ಹಂಝ ಮಲಾರ್
ಪ್ರತೀ ಬಾರಿ ಮಂಗಳೂರು ವಿವಿಯ ಘಟಿಕೋತ್ಸವ ಸಂದರ್ಭ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುವಾಗಲೆಲ್ಲಾ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ವಿವಿಯ ಉನ್ನತ ಸ್ಥಾನದಲ್ಲಿರುವರು ಮರೆತುಬಿಡುತ್ತಿದ್ದಾರೆ ಎಂಬ ಕೊರಗು ನನಗಿತ್ತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದರೂ ಕೂಡ ಹಾಜಬ್ಬರನ್ನು ಮಂಗಳೂರು ವಿವಿ ಗುರುತಿಸಿಲ್ಲ, ಮನ್ನಣೆ ನೀಡಿಲ್ಲ ಎಂಬ ಅಸಮಾಧಾನವೂ ಇತ್ತು. ಯಾಕೆಂದರೆ ಕೊಣಾಜೆ ಗ್ರಾಮದಲ್ಲಿರುವ ಮಂಗಳೂರು ವಿವಿಯ ಪಕ್ಕದಲ್ಲೇ ಹಾಜಬ್ಬರ ಹರೇಕಳ ಗ್ರಾಮವಿದೆ. ಅಂದರೆ ಮಂಗಳೂರು ವಿವಿಯಿಂದ ಕೇವಲ 3 ಕಿ.ಮೀ. ಅಂತರದಲ್ಲಿ ಹರೇಕಳ ಹಾಜಬ್ಬರ ಮನೆಯಿದೆ. ಕಳೆದ ಎರಡು ವರ್ಷದಿಂದ ಹರೇಕಳ ಹಾಜಬ್ಬರಿಗೆ ಗೌರವ ಡಾಕ್ಟರೇಟ್ ಲಭಿಸಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪಟ್ಟಿಯಿಂದ ಅವರ ಹೆಸರು ಕಣ್ಮರೆಯಾದಾಗ ನನಗೆ ಆಗುತ್ತಿದ್ದ ಹತಾಶೆ ಅಷ್ಟಿಷ್ಟಲ್ಲ. ಈ ಬಾರಿ ಹಾಜಬ್ಬರಿಗೆ ಗೌರವ ಡಾಕ್ಟರೇಟ್ ಲಭಿಸಲಿದೆ ಎಂಬ ಸಂತಸದ ಸುದ್ದಿಯ ಸುಳಿವು ನನಗೆ ಹತ್ತು ದಿನದ ಹಿಂದೆಯೇ ಸಿಕ್ಕಿತ್ತು. ಆದರೆ ಯಾರಲ್ಲೂ ಮಾಹಿತಿ ಹಂಚಿಕೊಳ್ಳಬಾರದು ಎಂಬ ಸೂಚನೆಯೂ ಮೇಲಿನಿಂದ ಇತ್ತು. ಹಾಗಾಗಿ ನಾನು ಅನಿವಾರ್ಯವಾಗಿ ಸುಮ್ಮನಿರಬೇಕಾಯಿತು. ಎಲ್ಲಿಯವರೆಗೆ ಅಂದರೆ ಸ್ವತಃ ಹಾಜಬ್ಬರಿಗೂ ಹೇಳಲಾಗದ ಸಂಕಷ್ಟ ನನ್ನದಾಗಿತ್ತು. ಇನ್ನು ಮಾರ್ಚ್ 28ರ ಶನಿವಾರ ಅಂದರೆ ಘಟಿಕೋತ್ಸವದ ದಿನ ಹಾಜಬ್ಬರು ಬೇರೆ ಕಾರ್ಯಕ್ರಮಕ್ಕೆ ಒಪ್ಪಿಕೊಂಡರೆ ಕಷ್ಟ ಎಂದರಿತ ನಾನು ವಿವಿ ಕುಲಪತಿಯ ಒಪ್ಪಿಗೆ ಪಡೆದು ಹಾಜಬ್ಬರ ಸಹೋದರನ ಪುತ್ರ ಅಶ್ರಫ್ಗೆ ಸಣ್ಣದೊಂದು ಸುಳಿವು ನೀಡಿಬಿಟ್ಟೆ.

ಈವತ್ತು ಪೂರ್ವಾಹ್ನ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಸುದ್ದಿಗೋಷ್ಠಿಯಲ್ಲಿ ಈ ಸಂತಸದ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡು ಸಂಭ್ರಮಿಸಿದರು. ಇನ್ನೀಗ ನಮ್ಮ ಹಾಜಬ್ಬರು ಗೌರವ ಡಾಕ್ಟರೇಟ್ ಪುರಸ್ಕೃತರು. ನಾಳೆ (ಮಾರ್ಚ್ 28ರ ಶನಿವಾರ ಪೂರ್ವಾಹ್ನ 11ಕ್ಕೆ) ರಾಜ್ಯಪಾಲರು ಹಾಜಬ್ಬರಿಗೆ ಗೌರವ ಡಾಕ್ಟರೇಟ್ ನೀಡಲಿದ್ದಾರೆ.
ತಡವಾಗಿಯಾದರೂ ಹಾಜಬ್ಬರಿಗೆ ಅರ್ಹವಾಗಿ ಈ ಗೌರವ ಸಂದಿದೆ. ತಾನು ಮಂಗಳೂರು ವಿವಿಯ ಕುಲಪತಿ ಆಗಿರುವಾಗಲೇ ಹಾಜಬ್ಬರಿಗೆ ಗೌರವ ಡಾಕ್ಟರೇಟ್ ಸಿಗುವಂತಾಗಬೇಕು ಎಂದು ಕುಲಪತಿ ಪ್ರೊ. ಪಿ.ಎಲ್. ಧರ್ಮ ಪಟ್ಟು ಹಿಡಿದು ಶ್ರಮಿಸಿದ್ದು ಬಹುತೇಕ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಆದರೆ ನನಗೆ ಅದು ಚೆನ್ನಾಗಿ ಗೊತ್ತಿತ್ತು. ಅವರ ಪ್ರಯತ್ನಕ್ಕೆ ವಿವಿಯ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮನ್ನಣೆ ನೀಡಿರುವುದು ಖುಷಿಯ ಸಂಗತಿ. ಒಟ್ಟಿನಲ್ಲಿ ಪದ್ಮಶ್ರೀ ಪುರಸ್ಕೃತರಾದ ನಮ್ಮ ಹಾಜಬ್ಬರು ಇನ್ನೀಗ ಗೌರವ ಡಾಕ್ಟರೇಟ್ ಪುರಸ್ಕೃತರು. ನಾವೆಲ್ಲಾ ಅವರನ್ನು ಗೌರವಿಸೋಣ. ಅದಕ್ಕಾಗಿ ಶ್ರಮಿಸಿದ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರನ್ನು ಅಭಿನಂದಿಸೋಣ. ತೆರೆಮರೆಯಲ್ಲಿದ್ದ ಹಾಜಬರ ಸೇವೆಯನ್ನು ಗುರುತಿಸಿ ಮುಖ್ಯವಾಹಿನಿಗೆ ತಂದವರನ್ನೂ ನೆನಪಿಸೋಣ.
