ಉಡುಪಿ,(ಫೆಬ್ರವರಿ 23): ಆಯುಷ್ಮಾನ್ ಕಾರ್ಡ್ ನಿಂದ ನೆರವು ಪಡೆಯಲು ಇರುವ ಅರ್ಹತೆಗಳ ಕುರಿತಂತೆ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಹಲವು ಗೊಂದಲಗಳಿದ್ದು, ಯೋಜನೆಯಲ್ಲಿನ ಅರ್ಹತೆಗಳ ಕುರಿತು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ತರಬೇತಿ ಆಯೋಜಿಸಿ, ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು. ಅವರು ಮಂಗಳವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

     ಆಯುಷ್ಮಾನ್ ಕಾರ್ಡ್ ಹೊಂದಿರುವ ರೋಗಿಯು ಯಾವ ಸಂದರ್ಭದಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು, ಯಾವ ಚಿಕಿತ್ಸೆಗೆ ರೆಫರಲ್ ಪತ್ರ ತರಬೇಕು, ವೈದ್ಯರುಗಳು ಯೋಜನೆಯಲ್ಲಿನ ಯಾವ ಕಾಯಿಲೆಗಳಿಗೆ ರೆಫರಲ್ ಪತ್ರ ನೀಡಬೇಕು, ತುರ್ತು ಸಂದರ್ಭದಲ್ಲಿ ಎಲ್ಲಿ ದಾಖಲಾಗಬೇಕು ಎಂಬ ಬಗ್ಗೆ ರೋಗಿ ಹಾಗೂ ವೈದ್ಯರಿಗೂ ಸಹ ಹಲವು ಗೊಂದಲಗಳಿದ್ದು, ಇದನ್ನು ಬಗೆಹರಿಸಲು, ಜಿಲ್ಲೆಯ ಸರ್ಕಾರಿ ವೈದ್ಯರುಗಳಿಗೆ ಶೀಘ್ರದಲ್ಲಿ ತರಬೇತಿ ಆಯೋಜಿಸಿ ಎಂದು ದಿನಕರ ಬಾಬು ಸೂಚಿಸಿದರು.

     ಜಿಲ್ಲೆಯ ಎಲ್ಲಾ ಆಂಬುಲೆನ್ಸ್ ಚಾಲಕರಿಗೂ ಸಹ ತರಬೇತಿ ಆಯೋಜಿಸಿ, ಯೋಜನೆಯ ಸಮಗ್ರ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ ತಿಳಿಸಿದರು.

     ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಇದುವರೆಗೆ ಶೇ.137 ರಷ್ಟು ಸಾಧನೆ ಅಗಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿನ ಕೆರೆ ಮತ್ತು ತೋಡುಗಳ ಹೂಳೆತ್ತುವ ಕಾಮಗಾರಿಗಳನ್ನು ಆದ್ಯತೆಯಲ್ಲಿ ತೆಗೆದುಕೊಳ್ಳುವಂತೆ ತಿಳಿಸಿದ ಅಧ್ಯಕ್ಷರು, ಹೂಳೆತ್ತಿದ ನಂತರ ಮಣ್ಣಿನಿಂದ ಜೆಡ್ಡುಗಳನ್ನು ನಿರ್ಮಿಸಿ, ಜಿಲ್ಲೆಯಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಿ, ಉದ್ಯೋಗ ಖಾತರಿ ಯೋಜನೆಯಿಂದ ಬಾವಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಿ ಎಂದರು.

     ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಒಣ ತ್ಯಾಜ್ಯ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಕಾರ್ಕಳದಲ್ಲಿ ಎಂಆರ್‌ಎಫ್ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು  ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹೇಳಿದರು.

     ಜಿಲ್ಲೆಯಲ್ಲಿ 6 ನೇ ತರಗತಿಯಿಂದ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ತೆರೆದಿದ್ದು, ಇದುವರೆಗೂ ಯಾವುದೇ ಮಕ್ಕಳಲ್ಲಿ ಕೋವಿಡ್ ಕಂಡುಬoದಿರುವುದಿಲ್ಲ. ಎಸ್.ಓ.ಪಿ. ಪ್ರಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣದಲ್ಲಿ ಜಿಲ್ಲೆಯು ರಾಜ್ಯದಲ್ಲಿ 3 ನೇ ಸ್ಥಾನದಲ್ಲಿದೆ ಎಂದು ಡಿಡಿಪಿಐ ಮಾಹಿತಿ ನೀಡಿದರು.

     ಖಾಸಗಿ ಶಾಲೆಗಳಲ್ಲಿ ತರಗತಿಗೆ ಹಾಜರಾಗದೇ, ಆನ್‌ಲೈನ್ ತರಗತಿಯಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಿ ಎಂದು ಸುಮಿತ್ ಶೆಟ್ಟಿ ಹೇಳಿದರು.

    ಇದೇ ಸಂದರ್ಭದಲ್ಲಿ ಮ್ಯಾನುವೆಲ್ ಸ್ಕಾವೆಂರ‍್ಸ್ ನಿಷೇಧ ಕುರಿತ ಕರಪತ್ರವನ್ನು  ಬಿಡುಗಡೆಗೊಳಿಸಲಾಯಿತು.

     ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಶಿಕ್ಷಣಾ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಉಪಸ್ಥಿತರಿದ್ದರು.