕೂ ಅನುವಾದಿಸಿದ್ದಾರೆ. ಅವರ,ತಲಾ 300 ರಷ್ಟು ಸ್ವತಂತ್ರ ಲೇಖನಗಳು, ಅನುವಾದಿತ ಲೇಖನಗಳು ಪ್ರಕಟಣೆ ಗೊಂಡಿವೆ. ಕೊಂಕಣಿ ಸಾಹಿತ್ಯಗಳನ್ನು ಕನ್ನಡಿಗರಿಗೆ ಪರಿಚಯಿಸುವಲ್ಲಿ ಡಾ ಗೀತಾ ಶೆಣೈಯವರ ಭಾಷಾಂತರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ತಲಾ ಒಂದು ಲಕ್ಷ ನಗದು, ಫಲಕ, ಸನ್ಮಾನ ಸಾಮಾಗ್ರಿಗಳೊಂದಿಗೆ ಈ ಎರಡೂ ಪ್ರಶಸ್ತಿಗಳನ್ನು ಫೆಬ್ರವರಿ 08 ರಂದು ಟಿ.ವಿ.ರಮಣ ಪೈ ಹಾಲ್ ನಲ್ಲಿ ಸಂಜೆ ನಡೆಯುವ ವಿಶ್ವಕೊಂಕಣಿ ನಾಟಕೋತ್ಸವದಲ್ಲಿ ವಿತರಿಸಲಾಗುವುದು.