ಮಂಗಳೂರು: ಖ್ಯಾತ ಯಕ್ಷಗಾನ ಕಲಾವಿದ,ತಾಳಮದ್ದಳೆ ಅರ್ಥಧಾರಿ, ಕಲಾಗುರು,ಸಂಘಟಕ, ಸತೀಶ್ ಆಚಾರ್ಯ ಮಾಣಿ ಅವರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನ ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ನಡೆಯಿತು.
"ವಾಗೀಶ್ವರಿ ಕಾಲವರ್ಧಕ ಸಂಘ ಶತಮಾನೋತ್ಸವ ಆಚರಿಸುತ್ತಿದೆ ಅಂದರೆ ನಿಜವಾಗಿಯೂ ಅಪೂರ್ವ ಸಾಧನೆ. ಧನ ಸಂಗ್ರಹ ಮಾಡಬಹುದು, ಜನ ಸಂಗ್ರಹ ಕಷ್ಟ. ಆದರೆ ಶ್ರೀ ವಾಗೀಶ್ವರೀ ಯಕ್ಷಗಾನ ಸಂಘದಲ್ಲಿ ನಿರಂತರ ವಾಗಿ ೧೦೦ ವರ್ಷ ಗಳ ಅದೆಷ್ಟೋ ಕಲಾವಿದರು ಸೇವೆ ಸಲ್ಲಿಸಿ ಈ ಸಂಘವನ್ನು ಬೆಳೆಸಿದ್ದಕ್ಕೆ ಅವರೆಲ್ಲರೂ ವಂದನೀಯರು" ಎಂದು ತಮ್ಮ ಹೇಮಾ ಡಿಸ್ಟ್ರಿಬ್ಯೂಟರ್ಸ್ ನ ಮಾಲಕ ಅಶೋಕ್ ಕುಮಾರ್ ಹೆಗ್ಡೆ ಅವರು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಮುಂಡಪ್ಪ ಕೊಮ್ಮುಂಜೆ ಸಂಸ್ಮರಣೆ ಕೀರ್ತಿಶೇಷ ಕೆ. ಮುಂಡಪ್ಪ ನವರ ಸಂಸ್ಮರಣೆಯನ್ನು ಸಂಘದ ಸದಸ್ಯರು, ಭಾಗವತರಾದ ಅಶೋಕ್ ಬೋಳೂರ್ ರವರು ಮಾಡಿದರು. ಯಕ್ಷಗಾನದಲ್ಲಿ ಹಾಸ್ಯ ವೇಷಧಾರಿಯಾಗಿ, ಬಣ್ಣದ ವೇಷಧಾರಿಯಾಗಿ ಪ್ರಸಿದ್ಧಿ ಪಡೆದಿದ್ದವರು.
ಮುಂದೆ ಯಕ್ಷಗಾನದ ಪರಿಕರಗಳಾದ ಚೆಂಡೆ, ಮದ್ದಳೆ ತಯಾರಿಯ ಕಾರ್ಯಕ್ಕೆ ತೊಡಗಿಸಿಕೊಂಡರು.ಮಂಗಳೂರು ನಗರದ ಪರಿಸರದಲ್ಲಿ ಪರಿಕರಗಳ ತಯಾರಿಯಲ್ಲಿ ಹಲವು ಶಿಷ್ಯರನ್ನು ನೀಡಿದ ಕೀರ್ತಿ ಮುಂಡಪ್ಪಣ್ಣನವರಿಗೆ ಸಲ್ಲುತ್ತದೆ. ನಮ್ಮ ಸಂಘದ ಜತೆ ನಿಕಟ ಸಂಬಂಧ ಹೊಂದಿದ್ದ ಮುಂಡಪ್ಪಣ್ಣ ನವರ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ಮಾಣಿ ಸತೀಶ್ ಆಚಾರ್ಯ ರ ಅಭಿನಂದನೆಯನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ. ಎಸ್. ಭಂಡಾರಿ ಯವರು ನಿರ್ವಹಿಸಿದರು. " ಬಂಗಾರದ ಕುಸುರಿ ಕೆಲಸಕ್ಕೆ ಮಂಗಳೂರಿಗೆ ಬಂದು ಎಳವೆಯಲ್ಲಿಯೇ ಶೇಣಿ, ತೆಕ್ಕಟ್ಟೆ, ಪ್ರಭಾಕರ ಜೋಶಿ ಯವರ ಅರಥಗಾರಕೆಯನ್ನು ನೋಡಿ ಪ್ರೇರೇಪಣೆ ಗೊಂಡು, ಕೀರ್ತಿಶೇಷ ಎನ್.ಮಾಧವ ಆಚಾರ್ಯ ರ ಶಿಷ್ಯರಾಗಿ ಈಗ ಸಮರ್ಥ ತಾಳಮದ್ದಳೆ ಅರ್ಥಧಾರಿ ಯಾಗಿ, ದೇರಣ್ಣ ಅಮೀನ್ ಅವರಿಂದ ನಾಟ್ಯ ಕಲಿತು ವೇಷಧಾರಿಯಾಗಿ, ನಾಟ್ಯ- ಅರ್ಥಗಾರಿಕೆ ಯನ್ನು ಅದೆಷ್ಟೋ ಮಕ್ಕಳಿಗೆ ಕಲಿಸಿ ಯಕ್ಷಗುರು ಎಂದೆನಿಸಿ, ಹಲವಾರು ಸಂಘಗಳಿಂದ ಹಲವಾರು ಬಿರುದು ಸನ್ಮಾನ ಗಳನ್ನು ಪಡೆದು ಸಮರ್ಥ ಕಲಾವಿದ ಎಂದೆನಿಸಿ, ಮುಂದಿನ ಯಕ್ಷಗಾನ ಪೀಳಿಗೆಗೂ ಕೊಡುಗೆ ಯನ್ನು ನೀಡಿದವರು ಸತೀಶ್ ಆಚಾರ್ಯ ಮಾಣಿ " ಎಂದರು.
