ಮೂಡುಬಿದಿರೆ: ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ನಡೆಯಲಿರುವ ದ್ವಿತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ 21, ಶನಿವಾರದಂದು ಕಡಂದಲೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನೆರವೇರಲಿದ್ದು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಸಾಮಾಜಿಕ ಮುಂದಾಳು ಸುಚರಿತ ಶೆಟ್ಟಿಯವರು ಆಯ್ಕೆಯಾಗಿರುತ್ತಾರೆ.

ಫೆಬ್ರವರಿ 2ರಂದು ಕಡಂದಲೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಪರಿಷತ್ತಿನ ಪದಾಧಿಕಾರಿಗಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಪರಿಷತ್ತಿನ ಕೋಶಾಧ್ಯಕ್ಷರಾದ ಅಂಡಾರು ಗುಣಪಾಲ ಹೆಗ್ಡೆಯವರು ಪ್ರಸ್ತಾವಿಕ ಮಾತುಗಳನ್ನಾಡಿದರು, ತಾಲೂಕು ಅಧ್ಯಕ್ಷರಾದ ಕೆ.ವೇಣುಗೋಪಾಲ ಶೆಟ್ಟಿಯವರು ಸಮ್ಮೇಳನದ ರೂಪುರೇಷೆಗಳನ್ನು ಸಭೆಯ ಮುಂದೆ ಮಂಡಿಸಿದರು. ಕಡಂದಲೆ ಅಸುಪಾಸಿನಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳ ಸಹಕಾರವನ್ನು ಅಪೇಕ್ಷಿಸಲಾಯಿತು. ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ ಹೋಬಳಿ ಅಧ್ಯಕ್ಷರಾದ ರಾಮಕೃಷ್ಣ ಶಿರೂರು ವಂದಿಸಿದರು.
