ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಮೂಡುಬಿದಿರೆ ಕೃಷಿ ಇಲಾಖೆಯ ವತಿಯಿಂದ ಶಾಸಕರಿಂದ ಕೃಷಿ ಯಂತ್ರೋಪಕರಣಗಳ ವಿಚಾರಣೆ ಕಾರ್ಯಕ್ರಮವನ್ನು ತಾಲೂಕು ಕಚೇರಿಯ ಎದುರು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಗಂಟೆ 11:30ಕ್ಕೆ ನಿಗದಿಯಾಗಿದ್ದ ಈ ಕಾರ್ಯಕ್ರಮಕ್ಕೆ ಫಲಾನುಭವಿಗಳು ಸಾಕಷ್ಟು ಮೊದಲೇ ಆಗಮಿಸಿದ್ದರು ಕೂಡ, ವಿತರಿಸಬೇಕಾದ ಕೃಷಿ ಯಂತ್ರೋಪಕರಣಗಳು ಸಾಕಷ್ಟು ಮೊದಲೇ ತಾಲೂಕು ಕಚೇರಿಯ ಎದುರು ಸಂಗ್ರಹಿಸಲಾಗಿತ್ತು. ಆದರೆ ವಿತರಿಸಬೇಕಾದ ಶಾಸಕರೇ ಆಗಮಿಸದ ಕಾರಣ ಎಲ್ಲ ಯಂತ್ರೋಪಕರಣಗಳು ಅನಾಥವಾಗಿದ್ದವು.

ಆದರೆ ತಾಲೂಕು ಕಚೇರಿಯ ಸಭಾ ಸದನದಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆದಾರರಿಗೆ ತರಬೇತಿ ಕಾರ್ಯಕ್ರಮವು ಜರುಗಿತ್ತು. ಬೆಳೆ ಸಮೀಕ್ಷೆಯ ಬಗ್ಗೆ ಕೃಷಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಹಸೀಲ್ದಾರ್ ಶ್ರೀಧರ್ ಎಂ ಅವರು ರೈತರಿಗೆ ಸಾಲ ಮತ್ತು ಸಬ್ಸಿಡಿಗಾಗಿ ಸಮರ್ಪಕ ಸಮೀಕ್ಷೆಯ ಅಗತ್ಯವಿದೆ. ಇಲಾಖೆಯಿಂದ ಆಗಿರುವ ತಪ್ಪುಗಳನ್ನು ಸರಿಪಡಿಸುವುದಕ್ಕೆ ಯುವಕ ಯುವತಿಯರನ್ನು ಸ್ಥಳೀಯವಾಗಿ ನೇಮಕ ಮಾಡಲಾಗಿದೆ ಅವರು ಬೆಳೆ ಸಮೀಕ್ಷೆಯನ್ನು ಮಾಡಿ ಇಲಾಖೆಗೆ ದಾಖಲೆಗಳನ್ನು ಒದಗಿಸುತ್ತಾರೆ. ತನ್ಮೂಲಕವಾಗಿ ರೈತರಿಗೆ ಸಮರ್ಪಕವಾದ ಎಲ್ಲ ಸೌಲಭ್ಯಗಳು ದೊರಕುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಉಪಸ್ಥಿತರಿದ್ದರು. ಬೆಳೆ ಸಮೀಕ್ಷೆಯ ತರಬೇತಿಯನ್ನು ಮುಲ್ಕಿ ತಾಲೂಕು ಕಚೇರಿಯ ತಾಂತ್ರಿಕ ವ್ಯವಸ್ಥಾಪಕ ಷಣ್ಮುಖ ಅವರು ನೀಡಿದರು.