ಪುರಂದರ ರವರು ಸಂಮಾನ ಪತ್ರ ವಾಚಿಸಿದರು.
ಶ್ರೀ ವಾಗೀಶ್ವರೀ ಕಲಾವರ್ಧಕ ಸಂಘದ ೧೨ ನೆಯ ಸರಣಿಯ ಸನ್ಮಾನಕ್ಕೆ ಉತ್ತರಿಸಿದ ಶ್ರೀ ಸತೀಶ್ ಆಚಾರ್ಯರು "ಇಂದು ನಾನು ಈ ಮಟ್ಟದ ಕಲಾವಿದ ನಾಗಿ ಬೆಳೆಯಲು ವಾಗೀಶ್ವರಿ ಸಂಘವೇ ಕಾರಣ ಮತ್ತು ಈ ಸಂಘದಲ್ಲಿ ನನ್ನ ಗುರು ಮಾಧವ ಆಚಾರ್ಯ ರ ಮಾರ್ಗದರ್ಶನ, ಬಿ. ಟಿ. ಕುಲಾಲ್, ಕದ್ರಿ ನವನೀತ ಶೆಟ್ಟಿ, ಪಿ.ವಿ.ಪರಮೇಶ್ ಮೊದಲಾದ ಹವ್ಯಾಸಿ ಕಲಾವಿದರೊಂದಿಗಿನ ತನ್ನ ಸಾಹಚರ್ಯವನ್ನು ನೆನಪಿಸಿಕೊಂಡರು. ಸುದೀರ್ಘ ಕಾಲ ತಾಳಮದ್ದಳೆ ಮತ್ತು ಯಕ್ಷಗಾನದಲ್ಲಿ ತಾನು ಸೇವೆಯನ್ನು ಸಲ್ಲಿಸಿದ್ದೇನೆ. ಇಂದಿನ ಸಮ್ಮಾನ ಅವಿಸ್ಮರಣೀಯ ಎಂದರು.
ಮುಖ್ಯ ಅತಿಥಿ ಜಗನ್ನಾಥ ಭಂಡಾರಿ ಯವರು ಶುಭ ಹಾರೈಸಿದರು. ಪ್ರಭಾಕರ್ ಕಾಮತರು ಭಾಗವಹಿಸಿದ್ದರು. ಶ್ರೀ ಪ್ರಭಾಕರ ಕಾಮತರು ಈ ಯಕ್ಷಗಾನಕ ಸಂಘದ ಶತ ಮಾನೋತ್ಸವ ಆಚರಿಸಲು ಈವರೆಗೆ ಪ್ರತಿ ವಾರ ಭಾಗವಹಿಸಿದ ಕಲಾವಿದರ ಮತ್ತು ಪ್ರೇಕ್ಷಕರ ಕೊಡುಗೆ ಅಪಾರ ಎಂದರು .ನಾಗೇಶ ಪ್ರಭು, ಶಿವಪ್ರಸಾದ್ ಪ್ರಭು ,ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು ,ಪ್ರಭಾಕರ ಕಾಮತ್ ಉಪಸ್ಥಿತರಿದ್ದರು. ಸಿ .ಎಸ್. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಕಲಾವಿದರಿಂದ "ಸೀತಾನ್ವೇಷಣೆ" ತಾಳಮದ್ದಳೆ ಜರಗಿತು.